ಶಿವಮೊಗ್ಗ: ಶಿವಮೊಗ್ಗ ತಾಲ್ಲೂಕಿನ ಮೇಲಿನ ಹನಸವಾಡಿ ಗ್ರಾಮಕ್ಕೆ ಇಂದು ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಭೇಟಿ ನೀಡಿದರು. ಬಹು ದಿನಗಳಿನಿಂದ ಗ್ರಾಮಸ್ಥರು ಅಪೇಕ್ಷಿಸುತ್ತಿದ್ದ ದರ್ಶನ ಇಂದು ನೆರವೇರಿದ್ದು, ಗ್ರಾಮ ಭಕ್ತಿಭಾವದಿಂದ ಕೂಡಿತ್ತು.
ಮಹಾಸ್ವಾಮಿಗಳು ಶ್ರೀ ನಂದಿಬಸವೇಶ್ವರ ದೇವಾಲಯಕ್ಕೆ ಆಗಮಿಸಿ ದೈವದರ್ಶನ ಪಡೆದರು. ದೇವಾಲಯದ ಪವಿತ್ರ ವಾತಾವರಣವನ್ನು ಕಂಡು ಸಂತಸ ವ್ಯಕ್ತಪಡಿಸಿದ ಅವರು, ಹನಸವಾಡಿಯಲ್ಲಿ ಕಳೆದ ತಮ್ಮ ಬಾಲ್ಯದ ದಿನಗಳು ಹಾಗೂ ಈ ದೇಗುಲದೊಂದಿಗೆ ಹೊಂದಿದ್ದ ಒಡನಾಟವನ್ನು ಭಾವಪೂರ್ಣವಾಗಿ ಸ್ಮರಿಸಿದರು. ಸುತ್ತಮುತ್ತಲಿನ ಗ್ರಾಮಗಳ ಪರಿಸರದಲ್ಲಿ ನನ್ನ ಬಾಲ್ಯ ಕಳೆದಿದ್ದು, ಇಲ್ಲಿ ಪಡೆದ ಸಂಸ್ಕಾರಗಳು ನನ್ನ ಜೀವನದ ಆಧ್ಯಾತ್ಮಿಕ ದಾರಿಯನ್ನು ಗಟ್ಟಿಗೊಳಿಸಿದ್ದವು,” ಎಂದು ಅವರು ಅಭಿವ್ಯಕ್ತಿಯಿಂದ ಹೇಳಿದರು.

ಗ್ರಾಮಸ್ಥರಿಗೆ ಆಶೀರ್ವಚನ ನೀಡಿದ ಮಹಾಸ್ವಾಮಿಗಳು, ಜೀವನದಲ್ಲಿ ಮಾನವೀಯ ಮೌಲ್ಯಗಳ ಮಹತ್ವವನ್ನು ವಿವರಿಸಿದರು. “ನಮ್ಮ ನಡೆ–ನುಡಿ, ನಂಬಿಕೆ ಮತ್ತು ಕಾರ್ಯಗಳಲ್ಲಿ ಸತ್ಯ ಮುಖ್ಯ. ಧರ್ಮವು ಕೇವಲ ಆಚರಣೆ ಮಾತ್ರವಲ್ಲ, ಅದು ನಮ್ಮ ನಡೆ ಮತ್ತು ಸ್ವಭಾವದಲ್ಲಿ ಕಾಣಿಸಬೇಕು. ಪರೋಪಕಾರವೆಂದರೆ ಕೇವಲ ಸಹಾಯ ಮಾಡುವುದು ಅಲ್ಲ, ಒಬ್ಬರ ಅಳಲನ್ನು ಅರ್ಥಮಾಡಿಕೊಳ್ಳಿ ನೆರವಾದಾಗ ಅದರ ಮೌಲ್ಯ ಹೆಚ್ಚುತ್ತದೆ,” ಎಂದು ಅವರು ತಿಳಿಸಿದರು.

ಸಮಾಜದ ಬಲ ಪರಸ್ಪರ ವಿಶ್ವಾಸ ಮತ್ತು ಒಗ್ಗಟ್ಟಿನಲ್ಲಿ ಇರುತ್ತದೆ ಎಂದು ಗುರುಗಳು ಹೇಳಿದರು. ಪ್ರತಿಯೊಬ್ಬನು ಇತರರಿಗಾಗಿ ಕೆಲಸ ಮಾಡಿದಾಗ ಮಾತ್ರ ಗ್ರಾಮ, ಸಮಾಜ ಮತ್ತು ದೇಶ ಪ್ರಗತಿಯ ದಾರಿಗೆ ಸಾಗುತ್ತದೆ ಎಂದು ಅವರು ಭಾವಪೂರ್ಣವಾಗಿ ಒತ್ತಿ ಹೇಳಿದರು.
“ಸತ್ಯವಾಗಿ ಬದುಕುವುದು, ಧರ್ಮ ಪಾಲಿಸುವುದು ಮತ್ತು ಇತರರಿಗೆ ಸಹಾಯ ಮಾಡುವುದು — ಇವೇ ಮಾನವ ಜೀವನದ ನಿಜವಾದ ಸಂಪತ್ತು. ಈ ಮೌಲ್ಯಗಳನ್ನು ಉಳಿಸಿಕೊಂಡಾಗ ಮಾತ್ರ ನಮ್ಮ ಜೀವನ ಸುಂದರವಾಗುತ್ತದೆ. ಹನಸವಾಡಿ ಗ್ರಾಮ ಸದಾ ಆರೋಗ್ಯ, ಶಾಂತಿ ಮತ್ತು ಐಶ್ವರ್ಯದಿಂದ ತುಂಬಿರಲಿ,” ಎಂದು ಮಹಾಸ್ವಾಮಿಗಳು ಹೇಳಿದರು.
ಗ್ರಾಮದ ಮಕ್ಕಳ ಡೊಳ್ಳುಕುಣಿತದ ಪ್ರದರ್ಶನವನ್ನು ಗಮನಿಸಿದ ಮಹಾಸ್ವಾಮಿಗಳು, ಅವರ ಕಲೆ ಮತ್ತು ಸಂಸ್ಕೃತಿ ಪ್ರೇಮವನ್ನು ಪ್ರಶಂಸಿಸಿದರು. ಮಕ್ಕಳಿಗೆ ವಚನಗಳ ಅರ್ಥವನ್ನು ಸರಳವಾಗಿ ತಿಳಿಸಿ, ಜೀವನದಲ್ಲಿ ಜ್ಞಾನ ಮತ್ತು ನಡತೆ ಹೇಗೆ ಮುಖ್ಯವೆಂಬುದನ್ನು ಉದಾಹರಣೆಗಳ ಮೂಲಕ ವಿವರಿಸಿದರು. ಇದೇ ಸಂದರ್ಭದಲ್ಲಿ “ಬಿಸಿಲು–ಬೆಳದಿಂಗಳ ಲೇಖನ”ವನ್ನು ಮಕ್ಕಳಿಗೆ ಓದಿಸಿ, ಅದರ ಅರ್ಥ, ಮಾನವೀಯ ಮೌಲ್ಯಗಳು ಮತ್ತು ಸಮಾಜ ಸೇವೆಯ ಸಂದೇಶವನ್ನು ಅವರಿಗೆ ಸುಲಭವಾಗಿ ಅರ್ಥವಾಗುವಂತೆ ತಿಳಿಸಿದರು. ಮಕ್ಕಳೊಂದಿಗೆ ಕೆಲವು ಸಮಯ ಕಳೆದ ಗುರುಗಳು, ಅವರ ಪ್ರತಿಭೆಯನ್ನು ಮೆಚ್ಚಿ ಎಲ್ಲರಿಗೂ ಆಶೀರ್ವಾದಿಸಿದರು.
ಶ್ರೀ ನಂದಿಬಸವೇಶ್ವರ ಸೇವಾ ಸಮಿತಿ ಮತ್ತು ಮೇಲಿನ ಹನಸವಾಡಿ ಗ್ರಾಮಸ್ಥರು ಮಹಾಸ್ವಾಮಿಗಳಿಗೆ ಗೌರವ ಸಮರ್ಪಿಸಿದರು. ಭಕ್ತಿಭಾವದಿಂದ ಶ್ರೀಗಳಿಗೆ ಪಾದ ಪೂಜೆ ಮತ್ತು ಸಾಂಪ್ರದಾಯಿಕ ಸ್ವಾಗತದ ಮೂಲಕ ಗ್ರಾಮಸ್ಥರು ತಮ್ಮ ಆತ್ಮೀಯತೆ ಮತ್ತು ಶ್ರದ್ಧೆಯನ್ನು ವ್ಯಕ್ತಪಡಿಸಿದರು.











