ಕಾನೂನು ಸುವ್ಯವಸ್ಥೆಗೆ ಶಿಸ್ತು, ಪಾರದರ್ಶಕತೆ ಮತ್ತು ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಒತ್ತು
ಶಿವಮೊಗ್ಗ, ಜನವರಿ 1: ಶಿವಮೊಗ್ಗ ಜಿಲ್ಲೆಗೆ ನೂತನವಾಗಿ ವರ್ಗಾವಣೆಯಾಗಿರುವ ಬಿ. ನಿಖಿಲ್ ಐಪಿಎಸ್ ಅವರು ಇಂದು ಶಿವಮೊಗ್ಗ ಜಿಲ್ಲೆಗೆ ಆಗಮಿಸಿ ಅಧಿಕೃತವಾಗಿ ವರದಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು–1 ಶ್ರೀ ಎ.ಜಿ. ಕಾರ್ಯಪ್ಪ ಅವರಿಂದ ಶಿವಮೊಗ್ಗ ಜಿಲ್ಲೆಯ ಪೊಲೀಸ್ ಆಡಳಿತದ ಪ್ರಭಾರವನ್ನು ವಹಿಸಿಕೊಂಡರು.

ಅಧಿಕಾರ ಸ್ವೀಕಾರದ ಬಳಿಕ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಶಿವಮೊಗ್ಗ ನಗರ ವ್ಯಾಪ್ತಿಯ ಪಿಐ ದರ್ಜೆಯ ಮೇಲ್ಪಟ್ಟ ಎಲ್ಲಾ ಪೊಲೀಸ್ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ನೂತನ ಪೊಲೀಸ್ ಅಧೀಕ್ಷಕರು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಯಾವುದೇ ರೀತಿಯ ಸಡಿಲತೆ ಸಹಿಸಲಾಗುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಮಾತನಾಡಿದ ಅವರು, ಪೊಲೀಸ್ ಇಲಾಖೆ ಶಿಸ್ತು, ನಿಷ್ಠೆ ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರ ವಿಶ್ವಾಸವೇ ಇಲಾಖೆಯ ಬಲ. ಜನರೊಂದಿಗೆ ಸ್ನೇಹಪೂರ್ಣವಾಗಿ ನಡೆದುಕೊಳ್ಳಬೇಕು, ಆದರೆ ಕಾನೂನು ಉಲ್ಲಂಘನೆಗೆ ಅವಕಾಶ ನೀಡಬಾರದು ಎಂದು ಸ್ಪಷ್ಟ ಸೂಚನೆ ನೀಡಿದರು.

ಅಪರಾಧ ನಿಯಂತ್ರಣ, ಮಾದಕ ವಸ್ತುಗಳ ಅಕ್ರಮ ವ್ಯವಹಾರ, ಮಟ್ಕಾ, ಓಸಿ, ಅಕ್ರಮ ಮರಳು ಸಾಗಣೆ, ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆ, ಸಂಚಾರ ನಿಯಂತ್ರಣ ಸೇರಿದಂತೆ ಎಲ್ಲಾ ಪ್ರಮುಖ ವಿಷಯಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಠಾಣಾ ಮಟ್ಟದಲ್ಲಿ ಪ್ರತಿಯೊಬ್ಬ ಅಧಿಕಾರಿಯೂ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ನಿರ್ಲಕ್ಷ್ಯ, ಲೋಪ ಅಥವಾ ಕರ್ತವ್ಯದಲ್ಲಿ ಅಸಡ್ಡೆ ತೋರಿದರೆ ಕಠಿಣ ಕ್ರಮ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ಸಾರ್ವಜನಿಕರಿಂದ ಬರುವ ದೂರುಗಳಿಗೆ ತ್ವರಿತ ಸ್ಪಂದನೆ ನೀಡಬೇಕು. ಯಾವುದೇ ಕಾರಣಕ್ಕೂ ದೂರುದಾರರನ್ನು ಠಾಣೆಗಳಲ್ಲಿ ಅಲೆದಾಡಿಸಬಾರದು. ಕಾನೂನು ಎಲ್ಲರಿಗೂ ಸಮಾನ ಎಂಬ ತತ್ವವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕೆಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಹೊಸ ವರ್ಷದ ಮೊದಲ ದಿನವೇ ಅಧಿಕಾರ ಸ್ವೀಕರಿಸಿದ ನೂತನ ಪೊಲೀಸ್ ಅಧೀಕ್ಷಕರ ಖಡಕ್ ಸೂಚನೆಗಳು ಇಲಾಖೆಯೊಳಗೆ ಶಿಸ್ತುಬದ್ಧ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದ್ದು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತಷ್ಟು ಬಲವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.






