ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

‘ಕೊಟ್ಟ ಮಾತು ಉಳಿಯುತ್ತದೆಯೇ?’ – ಕಾಂಗ್ರೆಸ್ ಒಳಕಿಚ್ಚಿಗೆ ಸುರೇಶ್ ಮಾರ್ಮಿಕ ನುಡಿ, ಡಿಕೆಶಿ ದೆಹಲಿ ಪಯಣ ರಾಜಕೀಯ ಚರ್ಚೆ ತೀವ್ರ

On: February 11, 2026 4:04 PM
Follow Us:

ಬೆಂಗಳೂರು:ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ಕೆಲ ದಿನಗಳಿಂದ ಮಂಕಾಗಿದ್ದ ಅಧಿಕಾರ ಹಂಚಿಕೆಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ‘ಕುರ್ಚಿ ಕದನ’ ವಿಚಾರ ಈಗ ನೇರ ಹೇಳಿಕೆಗಳ ಹಂತದಿಂದ, ಪರೋಕ್ಷ ವ್ಯಂಗ್ಯ ಮತ್ತು ಮಾರ್ಮಿಕ ನುಡಿಗಳ ಹಂತಕ್ಕೆ ತಲುಪಿದೆ.

ಈ ರಾಜಕೀಯ ಅಲೆಗೆ ಮತ್ತಷ್ಟು ಇಂಧನ ತುಂಬಿರುವುದು ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ಹೇಳಿಕೆ. “ನಿಧಾನವಾದರೂ ಪರವಾಗಿಲ್ಲ, ಕೊಟ್ಟ ಮಾತನ್ನು ಸಿದ್ದರಾಮಯ್ಯ ಉಳಿಸಿಕೊಳ್ಳುತ್ತಾರೆ” ಎಂಬ ಅವರ ಒಂದೇ ವಾಕ್ಯ ಕಾಂಗ್ರೆಸ್ ಒಳರಾಜಕಾರಣದ ಆಂತರಿಕ ಒತ್ತಡವನ್ನು ಬಹಿರಂಗಪಡಿಸಿದೆ.

‘ವೇದ ವಾಕ್ಯ’ ವ್ಯಂಗ್ಯ: ಒಳಗಿನ ಸಂದೇಶ, ಹೊರಗಿನ ನಗು

ಸಿದ್ದರಾಮಯ್ಯ ಪುತ್ರ ಹಾಗೂ ಕಾಂಗ್ರೆಸ್ ಎಂಎಲ್ಸಿ ಯತೀಂದ್ರ ಅವರು “ಸಿದ್ದರಾಮಯ್ಯ ಐದು ವರ್ಷ ಪೂರ್ಣಾವಧಿ ಸಿಎಂ” ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಸುರೇಶ್, “ಅವರು ಹೇಳಿದ ಮೇಲೆ ಅದೇ ವೇದ ವಾಕ್ಯ, ಅದೇ ಫೈನಲ್” ಎಂದು ವ್ಯಂಗ್ಯವಾಡಿದರು.
ಈ ಹೇಳಿಕೆ ಸರಳ ಉತ್ತರದಂತೆ ಕಂಡರೂ, ಅದರೊಳಗೆ ಅಧಿಕಾರ ವರ್ಗಾವಣೆ ಕುರಿತು ನಡೆಯುತ್ತಿರುವ ಮೌನ ಸಂವಾದದ ಸಂಕೇತ ಸ್ಪಷ್ಟವಾಗಿ ಗೋಚರಿಸುತ್ತದೆ.

ಇದು ಕೇವಲ ವ್ಯಕ್ತಿಗತ ಅಭಿಪ್ರಾಯವಲ್ಲ; ಪಕ್ಷದೊಳಗಿನ ಒಂದು ಬಣದ ಮನಸ್ಥಿತಿಯ ಪ್ರತಿಧ್ವನಿ ಎಂಬುದು ರಾಜಕೀಯ ವಲಯದ ವಿಶ್ಲೇಷಣೆ.

‘ಹೊರಗಿನ ಅತಿಥಿಗಳಿಗೆ ಮೊದಲ ಆದ್ಯತೆ’ – ಸರ್ಕಾರದ ನಡೆಗೆ ಕಿಡಿ

ನಿಗಮ–ಮಂಡಳಿಗಳ ನೇಮಕಾತಿಯಲ್ಲಿ ಬಿಜೆಪಿ ಹಿನ್ನೆಲೆಯ ವ್ಯಕ್ತಿಗೆ ಸ್ಥಾನ ನೀಡಿದ ವಿಚಾರವನ್ನು ಮುಂದಿಟ್ಟುಕೊಂಡು ಡಿ.ಕೆ. ಸುರೇಶ್ ಆಡಿದ ವ್ಯಂಗ್ಯ ಮತ್ತಷ್ಟು ತೀಕ್ಷ್ಣವಾಗಿತ್ತು.“ಕಾಂಗ್ರೆಸ್ ಸರ್ವಧರ್ಮ ಪಾಲಿಸಿಯ ಪಕ್ಷ. ಬಿಜೆಪಿ, ಜೆಡಿಎಸ್ ಎಲ್ಲರೂ ನಮ್ಮಲ್ಲೇ ಇದ್ದಾರೆ. ಹೀಗಾಗಿ ಹೊರಗಿನಿಂದ ಬಂದ ಅತಿಥಿಗಳಿಗೆ ಮೊದಲ ಆದ್ಯತೆ, ಕಾಂಗ್ರೆಸ್ ಕಾರ್ಯಕರ್ತರಿಗೆ ಎರಡನೇ ಆದ್ಯತೆ” ಎಂಬ ಮಾತು, ಪಕ್ಷದೊಳಗಿನ ಅಸಮಾಧಾನವನ್ನು ನೇರವಾಗಿ ಹೊರಗೆ ತಂದಿದೆ.

ಇದು ಕೇವಲ ನೇಮಕಾತಿಯ ಪ್ರಶ್ನೆಯಲ್ಲ; ಅಧಿಕಾರದ ಹಂಚಿಕೆಯಲ್ಲಿ ಯಾರು ಮೊದಲ ಸಾಲಿನಲ್ಲಿ, ಯಾರು ಹಿಂಬದಿ ಸಾಲಿನಲ್ಲಿ ಎಂಬ ಅಸಮತೋಲನದ ಮೇಲಿನ ಆಕ್ರೋಶ.

ಸಿಎಂ ಸಿದ್ದರಾಮಯ್ಯ ‘ರಾಂಗ್’: ಹೈಕಮಾಂಡ್ ಶಬ್ದವೇ ಅಂತಿಮ

ಅಧಿಕಾರ ಹಂಚಿಕೆ ವಿಚಾರವನ್ನು ಪದೇಪದೇ ಕೇಳುತ್ತಿರುವ ಮಾಧ್ಯಮಗಳ ಮೇಲೆ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಯಾಕೆ ಅದೇ ಪ್ರಶ್ನೆ ಮತ್ತೆ ಮತ್ತೆ?” ಎಂದು ಪ್ರಶ್ನಿಸಿದ ಅವರು, “ಹೈಕಮಾಂಡ್ ಏನು ಹೇಳುತ್ತದೋ ಅದನ್ನೇ ನಾನು ಕೇಳುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
ಈ ಹೇಳಿಕೆ ಒಂದು ಕಡೆ ತಮ್ಮ ನಿಲುವಿನ ದೃಢತೆಯನ್ನು ತೋರಿಸಿದರೆ, ಇನ್ನೊಂದು ಕಡೆ ಹೈಕಮಾಂಡ್‌ನ ಪಾತ್ರವೇ ಅಂತಿಮ ಎಂಬ ಸಂದೇಶವನ್ನು ಪಕ್ಷದ ಒಳಗೆ ರವಾನಿಸಿದೆ.

ಡಿ.ಕೆ.ಶಿವಕುಮಾರ್ ದೆಹಲಿ ಪಯಣ

ಈ ಎಲ್ಲ ಬೆಳವಣಿಗೆಗಳ ನಡುವೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೆಹಲಿ ಪಯಣ ರಾಜಕೀಯವಾಗಿ ಬಹುಮುಖ್ಯವಾಗಿದೆ.
“ರಾಜಕಾರಣಕ್ಕಾಗಿ ದೆಹಲಿಗೆ ಹೋಗುತ್ತಿದ್ದೇನೆ” ಎಂದು ಡಿಕೆಶಿ ಹೇಳಿರುವುದು, ಚರ್ಚೆಗೆ ಇನ್ನಷ್ಟು ತೂಕ ನೀಡಿದೆ.

ಒಪ್ಪಂದದ ಬಗ್ಗೆ ಮಾತನಾಡಿದ ಅವರು,
“ಕದ್ದು ಮುಚ್ಚಿ ಮಾತಾಡಿಲ್ಲ. ಸಿದ್ದರಾಮಯ್ಯ ಉಪಸ್ಥಿತಿಯಲ್ಲೇ ಹೈಕಮಾಂಡ್ ಮುಂದೆ ಮಾತುಕತೆ ನಡೆದಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಇತ್ತ, ತಮ್ಮ ಸಹೋದರ ಡಿ.ಕೆ. ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದಾಗ ಡಿಕೆಶಿ ಮುಗುಳ್ನಗುತ್ತಾ,
“ಕಾಲವೇ ಉತ್ತರ ಕೊಡುತ್ತದೆ. ನಾವು ಏನು ಮಾತನಾಡಿದ್ದೀವೋ ನಮಗೆ ಮಾತ್ರ ಗೊತ್ತು. ಟೈಮ್ ನೋಡಿ ಹೇಳುತ್ತೇನೆ” ಎಂದು ಹೇಳಿದ್ದು, ತಂತ್ರಜ್ಞಾನದ ಮೌನದ ಭಾಗವೆಂದು ವಿಶ್ಲೇಷಿಸಲಾಗಿದೆ.

ಹೈಕಮಾಂಡ್‌ನ ‘ನಿಧಾನಗತಿಯ ಎಚ್ಚರಿಕೆ’

ಈಗ ಕಾಂಗ್ರೆಸ್ ಹೈಕಮಾಂಡ್ ನೀಡಿರುವ ಸಂದೇಶ ಒಂದೇ – ಅವಸರ ಬೇಡ, ಸಂಘರ್ಷ ಬೇಡ, ಸಮತೋಲನ ಮುಖ್ಯ. ಅಧಿಕಾರ ಹಸ್ತಾಂತರದ ವಿಚಾರದಲ್ಲಿ ತುರ್ತು ನಿರ್ಧಾರಕ್ಕಿಂತ, ಪಕ್ಷದ ಸ್ಥಿರತೆ, ಸರ್ಕಾರದ ಆಯುಷ್ಯ ಮತ್ತು ಲೋಕಸಭೆ–ವಿಧಾನಸಭಾ ರಾಜಕಾರಣದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹೆಜ್ಜೆ ಇಡಬೇಕೆಂಬ ಎಚ್ಚರಿಕೆ ದೆಹಲಿಯಿಂದ ರವಾನೆಯಾಗಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment