ಬೆಳಗಾವಿ: ಸುವರ್ಣಸೌಧದ ಬಳಿ ವಿವಿಧ ಸಂಘಟನೆಗಳು ನಡೆಸುತ್ತಿದ್ದ ಪ್ರತಿಭಟನಾ ಕಾರ್ಯಕ್ರಮಗಳಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರೊಂದಿಗೆ ಭೇಟಿ ನೀಡಿ, ಮೂರು ಪ್ರಮುಖ ಬೇಡಿಕೆಗಳ ಕುರಿತಂತೆ ಅಹವಾಲುಗಳನ್ನು ಸ್ವೀಕರಿಸಿ ಸರ್ಕಾರದ ನಿಲುವು ಸ್ಪಷ್ಟಪಡಿಸಿದರು.
ಗಡಿಭಾಗದ ಸರ್ಕಾರಿ ಕನ್ನಡ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧ
ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಚಿವರು, ಗಡಿಭಾಗದ ಸರ್ಕಾರಿ ಕನ್ನಡ ಶಾಲೆಗಳ ಅಭಿವೃದ್ಧಿ ಸರ್ಕಾರದ ಮೊದಲ ಆಧ್ಯತೆ ಎಂದು ಹೇಳಿದರು.
“ಗಡಿಭಾಗದ ಕನ್ನಡ ಮಕ್ಕಳಿಗೆ ಶಿಕ್ಷಣದಲ್ಲಿ ಯಾವುದೇ ಕೊರತೆಯಾಗದಂತೆ ಹೊಸ ಕಾನೂನು ಜಾರಿಗೊಳಿಸಲಾಗಿದೆ. ಕನ್ನಡ ಶಾಲೆಗಳ ಬಲವರ್ಧನೆಗೆ ಸರ್ಕಾರ ಸಂಪೂರ್ಣ ಬದ್ಧ,” ಎಂದು ಅವರು ತಿಳಿಸಿದ್ದಾರೆ.
ಕರವೇ ಪ್ರತಿನಿಧಿಗಳು ಮಹಾರಾಷ್ಟ್ರ ಏಕೀಕರಣ ಸಮಿತಿಗೆ (ಎಂ.ಇ.ಎಸ್.) ನಿಷೇಧ ಹೇರಬೇಕೆಂದು ಒತ್ತಾಯಿಸಿದಾಗ, ಸರ್ಕಾರ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಸಚಿವರು ಭರವಸೆ ನೀಡಿದರು. ಜೊತೆಗೆ ಸುವರ್ಣಸೌಧವನ್ನು ನಿಜವಾದ ಆಡಳಿತ ಶಕ್ತಿ ಕೇಂದ್ರವಾಗಿಸಲು ಕಾರ್ಯದರ್ಶಿ ಮಟ್ಟದ ಕಚೇರಿಗಳನ್ನು ಬೆಳಗಾವಿಗೆ ಸ್ಥಳಾಂತರಿಸುವ ಮನವಿಗೂ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು.

ರೈತರ ಬೇಡಿಕೆಗಳ ಕುರಿತು ಪರಿಷ್ಕರಿಸುವ ಭರವಸೆ
‘ಬೆಳಗಾವಿ ಚಲೋ’ ಚಳವಳಿಯಡಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಡೆಸುತ್ತಿದ್ದ ಪ್ರತಿಭಟನಾ ವೇದಿಕೆಯಲ್ಲಿ ಸಚಿವರು ರೈತರ ಬೇಡಿಕೆಗಳನ್ನು ಆಲಿಸಿದರು. ಬೆಲೆಸಹಾಯ, ಬೆಳೆನಷ್ಟ ಪರಿಹಾರ, ನೀರೆರಿವು ಹಾಗೂ ಕೃಷಿ ನೀತಿ ಸುಧಾರಣೆ ಕುರಿತ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ತ್ವರಿತ ಪರಿಹಾರ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಸಚಿವರು ತಿಳಿಸಿದರು.
ರಾಜ್ಯದಾದ್ಯಂತದ ಸಾವಿರಾರು ರೈತರು, ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಪ್ರಮುಖ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕನ್ನಡ ಶಾಲೆ ಉಳಿಸಿ ಅಭಿಯಾನಕ್ಕೆ ಬೆಂಬಲ
ಅನುದಾನ ರಹಿತ ಶಾಲಾ–ಕಾಲೇಜುಗಳ ಆಡಳಿತ ಮಂಡಳಿ ಹಾಗೂ ನೌಕರರ ಒಕ್ಕೂಟ ಹಮ್ಮಿಕೊಂಡಿದ್ದ “ನಮ್ಮ ಕನ್ನಡ ಶಾಲೆ ಉಳಿಸಿ” ಅಭಿಯಾನದಲ್ಲೂ ಸಚಿವರು ಪಾಲ್ಗೊಂಡರು. 1995–2005ರ ನಡುವೆ ಸ್ಥಾಪಿತವಾದ ಕನ್ನಡ ಶಾಲೆಗಳಿಗೆ ವೇತನಾನುದಾನ ನೀಡುವ ಬೇಡಿಕೆಯನ್ನು ಕುರಿತು ಮಾತನಾಡಿದ ಅವರು, “ಕನ್ನಡ ಶಾಲೆಗಳನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆಯಲು ಸರ್ಕಾರ ಗಂಭೀರ ಪ್ರಯತ್ನ ಕೈಗೊಳ್ಳಲಿದೆ,” ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರುಗಳಾದ ಪುಟ್ಟಣ್ಣ, ಭೋಜೆಗೌಡ್ರು ಎಸ್.ವಿ. ಸಂಕನೂರ, ಡಿ.ಟಿ. ಶ್ರೀನಿವಾಸ್, ಹಣಮಂತ ನಿರಾಣಿ, ಧನಂಜಯ್ ಸರ್ಜಿ ಸೇರಿದಂತೆ ಹಲವು ನಾಯಕರು ಹಾಗೂ ರಾಜ್ಯದ ಶಿಕ್ಷಕರು ಹಾಜರಿದ್ದರು.
ಸುವರ್ಣಸೌಧದ ಬಳಿ ನಡೆದ ಈ ಸರಣಿ ಪ್ರತಿಭಟನೆಗಳಿಗೆ ಭೇಟಿ ನೀಡಿದ ಸಚಿವರು, ಗಡಿಭಾಗದ ಕನ್ನಡ ಶಿಕ್ಷಣ, ರೈತರ ಕಲ್ಯಾಣ ಹಾಗೂ ಕನ್ನಡ ಶಾಲೆಗಳ ರಕ್ಷಣೆಯ ಕಡೆ ಸರ್ಕಾರ ಗಂಭೀರವಾಗಿದೆ ಎಂದು ಪುನರುಚ್ಚರಿಸಿದರು.






