ಬೆಂಗಳೂರು :ರಸ್ತೆ ಅಪಘಾತದಲ್ಲಿ ಅಕಾಲಿಕವಾಗಿ ನಿಧನರಾದ ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ ಮಹತ್ವದ ನೆರವು ಘೋಷಿಸಿದೆ. ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ, ಮಹಾಂತೇಶ್ ಬೀಳಗಿ ಅವರ ಪುತ್ರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡುವ ಕುರಿತು ಚರ್ಚೆ ನಡೆದಿದ್ದು, ಅಂತಿಮವಾಗಿ ಅವರ ಪುತ್ರಿ ಚೈತನ್ಯ ಅವರಿಗೆ ಗ್ರೂಪ್–ಸಿ ಹುದ್ದೆ ನೀಡಲು ಸಂಪುಟ ಅನುಮೋದನೆ ನೀಡಿದೆ.
ರಾಜ್ಯ ಆಡಳಿತ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ, ಸರಳತೆ ಮತ್ತು ಜನಸ್ನೇಹಿ ಕಾರ್ಯಶೈಲಿಯಿಂದ ಗುರುತಿಸಿಕೊಂಡಿದ್ದ ಮಹಾಂತೇಶ್ ಬೀಳಗಿ ಅವರ ಅಕಾಲಿಕ ನಿಧನವು ರಾಜ್ಯದ ಆಡಳಿತ ವಲಯಕ್ಕೂ ಸಮಾಜಕ್ಕೂ ದೊಡ್ಡ ನಷ್ಟವಾಗಿ ಪರಿಣಮಿಸಿತ್ತು. ಅವರ ಸೇವೆ ಮತ್ತು ತ್ಯಾಗವನ್ನು ಗೌರವಿಸುವ ಉದ್ದೇಶದಿಂದಲೇ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.
ಜನಸ್ನೇಹಿ ಐಎಎಸ್ ಅಧಿಕಾರಿ
ಪ್ರೀತಿಯ ಮಾತು, ಪ್ರಾಮಾಣಿಕ ಕೆಲಸ ಹಾಗೂ ಮಾನವೀಯ ನಿಲುವಿನಿಂದ ಜನಮನ ಗೆದ್ದಿದ್ದ ಮಹಾಂತೇಶ್ ಬೀಳಗಿ, ವಿದ್ಯಾರ್ಥಿಗಳನ್ನು ಕಂಡಾಗಲೆಲ್ಲಾ ಉತ್ಸಾಹ ತುಂಬುವ ಮಾತುಗಳನ್ನಾಡುತ್ತಿದ್ದರು. ಸ್ವತಃ ಬಡತನದ ಕಷ್ಟಗಳನ್ನು ಅನುಭವಿಸಿ, ಅಸಾಧಾರಣ ಪರಿಶ್ರಮದ ಮೂಲಕ ಉನ್ನತ ಹುದ್ದೆಗೇರಿದ್ದ ಅವರು, ಯುವಕರಿಗೆ ಸದಾ ಪ್ರೇರಣೆಯಾಗಿ ನಿಂತಿದ್ದರು. ಆಡಳಿತದಲ್ಲಿ ಶಿಸ್ತು ಮತ್ತು ನ್ಯಾಯವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದ ಈ ಅಪರೂಪದ ಅಧಿಕಾರಿ ಎಲ್ಲ ವರ್ಗದ ಜನರಿಂದ ಗೌರವ ಪಡೆದಿದ್ದರು.
2025ರ ನವೆಂಬರ್ 25ರಂದು, ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ ಜೇವರ್ಗಿ ಸಮೀಪ ಮಹಾಂತೇಶ್ ಬೀಳಗಿ ಸೇರಿದಂತೆ ನಾಲ್ವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಭೀಕರ ಅಪಘಾತ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮಹಾಂತೇಶ್ ಬೀಳಗಿ ಅವರನ್ನು ತಕ್ಷಣ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದರು.
ಕುಟುಂಬಕ್ಕೆ ಸರ್ಕಾರದ ಸ್ಪಂದನೆ
ಮಹಾಂತೇಶ್ ಬೀಳಗಿ ಅವರ ನಿಧನದ ಬಳಿಕ ಅವರ ಕುಟುಂಬಕ್ಕೆ ಸರ್ಕಾರಿ ನೆರವು ನೀಡುವ ಕುರಿತು ವಿವಿಧ ವಲಯಗಳಿಂದ ಒತ್ತಾಯ ಕೇಳಿಬಂದಿತ್ತು. ಇದಕ್ಕೆ ಸ್ಪಂದಿಸಿರುವ ರಾಜ್ಯ ಸರ್ಕಾರ, ಅನುಕಂಪದ ಆಧಾರದ ಮೇಲೆ ಪುತ್ರಿ ಚೈತನ್ಯ ಅವರಿಗೆ ಗ್ರೂಪ್–ಸಿ ಹುದ್ದೆ ನೀಡುವ ಮೂಲಕ ಕುಟುಂಬದ ಭವಿಷ್ಯಕ್ಕೆ ಭದ್ರತೆ ಒದಗಿಸಲು ಮುಂದಾಗಿದೆ.
ಈ ತೀರ್ಮಾನವನ್ನು ಮಹಾಂತೇಶ್ ಬೀಳಗಿ ಅವರ ಸೇವೆಗೆ ಸಲ್ಲಿಸಿದ ಗೌರವವೆಂದು ಸಾರ್ವಜನಿಕ ವಲಯದಲ್ಲಿ ಸ್ವಾಗತಿಸಲಾಗಿದ್ದು, ಸರ್ಕಾರದ ಮಾನವೀಯ ನಿಲುವಿಗೆ ಮೆಚ್ಚುಗೆ ವ್ಯಕ್ತವಾಗಿದೆ.






