ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಲಿಕಾಪ್ಟರ್ ಮತ್ತು ವಿಶೇಷ ವಿಮಾನ ಬಳಕೆಗೆ ಸಂಬಂಧಿಸಿದ ವೆಚ್ಚದ ವಿವರಗಳು ಬೆಳಕಿಗೆ ಬಿದ್ದ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ ಆರಂಭವಾಗಿದೆ. ‘ಅಹಿಂದ ನಾಯಕ’ ಎಂದು ರಾಜ್ಯ ರಾಜಕೀಯದಲ್ಲಿ ಗುರುತಿಸಲ್ಪಟ್ಟಿರುವ ಸಿದ್ದರಾಮಯ್ಯ ಅವರು 2023ರಲ್ಲಿ ಮುಖ್ಯಮಂತ್ರಿ ಆದ ನಂತರದಿಂದ 2025ರ ನವೆಂಬರ್ ವರೆಗೆ ಅಧಿಕೃತ ಪ್ರವಾಸಗಳಿಗೆ ಸರ್ಕಾರದ ಖಜಾನೆಯಿಂದ ಒಟ್ಟು 47,38,24,347 ರೂಪಾಯಿ ಖರ್ಚಾಗಿದೆ ಎಂದು ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಸ್ಪಷ್ಟಪಡಿಸಿದೆ. ಪರಿಷತ್ ಸದಸ್ಯ ಎನ್. ರವಿಕುಮಾರ್ ಕೇಳಿದ ಪ್ರಶ್ನೆಗೆ ಉತ್ತರವಾಗಿ ನೀಡಲಾದ ಈ ಅಂಕಿಅಂಶವು, ಸಿಎಂ ರಾಜ್ಯದ ಹಲವು ಜಿಲ್ಲೆಗಳ ಪರಿಶೀಲನಾ ಪ್ರವಾಸಗಳು, ಕಾರ್ಯಕ್ರಮಗಳು ಹಾಗೂ ದೆಹಲಿ, ಹೈದ್ರಾಬಾದ್, ಚೆನ್ನೈ ಮೊದಲಾದ ನಗರಗಳಿಗೆ ನಡೆದ ಅಧಿಕೃತ ಸಭೆ–ಸಮಾಲೋಚನೆಗಳಿಗೆ ಹೆಲಿಕಾಪ್ಟರ್ ಮತ್ತು ವಿಶೇಷ ವಿಮಾನ ಬಳಸಿರುವುದನ್ನು ಸೂಚಿಸುತ್ತದೆ.

ಮೈಸೂರಿನ ಕಾರ್ಯಕ್ರಮಗಳ ನಿಮಿತ್ತ ನಡೆದ ಸಿಎಂ ಪ್ರವಾಸಗಳಿಗೆ ಮಾತ್ರ 5 ಕೋಟಿಗೂ ಹೆಚ್ಚು ಹಣ ವೆಚ್ಚವಾಗಿರುವುದು ದಾಖಲೆಗಳಿಂದ ತಿಳಿದುಬಂದಿದೆ. ಈ ಮಾಹಿತಿ ಬಹಿರಂಗವಾದ ನಂತರ ವಿರೋಧಪಕ್ಷಗಳು “ಸಾರ್ವಜನಿಕ ಹಣದ ದುರುಪಯೋಗ”, “ಸರ್ಕಾರದ ಬೊಕ್ಕಸಕ್ಕೆ ಅನಗತ್ಯ ಹೊರೆ” ಎಂಬ ಟೀಕೆಗಳನ್ನು ಮಾಡುತ್ತಿವೆ. ಅಹಿಂದ ಹಿತಾಸಕ್ತಿ ಮತ್ತು ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಮಾತನಾಡುವ ನಾಯಕನಾಗಿ, ಸಿಎಂ ವೆಚ್ಚದ ವಿಷಯದಲ್ಲಿ ಹೆಚ್ಚು ಜವಾಬ್ದಾರಿ ತೋರಬೇಕಿತ್ತು ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
ಇದರ ವಿರುದ್ಧವಾಗಿ, ಸರ್ಕಾರ “ಪ್ರತಿಯೊಂದು ವಿಮಾನಯಾನವೂ ಅಧಿಕೃತ ಕರ್ತವ್ಯ, ಆಡಳಿತ ಚಟುವಟಿಕೆಗಳ ಪರಿಶೀಲನೆ ಮತ್ತು ಕೇಂದ್ರದೊಂದಿಗೆ ಸಮಾಲೋಚನೆಗಾಗಿ ನಡೆಸಲಾಗಿದೆ. ಸಿಎಂ ಪ್ರವಾಸಗಳು ಆಡಳಿತಾತ್ಮಕ ಅಗತ್ಯ” ಎಂದು ಸ್ಪಷ್ಟಪಡಿಸಿದೆ. ಈ ಅಂಕಿಅಂಶಗಳು ಹೊರಬಿದ್ದ ಹಿನ್ನೆಲೆಯಲ್ಲಿ ಸಿಎಂನ ಪ್ರವಾಸ ವೆಚ್ಚ, ಅದರ ಅವಶ್ಯಕತೆ ಮತ್ತು ಸಾರ್ವಜನಿಕ ಹಣದ ಬಳಕೆಯ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ ಮತ್ತಷ್ಟು ತೀವ್ರವಾಗಿದೆ.






