ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

‘ಎಲ್ಲರೂ ಬಾಯಿ ಮುಚ್ಚಿಕೊಂಡಿರಬೇಕು’: ಕಾಂಗ್ರೆಸ್ ನಾಯಕರಿಗೆ ಡಿಕೆಶಿ ಖಡಕ್ ಸಂದೇಶ

On: February 10, 2026 12:38 PM
Follow Us:

ಬೆಂಗಳೂರು: ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ಪವರ್ ಶೇರಿಂಗ್ ಹಾಗೂ ನಾಯಕತ್ವ ಬದಲಾವಣೆ ಕುರಿತ ಚರ್ಚೆ ಮತ್ತೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ವಿಚಾರವು ಪಕ್ಷದ ಒಳಗೇ ಅಸಮಾಧಾನಕ್ಕೆ ಕಾರಣವಾಗಿದ್ದು, ಈ ವಿವಾದಕ್ಕೆ ಹೈಕಮಾಂಡ್ ಇನ್ನೂ ಸ್ಪಷ್ಟ ಬ್ರೇಕ್ ಹಾಕದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಇಬ್ಬರು ನಾಯಕರ ಬೆಂಬಲಿಗರ ನಡುವೆ ನಡೆಯುತ್ತಿರುವ ಬಣಗೈದಾಟಕ್ಕೆ ಪವರ್ ಶೇರಿಂಗ್ ವಿಷಯವೇ ಕೇಂದ್ರಬಿಂದುವಾಗಿದ್ದು, ಇದು ಸರ್ಕಾರದ ಕಾರ್ಯಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಸಿಎಂ ಸಭೆಗೆ ಗೈರಾದ ಡಿಸಿಎಂ – ದೆಹಲಿಯತ್ತ ಡಿಕೆಶಿ ಪ್ರಯಾಣ

ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇತ್ತೀಚೆಗೆ ಮುಖ್ಯಮಂತ್ರಿ ನೇತೃತ್ವದ ಸಭೆಗೆ ಗೈರಾಗಿದ್ದು, ತಕ್ಷಣವೇ ದೆಹಲಿಗೆ ತೆರಳಿರುವುದು ರಾಜಕೀಯ ವಲಯದಲ್ಲಿ ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.
ದೆಹಲಿಗೆ ತೆರಳುವ ಮುನ್ನವೇ, “ಐದು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ” ಎಂಬ ಖಡಕ್ ಸಂದೇಶವನ್ನು ಸಿಎಂ ಪುತ್ರ ಯತೀಂದ್ರ ಅವರಿಗೆ ರವಾನಿಸಿದ್ದಾರೆ ಎನ್ನಲಾಗಿದೆ.

ಪವರ್ ಶೇರಿಂಗ್ ಬಗ್ಗೆ ಡಿಕೆಶಿಯ ಸುಳಿವು

ದೆಹಲಿಗೆ ತೆರಳುವ ಮುನ್ನ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ನನ್ನ ಹಾಗೂ ಸಿದ್ದರಾಮಯ್ಯ ಅವರ ನಡುವೆ ಯಾವುದೇ ಗೊಂದಲ ಇಲ್ಲ ಎಂದು ಹೇಳುವ ಮೂಲಕ ಪವರ್ ಶೇರಿಂಗ್ ಕುರಿತು ಪರೋಕ್ಷ ಸುಳಿವು ನೀಡಿದ್ದಾರೆ.

“ನನ್ನ ಮತ್ತು ಸಿದ್ದರಾಮಯ್ಯ ಅವರ ನಡುವೆ ಏನು ಮಾತುಕತೆ ಆಗಿದೆ ಎಂಬುದು ನನಗೆ ಚೆನ್ನಾಗಿ ಗೊತ್ತು. ನಾವು ಕದ್ದು ಮುಚ್ಚಿ ಮಾತನಾಡಿಲ್ಲ. ನಮ್ಮ ವರಿಷ್ಠರ ಜೊತೆ ಚರ್ಚೆ ನಡೆಸಿದ್ದೇವೆ. ಇದರಲ್ಲಿ ಗೊಂದಲ ಇರೋದು ಬೇರೆಯವರಿಗೆ ಇರಬಹುದು” ಎಂದು ಡಿಕೆಶಿ ಸ್ಪಷ್ಟಪಡಿಸಿದರು.

ಯತೀಂದ್ರ ಹೇಳಿಕೆಗಳಿಗೆ ಪರೋಕ್ಷ ಟಾಂಗ್?

ಸಿಎಂ ಪುತ್ರ ಯತೀಂದ್ರ ಅವರ ಇತ್ತೀಚಿನ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದಂತೆಯೇ ಮಾತನಾಡಿದ ಡಿಕೆಶಿ, “ಬೇರೆಯವರು ಟೆನ್ಷನ್ ತೆಗೆದುಕೊಂಡು ಹೇಳಿಕೆ ಕೊಟ್ಟರೆ ಏನು ಬದಲಾಗಲ್ಲ. ಅದರಿಂದ ಯಾವುದೇ ಪ್ರಯೋಜನವೂ ಇಲ್ಲ” ಎಂದು ಹೇಳುವ ಮೂಲಕ, ಯತೀಂದ್ರ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

‘ಎಲ್ಲರೂ ಬಾಯಿ ಮುಚ್ಚಿಕೊಂಡಿರಬೇಕು’ – ಡಿಕೆಶಿ ಎಚ್ಚರಿಕೆ

ಪಕ್ಷದ ಒಳಗಿನ ಹೇಳಿಕೆಗಳು ಸರ್ಕಾರ ಮತ್ತು ಪಕ್ಷಕ್ಕೆ ಹಾನಿ ಮಾಡುತ್ತಿವೆ ಎಂದು ಒತ್ತಿ ಹೇಳಿದ ಡಿಕೆ ಶಿವಕುಮಾರ್, “ನನ್ನ ಪರವಾಗಿಯೂ ಹೇಳಿಕೆ ಕೊಡ್ತಿದ್ದಾರೆ, ವಿರುದ್ಧವಾಗಿಯೂ ಕೊಡ್ತಿದ್ದಾರೆ. ಸಚಿವರಾಗಿರಲಿ, ಶಾಸಕರಾಗಿರಲಿ – ಯಾರೇ ಇರಲಿ, ಅವರ ಹೇಳಿಕೆಗಳಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ. ಈ ವಿಚಾರದಲ್ಲಿ ಎಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು ಅಂತ ಖರ್ಗೆ ಸಾಹೇಬರು ಹೇಳಿದ್ದಾರೆ. ನಾವು ಅದನ್ನು ಪಾಲಿಸಬೇಕು” ಎಂದು ಕಟ್ಟುನಿಟ್ಟಾಗಿ ಹೇಳಿದರು.

ಈ ಹೇಳಿಕೆಯನ್ನು ಸಿಎಂ ಪುತ್ರ ಯತೀಂದ್ರ ಅವರತ್ತಲೇ ಉದ್ದೇಶಿಸಿ ನೀಡಲಾಗಿದೆ ಎಂಬ ಚರ್ಚೆ ಕಾಂಗ್ರೆಸ್ ವಲಯದಲ್ಲಿ ಜೋರಾಗಿದೆ.

ಯತೀಂದ್ರಗೆ ನೋಟಿಸ್? – ಹೈಕಮಾಂಡ್ ತೀರ್ಮಾನವೇ ಅಂತಿಮ

ಇನ್ನೊಂದೆಡೆ, ಸಿಎಂ ಪುತ್ರ ಯತೀಂದ್ರ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೂ ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ. ಆಪ್ತ ಶಾಸಕ ಇಕ್ಬಾಲ್ ಹುಸೇನ್ ಈ ಬಗ್ಗೆ ಪ್ರಶ್ನೆ ಎತ್ತಿದ ಹಿನ್ನೆಲೆ, “ಈ ವಿಚಾರವನ್ನು ಹೈಕಮಾಂಡ್ ಜೊತೆ ಚರ್ಚಿಸೋಣ” ಎಂದು ಡಿಕೆಶಿ ಹೇಳಿದ್ದಾರೆ.

ಇದರಿಂದಾಗಿ, ಯತೀಂದ್ರ ಅವರ ಹೇಳಿಕೆಗಳ ಕುರಿತು ಕಾಂಗ್ರೆಸ್ ಹೈಕಮಾಂಡ್ ನೋಟಿಸ್ ನೀಡುತ್ತದೆಯೇ? ಅಥವಾ ಶಿಸ್ತು ಕ್ರಮ ಕೈಗೊಳ್ಳುತ್ತದೆಯೇ? ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಹೆಚ್ಚಿದೆ.

ಕಾಂಗ್ರೆಸ್ ಒಳರಾಜಕಾರಣ ತೀವ್ರ

ಒಟ್ಟಿನಲ್ಲಿ, ರಾಜ್ಯ ಕಾಂಗ್ರೆಸ್‌ನಲ್ಲಿ ಪವರ್ ಶೇರಿಂಗ್ ಮತ್ತು ನಾಯಕತ್ವದ ಕುರಿತ ಚರ್ಚೆ ತಾತ್ಕಾಲಿಕವಾಗಿ ಶಮನಗೊಂಡಂತಿದ್ದರೂ, ಒಳಗೊಳಗೆ ಅಸಮಾಧಾನ ಇನ್ನೂ ಜೀವಂತವಾಗಿರುವುದು ಸ್ಪಷ್ಟವಾಗಿದೆ. ಡಿಕೆ ಶಿವಕುಮಾರ್ ಅವರ ದೆಹಲಿ ಭೇಟಿ, ಹೈಕಮಾಂಡ್ ಚರ್ಚೆಗಳು ಹಾಗೂ ಮುಂದಿನ ನಿರ್ಧಾರಗಳು ರಾಜ್ಯ ರಾಜಕಾರಣದ ದಿಕ್ಕನ್ನು ನಿರ್ಧರಿಸಲಿದೆ ಎನ್ನಲಾಗುತ್ತಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment