ಶಿವಮೊಗ್ಗ: ಈ ಬಾರಿಯ ಶಿವರಾತ್ರಿ ಉತ್ಸವವನ್ನು ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತವಾಗಿ, ಪರಿಸರ ಸ್ನೇಹಿ ರೀತಿಯಲ್ಲಿ ಆಚರಿಸಬೇಕು ಎಂಬ ಉದ್ದೇಶದಿಂದ ಪರ್ಯಾವರಣ ಟ್ರಸ್ಟ್ ಸದಸ್ಯರು ಹರಕೆರೆ ಶ್ರೀ ಹರಕೇಶ್ವರ ದೇವಸ್ಥಾನ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದರು.
ಶಿವರಾತ್ರಿ ಜಾಗರಣೆ ಹಾಗೂ ಜಾತ್ರೆಯ ಸಂದರ್ಭದಲ್ಲಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕು. ದೇವಾಲಯದ ಕಾರ್ಯಕ್ರಮಗಳು ಪರಿಸರ ಜಾಗೃತಿಗೆ ಮಾದರಿಯಾಗಬೇಕು ಎಂದು ಟ್ರಸ್ಟ್ ಸದಸ್ಯರು ಮನವಿಯಲ್ಲಿ ಒತ್ತಾಯಿಸಿದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಶ್ರೀ ಶಿವಶಂಕರ್, “ದೇವಾಲಯದ ಪ್ರಸಾದ ವಿತರಣೆಯಲ್ಲಿ ಪ್ಲಾಸ್ಟಿಕ್ ಕವರ್ಗಳ ಬದಲಿಗೆ ಪೇಪರ್ ಕವರ್ ಬಳಸುವ ಬಗ್ಗೆ ಈಗಾಗಲೇ ಚಿಂತನೆ ನಡೆಸಲಾಗಿದೆ. ಜೊತೆಗೆ ಭಕ್ತರಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಕೈಗೊಳ್ಳಲಾಗುವುದು” ಎಂದು ತಿಳಿಸಿದರು.

ಅದೇ ರೀತಿ, ಜಾತ್ರೆಯ ಅಂಗಡಿ ಮಾಲೀಕರು ನಿಷೇಧಿತ ಪ್ಲಾಸ್ಟಿಕ್ ಬಳಸದಂತೆ ಸೂಚಿಸುವುದರ ಜೊತೆಗೆ, ಪರಿಸರ ಸ್ನೇಹಿ ಪರ್ಯಾಯ ವಸ್ತುಗಳನ್ನು ಬಳಸುವಂತೆ ಮನವಿ ಮಾಡುವ ಕಾರ್ಯದಲ್ಲೂ ದೇವಸ್ಥಾನ ಸಮಿತಿ ಕೈಜೋಡಿಸಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪರ್ಯಾವರಣ ಟ್ರಸ್ಟ್ ಪ್ರಮುಖರು ಹಾಗೂ ಶಿವಮೊಗ್ಗ ನಗರಸಭೆಯ ಮಾಜಿ ಅಧ್ಯಕ್ಷರಾದ ಎಂ. ಶಂಕರ್, “ಶಿವಮೊಗ್ಗ ಮಹಾನಗರ ಪಾಲಿಕೆಯೂ ಸಹ ನಿಷೇಧಿತ ಪ್ಲಾಸ್ಟಿಕ್ ಬಳಕೆ ವಿರೋಧಿಸಿ ನಿರಂತರ ಜಾಗೃತಿ ಮೂಡಿಸುತ್ತಿದೆ. ಧಾರ್ಮಿಕ ಉತ್ಸವಗಳು ಪರಿಸರ ಸಂರಕ್ಷಣೆಗೆ ದಾರಿ ತೋರಿಸಬೇಕು. ಪ್ಲಾಸ್ಟಿಕ್ ಮುಕ್ತ ಜಾತ್ರೆ ಯಶಸ್ವಿಯಾಗಲು ಸಾರ್ವಜನಿಕರು, ವ್ಯಾಪಾರಸ್ಥರು ಹಾಗೂ ಆಡಳಿತ ಮಂಡಳಿ ಎಲ್ಲರ ಸಹಕಾರ ಅಗತ್ಯ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪರ್ಯಾವರಣ ಟ್ರಸ್ಟ್ ಅಧ್ಯಕ್ಷ ಬಿ.ಎಂ. ಕುಮಾರಸ್ವಾಮಿ, ಡಾ. ಶ್ರೀಪತಿ ಎಲ್. ಕೆ., ಬಾಲಕೃಷ್ಣ ನಾಯ್ಡು, ದಿನೇಶ್ ಶೇಟ್, ಲೋಕೇಶಪ್ಪ, ಎಸ್.ಬಿ. ಅಶೋಕ್ ಕುಮಾರ್, ಜಗದೀಶ್ ಶಿಪ್ರ ಸೇರಿದಂತೆ ಟ್ರಸ್ಟ್ ಹಾಗೂ ದೇವಸ್ಥಾನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಒಟ್ಟಿನಲ್ಲಿ, ಈ ಬಾರಿಯ ಶಿವರಾತ್ರಿ ಉತ್ಸವವನ್ನು ಪ್ಲಾಸ್ಟಿಕ್ ಮುಕ್ತವಾಗಿ ಆಚರಿಸುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶವನ್ನು ಸಮಾಜಕ್ಕೆ ತಲುಪಿಸುವ ಸಂಕಲ್ಪವನ್ನು ಹರಕೆರೆ ಶ್ರೀ ಹರಕೇಶ್ವರ ದೇವಸ್ಥಾನ ಸಮಿತಿ ಕೈಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.







