ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಮಹಾಶಿವರಾತ್ರಿ ವಿಶೇಷ: ಈಶ್ವರವನದಲ್ಲಿ ರಕ್ತದಾನ ಶಿಬಿರದ ಜೊತೆಗೆ ರಸಪ್ರಶ್ನೆ, ಸಾಂಸ್ಕೃತಿಕ ಸಂಭ್ರಮ

On: February 15, 2026 9:02 PM
Follow Us:

ಶಿವರಾತ್ರಿ ಪ್ರಯುಕ್ತ ರಕ್ತದಾನ ಶಿಬಿರ: ಉಪವಾಸ–ಜಾಗರಣೆಗೆ ಮೀರಿ ರಕ್ತದಾನ ಮಹಾದಾನ – ನವ್ಯಶ್ರೀ ನಾಗೇಶ್ ಕರೆ

ಶಿವಮೊಗ್ಗ, ಫೆ.15: ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ಪರಮೇಶ್ವರನಿಗೆ ಸಮರ್ಪಿತವಾದ ನಿಜವಾದ ಭಕ್ತಿ. ಮತ್ತೊಬ್ಬರ ಜೀವ ಉಳಿಸುವ ರಕ್ತದಾನವೇ ಮಹಾದಾನಗಳಲ್ಲಿ ಶ್ರೇಷ್ಠ. ಶಿವರಾತ್ರಿಯ ಉಪವಾಸ, ಜಾಗರಣೆಗಿಂತಲೂ ರಕ್ತದಾನದ ಮೂಲಕ ಹೆಚ್ಚಿನ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ನವ್ಯಶ್ರೀ ಈಶ್ವರವನ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ನವ್ಯಶ್ರೀ ನಾಗೇಶ್ ಹೇಳಿದರು.

ತಾಲೂಕಿನ ಅಬ್ಬಲಗೆರೆಯ ಈಶ್ವರವನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಫೆಬ್ರವರಿ 15ರಂದು ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಶಿವರಾತ್ರಿಯಂದು ‘ಓಂ ನಮಃ ಶಿವಾಯ’ ಜಪ–ತಪ, ಪೂಜೆ, ಭಜನೆ, ಉಪವಾಸ, ಜಾಗರಣೆ ಮೂಲಕ ಶಿವನ ಅನುಗ್ರಹವನ್ನು ಪಡೆಯಲು ಭಕ್ತರು ಕೈಂಕರ್ಯಗಳಲ್ಲಿ ತೊಡಗುತ್ತಾರೆ. ಆದರೆ, ಪರಿಸರವೇ ಪರಮೇಶ್ವರ ಎಂಬ ಅರಿವಿನೊಂದಿಗೆ ಮಾನವ ಸೇವೆಯನ್ನು ಶಿವ ಸೇವೆಯಾಗಿ ಪರಿಗಣಿಸಿ ರಕ್ತದಾನ ಮಾಡುವುದೇ ನಿಜವಾದ ಭಕ್ತಿ ಎಂದು ಅವರು ಹೇಳಿದರು.

ಇಂದಿನ ದಿನಗಳಲ್ಲಿ ಸಕಾಲದಲ್ಲಿ ರಕ್ತ ಸಿಗದೆ ಅನೇಕರು ಪ್ರಾಣ ಕಳೆದುಕೊಳ್ಳುತ್ತಿರುವುದು ವಿಷಾದನೀಯ. ರಕ್ತದ ಕೊರತೆ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಯುವಕರಲ್ಲಿ ರಕ್ತದಾನದ ಕುರಿತು ಜಾಗೃತಿ ಇನ್ನಷ್ಟು ಅಗತ್ಯವಾಗಿದೆ. ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತಕಣಗಳು ಉತ್ಪತ್ತಿಯಾಗಿ ಚೈತನ್ಯ ವೃದ್ಧಿಯಾಗುತ್ತದೆ. ಆರೋಗ್ಯವಂತರಾಗಿರುವವರು ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ಸಮಾಜದ ಸಂಕಷ್ಟವನ್ನು ತಗ್ಗಿಸಬೇಕು ಎಂದು ಮನವಿ ಮಾಡಿದರು.

ಅಪಘಾತ, ಶಸ್ತ್ರಚಿಕಿತ್ಸೆ, ಹೆರಿಗೆ, ರಕ್ತಸ್ರಾವ ಸೇರಿದಂತೆ ಅನೇಕ ತುರ್ತು ಪರಿಸ್ಥಿತಿಗಳಲ್ಲಿ ರಕ್ತದ ಅವಶ್ಯಕತೆ ಅನಿವಾರ್ಯವಾಗುತ್ತದೆ. ಆ ಸಂದರ್ಭದಲ್ಲಿ ರಕ್ತದಾನಿಗಳು ದೊರೆಯದಿದ್ದರೆ ಜೀವಾಪಾಯ ಸಂಭವಿಸಬಹುದು. ಆದ್ದರಿಂದ ಅಗತ್ಯ ಪ್ರಮಾಣದ ರಕ್ತ ಸಂಗ್ರಹ ಅತ್ಯಂತ ಮಹತ್ವದ್ದಾಗಿದೆ. ಅರ್ಹ ದಾನಿಗಳು, ಯುವಕರು ಮುಂದೆ ಬಂದು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.

ಕೇವಲ ವಿಭೂತಿ ಧರಿಸಿ ‘ಓಂ ನಮಃ ಶಿವಾಯ’ ಎನ್ನುವುದಕ್ಕಿಂತ ಪ್ರಕೃತಿಯ ಪ್ರತಿಯೊಂದು ಕಣದಲ್ಲೂ ವ್ಯಾಪಿಸಿರುವ ಶಿವತತ್ವವನ್ನು ಅನುಭವಿಸುವುದೇ ನಿಜವಾದ ಪೂಜೆ. ಈಶ್ವರ ಎಂಬುದು ದೂರದ ಲೋಕದಲ್ಲಿರುವ ಅಸ್ತಿತ್ವವಲ್ಲ; ಜಗತ್ತಿನ ಪ್ರತಿಯೊಂದು ಜೀವಿ, ಪ್ರತಿಯೊಂದು ಕಣದಲ್ಲೂ ಇರುವ ಚೈತನ್ಯ ಎಂದು ಅವರು ಅಭಿಪ್ರಾಯಪಟ್ಟರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ. ವಿಜಯಕುಮಾರ್ ಮಾತನಾಡಿ, ಶಿವಮೊಗ್ಗದಲ್ಲಿ ರಕ್ತದಾನಿಗಳ ಸಂಖ್ಯೆ ಸಾಕಷ್ಟಿದ್ದರೂ ಅವಶ್ಯಕತೆ ಎದುರಾದಾಗ ಕೊರತೆ ಉಂಟಾಗುತ್ತಿದೆ ಎಂದು ತಿಳಿಸಿದರು. ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ರಕ್ತದಾನ ಆರೋಗ್ಯಕ್ಕೆ ಸಹಕಾರಿ. ದೇಹದಲ್ಲಿ ಗೊತ್ತಿಲ್ಲದ ಕೆಲವು ಕಾಯಿಲೆಗಳ ಪತ್ತೆಗೂ ಇದು ನೆರವಾಗುತ್ತದೆ. ಪ್ರತಿಯೊಬ್ಬರೂ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ರಕ್ತದ ಕೊರತೆಯನ್ನು ನಿವಾರಿಸೋಣ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ 120 ಬಾರಿ ರಕ್ತದಾನ ಮಾಡಿ ರಾಜ್ಯ ಪ್ರಶಸ್ತಿ ಪಡೆದ ಧರಣೇಂದ್ರ ದಿನಕರ್ ಮಾತನಾಡಿ, ಶಿವರಾತ್ರಿಯ ಪವಿತ್ರ ದಿನದಂದು ರಕ್ತದಾನ ಮಾಡುವುದರಿಂದ ಅಪಾರ ತೃಪ್ತಿ ಲಭಿಸುತ್ತದೆ. ಒಂದೇ ದಾನದ ಮೂಲಕ ನಾಲ್ವರು ಜೀವಗಳಿಗೆ ಆಶಾಕಿರಣವಾಗಬಹುದು. ನವ್ಯಶ್ರೀ ನಾಗೇಶ್ ಅವರ ಸೇವಾಕಾರ್ಯ ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರು ಮತ್ತು ಶಿವಭಕ್ತರು ಈಶ್ವರವನದಲ್ಲಿ ನೆಲೆಸಿರುವ ವಿವಿಧ ಮರಗಳ ಸುತ್ತು ಹಾಕಿ, ಪ್ರತಿ ಮರದ ಹೆಸರನ್ನು ತಿಳಿದುಕೊಂಡು, ಶಿವಶ್ಲೋಕಗಳನ್ನು ಪಠಿಸಿದರು. ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ಮುಕ್ತ ಜೀವನ ಹಾಗೂ ಆಹಾರ ವ್ಯರ್ಥ ಮಾಡದಿರಲು ಪ್ರತಿಜ್ಞೆ ಸ್ವೀಕರಿಸಿದರು. ಗಂಗಾಜಲ ಸಮರ್ಪಿಸಿ, ನಂದೀಶ್ವರನಿಗೆ ನಮಸ್ಕರಿಸಿ ಪ್ರಸಾದ ಸೇವಿಸಿದರು.

ಇದೇ ವೇಳೆ ಅರಣ್ಯ, ಕಾಡು, ಆಹಾರ ಪದ್ಧತಿ, ಪ್ರಾಣಿ–ಪಕ್ಷಿಗಳು, ಅಣೆಕಟ್ಟು, ನದಿ, ನೀರು ಮತ್ತು ಗಾಳಿ ಕುರಿತ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸರಿಯಾದ ಉತ್ತರ ನೀಡಿದವರಿಗೆ ಪುಸ್ತಕಗಳನ್ನು ಬಹುಮಾನವಾಗಿ ವಿತರಿಸಲಾಯಿತು.

ಮಹಾಶಿವರಾತ್ರಿ ಪ್ರಯುಕ್ತ ಈಶ್ವರ ವನದಲ್ಲಿ ಭರತನಾಟ್ಯ, ಭಜನೆ ಹಾಗೂ ಭಕ್ತಿಗಾನ ಕಾರ್ಯಕ್ರಮಗಳನ್ನು ಭಕ್ತಿಭಾವದಿಂದ ಏರ್ಪಡಿಸಲಾಗಿತ್ತು. ಸ್ಥಳೀಯ ಕಲಾವಿದರು ಶಿವತತ್ವವನ್ನು ಪ್ರತಿಬಿಂಬಿಸುವ ನೃತ್ಯ–ಗಾನಗಳ ಮೂಲಕ ಭಕ್ತರನ್ನು ರಂಜಿಸಿದರು. ಶಿವನಾಮ ಸ್ಮರಣೆಯೊಂದಿಗೆ ನಡೆದ ಭಜನೆಗಳು ವಾತಾವರಣವನ್ನು ಆಧ್ಯಾತ್ಮಿಕ ಮೆರಗು ತುಂಬಿ, ಭಕ್ತರಲ್ಲಿ ಭಕ್ತಿ ಮತ್ತು ಭಾವಭರವಸೆಯನ್ನು ಮೂಡಿಸಿತು.

ಈಶ್ವರ ವನದಲ್ಲಿ ಡಾ. ರತ್ನಾಕರ್ ಅವರ ಛಾಯಾಚಿತ್ರ ಪ್ರದರ್ಶನ ಭಕ್ತರ ಗಮನಸೆಳೆದಿತು. ಪರಿಸರ ಸೌಂದರ್ಯ, ನಾನಾ ವಿಧದ ಪಕ್ಷಿಗಳು ಹಾಗೂ ಪ್ರಕೃತಿ ವೈವಿಧ್ಯತೆಯನ್ನು ಆಕರ್ಷಕವಾಗಿ ಸೆರೆಹಿಡಿದಿರುವ ಚಿತ್ರಗಳು ನೋಡುಗರ ಮನಸೆಳೆಯುವಂತಾಗಿದ್ದವು. ಪ್ರದರ್ಶನ ವೀಕ್ಷಿಸಿದ ಭಕ್ತರು ಚಿತ್ರಗಳ ನೈಜತೆ ಮತ್ತು ಕಲಾತ್ಮಕತೆ ಕುರಿತು ಪ್ರಶಂಸೆ ವ್ಯಕ್ತಪಡಿಸಿ, ಪರಿಸರ ಸಂರಕ್ಷಣೆಯ ಮಹತ್ವವನ್ನು ಮೆಚ್ಚಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಖಜಾಂಚಿ ಆರ್. ಮನೋಹರ್, ಆರತಿ ತಿವಾರಿ, ಸಂತೋಷ್ ಎಲಿಗಾರ್, ನಾಗರಾಜ್ ಶೆಟ್ಟರ್, ಪಿ. ಪ್ರದೀಪ್, ಎಸ್. ಸುಬ್ರಹ್ಮಣ್ಯ, ವಿಜಯಕುಮಾರ್, ಲಕ್ಷ್ಮೀ, ಡಾ. ದಿನಕರ್ ಸೇರಿದಂತೆ ಟ್ರಸ್ಟ್ ಪದಾಧಿಕಾರಿಗಳಾದ ಶಶಿಕಲಾ ನಾಗೇಶ್, ಶರತ್, ಶರಣ್ಯ ಹಾಗೂ ಅನೇಕ ರಕ್ತದಾನಿಗಳು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Leave a Comment