ಬೆಂಗಳೂರು: ರಾಜ್ಯದ ವಿವಿಧೆಡೆ ಸಾರ್ವಜನಿಕವಾಗಿ “ಪಾಕಿಸ್ತಾನ್ ಜಿಂದಾಬಾದ್” ಹಾಗೂ “ಬಾಂಗ್ಲಾದೇಶ ಜಿಂದಾಬಾದ್” ಎಂಬ ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗಿದ ಪ್ರಕರಣಗಳಲ್ಲಿ ಈವರೆಗೆ ಒಬ್ಬನೇ ಒಬ್ಬ ಆರೋಪಿಗೂ ಶಿಕ್ಷೆಯಾಗದಿರುವುದನ್ನು ಉಲ್ಲೇಖಿಸಿ, ವಿಧಾನಪರಿಷತ್ ಸದಸ್ಯರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ.ಎಸ್. ಅರುಣ್ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.
ವಿಧಾನಪರಿಷತ್ ಸದನದಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಒಟ್ಟು 18 ರಾಷ್ಟ್ರವಿರೋಧಿ ಪ್ರಕರಣಗಳು ದಾಖಲಾಗಿದ್ದರೂ, ಯಾವ ಪ್ರಕರಣದಲ್ಲಿಯೂ ಶಿಕ್ಷೆ ಆಗಿಲ್ಲವೆಂಬುದು ಸರ್ಕಾರದ ತನಿಖಾ ವೈಫಲ್ಯವನ್ನು ತೋರಿಸುತ್ತದೆ ಎಂದರು. ಇದರಿಂದ ದೇಶಭಕ್ತ ನಾಗರಿಕರ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿದ್ದು, ಸಮಾಜದಲ್ಲಿ ಅಶಾಂತಿ ಮತ್ತು ಅಸಹಿಷ್ಣುತೆ ಹೆಚ್ಚುವ ಆತಂಕವಿದೆ ಎಂದು ಅವರು ಹೇಳಿದರು.
ಕೇವಲ ಎಫ್ಐಆರ್ ದಾಖಲಿಸಿ ಪ್ರಕರಣಗಳನ್ನು ತಣ್ಣಗಾಗಿಸುವ ಪ್ರವೃತ್ತಿಯನ್ನು ಸರ್ಕಾರ ಕೈಬಿಡಬೇಕು. ದೇಶದ ಅಸ್ಮಿತೆಗೆ ಸವಾಲು ಹಾಕುವ ಇಂತಹ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಧೈರ್ಯವಿಲ್ಲವೇ? ಎಂದು ಡಿ.ಎಸ್. ಅರುಣ್ ಪ್ರಶ್ನಿಸಿದರು.
ರಾಷ್ಟ್ರವಿರೋಧಿ ಚಟುವಟಿಕೆಗಳನ್ನು ತಡೆಯಲು ಅಸ್ತಿತ್ವದಲ್ಲಿರುವ ಕಾನೂನುಗಳಿಗೆ ತಿದ್ದುಪಡಿ ತರಬೇಕು ಅಥವಾ ಹೊಸದಾಗಿ ಕಠಿಣ ಕಾನೂನನ್ನು ಜಾರಿಗೆ ತರಬೇಕೆಂದು ಅವರು ಒತ್ತಾಯಿಸಿದರು. ಶಾಂತಿ ಮತ್ತು ಸೌಹಾರ್ದತೆಯ ಹೆಸರಿನಲ್ಲಿ ದೇಶವಿರೋಧಿಗಳಿಗೆ ರಕ್ಷಣೆ ನೀಡಲಾಗುತ್ತಿದೆ ಎಂಬ ಆರೋಪವನ್ನೂ ಅವರು ಈ ವೇಳೆ ಮಾಡಿದರು.
ರಾಜ್ಯ ಸರ್ಕಾರ ತಕ್ಷಣವೇ ಸ್ಪಷ್ಟ ಹಾಗೂ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಜನತೆಯೊಂದಿಗೆ ಸೇರಿ ಹೋರಾಟ ನಡೆಸಬೇಕಾಗುತ್ತದೆ ಎಂದು ಡಿ.ಎಸ್. ಅರುಣ್ ಎಚ್ಚರಿಕೆ ನೀಡಿದರು.







