ಬೆಳಗಾವಿ: ಗೃಹಲಕ್ಷ್ಮಿ ಯೋಜನೆಯ ಹಣ ಬಾಕಿ ವಿಚಾರವಾಗಿ ವಿಧಾನಸಭೆಯಲ್ಲಿ ಇಂದು ಭಾರೀ ಗಲಾಟೆ ನಡೆಯಿತು. ವಿಪಕ್ಷಗಳ ತೀವ್ರ ಆಕ್ರೋಶಕ್ಕೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಈವರೆಗೆ 52,400.16 ಕೋಟಿ ರೂಪಾಯಿಗಳನ್ನು ಮಹಿಳೆಯರಿಗೆ ತಲುಪಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಮಾಹಿತಿಯಲ್ಲಿ ವ್ಯತ್ಯಾಸ ಉಂಟಾದ ಹಿನ್ನೆಲೆಯಲ್ಲಿ ಈಗಾಗಲೇ ವಿಷಾದ ವ್ಯಕ್ತಪಡಿಸಿರುವುದಾಗಿ ತಿಳಿಸಿದ ಸಚಿವೆ, ತಮ್ಮ ಪದ ಬಳಕೆಯಿಂದ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರಿಗೆ ನೋವಾಗಿದ್ದರೆ ಕ್ಷಮೆ ಕೇಳಲು ಸಿದ್ಧಳಿರುವುದಾಗಿ ಹೇಳಿದರು. ಇದೇ ವೇಳೆ, “ನಾನು ಮಹಿಳೆ ಎಂಬ ಕಾರಣಕ್ಕೆ ಈ ಮಟ್ಟಿಗೆ ನನ್ನನ್ನು ಗುರಿ ಮಾಡಲಾಗುತ್ತಿದೆಯೇ?” ಎಂದು ಪ್ರಶ್ನಿಸುವ ಮೂಲಕ ಭಾವುಕರಾಗಿ ಪ್ರತಿಕ್ರಿಯಿಸಿದರು.

ಇದಕ್ಕೆ ತೀವ್ರ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಆರ್. ಅಶೋಕ್, “ಸಚಿವೆಯ ಉತ್ತರಗಳು ಸ್ಪಷ್ಟವಾಗಿಲ್ಲ. ಸದನಕ್ಕೆ ತಪ್ಪು ಮಾಹಿತಿ ನೀಡಿದ ಅಧಿಕಾರಿ ಯಾರು ಎಂಬುದನ್ನು ಬಹಿರಂಗಪಡಿಸಬೇಕು. ಡಿಬಿಟಿ ವ್ಯವಸ್ಥೆಯನ್ನು ನಾವು ಜಾರಿಗೆ ತಂದಿದ್ದೇವೆ. ಆದರೆ ಸರ್ಕಾರ ತಂದಿರುವ ‘ಫ್ರೂಟ್ಸ್’ ಸಾಫ್ಟ್ವೇರ್ ಈಗ ಸಂಪೂರ್ಣವಾಗಿ ವಿಫಲವಾಗಿದೆ. ಎರಡು ತಿಂಗಳ ಹಣ ಎಲ್ಲಿಗೆ ಹೋಯಿತು? ಸರ್ಕಾರ ಬಿಕಾರಿಯಾಗಿದೆಯೇ? ಮಹಿಳೆಯರಿಗೆ ಯಾಕೆ ದ್ರೋಹ ಮಾಡಲಾಗುತ್ತಿದೆ?” ಎಂದು ಕಟುವಾಗಿ ಟೀಕಿಸಿದರು.
ಸಚಿವೆ ‘ಮಹಿಳಾ ಕಾರ್ಡ್’ ಬಳಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಶೋಕ್, “ಸದನದಲ್ಲಿ ಮಹಿಳೆ–ಪುರುಷ ಎಂಬ ಭೇದವಿಲ್ಲ. ಇಲ್ಲಿ ಮಂತ್ರಿ ಎಂಬ ಸ್ಥಾನ ಮಾತ್ರ ಮುಖ್ಯ. ಮಂತ್ರಿಯಾಗಿ ಜವಾಬ್ದಾರಿಯುತ ಉತ್ತರ ನೀಡಬೇಕು. ಬಾಕಿ ಇರುವ ಎರಡು ತಿಂಗಳ ಕಂತನ್ನು ಯಾವಾಗ ಪಾವತಿಸುತ್ತೀರಿ ಎಂಬುದನ್ನು ಸ್ಪಷ್ಟವಾಗಿ ಹೇಳಬೇಕು” ಎಂದು ಆಗ್ರಹಿಸಿದರು.
ಸಚಿವೆಯ ಉತ್ತರದಿಂದ ತೃಪ್ತರಾಗದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. “ಸದನ ಮುಗಿಯುವೊಳಗೆ ಬಾಕಿ ಹಣ ಪಾವತಿಸುವುದಾಗಿ ಸರ್ಕಾರ ಘೋಷಿಸಬೇಕಿತ್ತು. ಆದರೆ ಅಸ್ಪಷ್ಟ ಉತ್ತರ ನೀಡಲಾಗಿದೆ” ಎಂದು ಆರೋಪಿಸಿ, ಎರಡೂ ಪಕ್ಷಗಳ ಸದಸ್ಯರು ಒಟ್ಟಾಗಿ ಸಭಾತ್ಯಾಗ ಮಾಡಿದರು.
ವಿಪಕ್ಷಗಳ ಸಭಾತ್ಯಾಗದ ಬಳಿಕ, ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಮುಂದಿನ ಪ್ರಶ್ನೋತ್ತರ ಕಲಾಪವನ್ನು ಆರಂಭಿಸಿದರು. ಗೃಹಲಕ್ಷ್ಮಿ ಯೋಜನೆ ಕುರಿತಾದ ಸುದೀರ್ಘ ಗಲಾಟೆ ಈ ಮೂಲಕ ಒಂದು ಹಂತಕ್ಕೆ ಅಂತ್ಯವಾಯಿತು.






