ಬೆಳಗಾವಿ: ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರವೇ ನಿಗದಿಪಡಿಸಿರುವ ಕನಿಷ್ಠ ವೇತನ ಪಾವತಿಯಲ್ಲಿ ಉಂಟಾಗಿರುವ ಗಂಭೀರ ಉಲ್ಲಂಘನೆ ಕುರಿತು ರಾಜ್ಯ ಬಿಜೆಪಿ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್ ಅವರು ಇಂದು ಪ್ರಶ್ನೋತ್ತರ ಕಲಾಪದಲ್ಲಿ ಗಮನಾರ್ಹ ವಿಷಯ ಮಂಡಿಸಿದರು.
ರಾಜ್ಯಾದ್ಯಂತ ಸಾವಿರಾರು ಗ್ರಂಥಪಾಲಕರು ತಿಂಗಳ ಕನಿಷ್ಠ ವೇತನಕ್ಕೂ ವಂಚಿತರಾಗುತ್ತಿರುವ ಕುರಿತು ಹಲವೆಡೆಗಳಿಂದ ಬಂದಿರುವ ದೂರುಗಳು ಆತಂಕಕ್ಕೆ ಕಾರಣವಾಗಿವೆ. ಕೆಲವರು ಆರ್ಥಿಕ ಸಂಕಷ್ಟದಿಂದ ಪ್ರಾಣ ಕಳೆದುಕೊಂಡಿರುವ ಘಟನೆಗಳನ್ನೂ ಅರುಣ್ ಉಲ್ಲೇಖಿಸಿದರು. ವಿಷಯದ ಗಂಭೀರತೆಯನ್ನು ಮನಗಂಡು ಸರ್ಕಾರ ತಕ್ಷಣ ಸ್ಪಷ್ಟನೆ ನೀಡಬೇಕೆಂದು ಅವರು ಒತ್ತಾಯಿಸಿದರು.

ವೇತನ ಪಾವತಿಯಲ್ಲಿ ಸಂಭವಿಸಿರುವ ಆಡಳಿತಾತ್ಮಕ ಗೊಂದಲಗಳು, ನಿಧಿ ಬಿಡುಗಡೆ ವಿಳಂಬ ಮತ್ತು ಉದ್ಯೋಗ ವರ್ಗೀಕರಣದ ದೋಷಗಳಿಗೆ ಸರ್ಕಾರವೇ ಕಾರಣವೆಂದು ಅವರು ತೀವ್ರ ಪ್ರಶ್ನೆ ಎತ್ತಿದರು. ಬಾಕಿ ಉಳಿದ ವೇತನ ಹಾಗೂ ಅರ್ಬಿಯರ್ಸ್ ಪಾವತಿಗೆ ನಿಗದಿತ ಅವಧಿ ಪ್ರಕಟಿಸುವಂತೆ ಆಗ್ರಹಿಸಿದರು.
ಗ್ರಂಥಪಾಲಕರ ಹಕ್ಕುಗಳನ್ನು ಕಾಯ್ದುಕೊಳ್ಳುವುದು ಗ್ರಾಮೀಣ ಶಿಕ್ಷಣ ಮತ್ತು ಮಾಹಿತಿಗಾರಿಕೆಯ ಗುಣಮಟ್ಟಕ್ಕೆ ಮೂಲಭೂತ ಎನ್ನುತ್ತಾ, ಕನಿಷ್ಠ ವೇತನ ಜಾರಿಯನ್ನು ಸರ್ಕಾರ ತಕ್ಷಣ ಬಲವಾಗಿ ಅನುಷ್ಠಾನಗೊಳಿಸಲು ಕ್ರಮವಹಿಸಬೇಕು ಎಂದು ಶಾಸಕರು ಹೇಳಿದರು.
ಅದೇ ವೇಳೆ, ಗ್ರಂಥಪಾಲಕರ ಸಾಮಾಜಿಕ ಭದ್ರತೆಗಾಗಿ ESI, PF ಜಾರಿಗೊಳಿಸುವುದು, ಪ್ರತ್ಯೇಕ ಸೇವಾ ನಿಯಮಾವಳಿ ರೂಪಿಸುವುದು, ಹಾಗೂ ರಾಜ್ಯ ಬಜೆಟ್ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡುವುದು ಅನಿವಾರ್ಯವೆಂದು ಸೂಚಿಸಿದರು. ಈ ಮೂರು ಕ್ರಮಗಳು ಪ್ರಸ್ತುತ ಪರಿಸ್ಥಿತಿಯಲ್ಲಿ ತುರ್ತು ಅಗತ್ಯ ಎಂದು ಅವರು ಹೇಳಿದರು.
ವೇತನ ಪಾವತಿಯಲ್ಲಿ ಪಾರದರ್ಶಕತೆ ತರಲು ನೇರ ಲಾಭ ವರ್ಗಾವಣೆ (DBT) ವ್ಯವಸ್ಥೆ ಅಳವಡಿಸುವುದು ಅತ್ಯಂತ ಪರಿಣಾಮಕಾರಿ ಎಂಬುದನ್ನು ಡಿ.ಎಸ್. ಅರುಣ್ ಉದಾಹರಣೆಗಳೊಂದಿಗೆ ವಿವರಿಸಿದರು. “ಲಕ್ಷಾಂತರ ಫಲಾನುಭವಿಗಳಿಗೆ ಯಶಸ್ವಿಯಾಗಿ ಜಾರಿಗೊಂಡಿರುವ DBT ಮಾದರಿಯನ್ನು, ರಾಜ್ಯವು ಕೇವಲ ಆರು ಸಾವಿರಕ್ಕೂ ಕಡಿಮೆ ಸಂಖ್ಯೆಯ ಗ್ರಂಥಪಾಲಕರಿಗೆ ಜಾರಿಗೊಳಿಸುವುದು ಇನ್ನೂ ಸುಲಭ,” ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದರು.
RDPR ಸಚಿವ ಪ್ರಿಯಾಂಕ್ ಖರ್ಗೆ ಗೈರುಹಾಜರಾಗಿದ್ದರಿಂದ, ಅವರ ಪರವಾಗಿ ಉತ್ತರಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದ್ದಾರೆ. ಅರುಣ್ ನೀಡಿದ ಸಲಹೆಗಳನ್ನು ಸಂಪೂರ್ಣ ಸಮರ್ಥಿಸಿದ ಸಚಿವರು, RDPR ಇಲಾಖೆಯೊಂದಿಗೆ ಚರ್ಚಿಸಿ DBT ಸೇರಿ ಉಳಿದ ಶಿಫಾರಸುಗಳ ಮೇಲೂ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.






