ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಶಿವಮೊಗ್ಗದ ಬೆಳಲಕಟ್ಟೆಯಲ್ಲಿ ಬೆಚ್ಚಿಬೀಳಿಸಿದ ಕೃತ್ಯ: ಜೀವಂತ ಸುಟ್ಟ ಪ್ರಕರಣಕ್ಕೆ ಕೋರ್ಟ್ ಕಠಿಣ ತೀರ್ಪು – ಆರೋಪಿಗಳಿಗೆ ಜೀವಾವಧಿ ಶಿಕ್ಷೆ

On: March 17, 2026 1:15 PM
Follow Us:

ಶಿವಮೊಗ್ಗ: ಜಮೀನು ವೈಷಮ್ಯದಿಂದ ಹುಟ್ಟಿದ ದ್ವೇಷ ಹೇಗೆ ಭೀಕರ ಹತ್ಯೆಗೆ ಕಾರಣವಾಗಬಹುದು ಎಂಬುದಕ್ಕೆ ಬೆಳಲಕಟ್ಟೆ ಗ್ರಾಮದ ಮಹೇಶಪ್ಪ ಹತ್ಯೆ ಪ್ರಕರಣ ಒಂದು ಕತ್ತಲೆ ಅಧ್ಯಾಯವಾಗಿ ಉಳಿದಿದೆ. ಆದರೆ ಇದೇ ಪ್ರಕರಣದಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸರ ಸೂಕ್ಷ್ಮ ಮತ್ತು ಸಮರ್ಥ ತನಿಖೆ ಅಪರಾಧಿಗಳಿಗೆ ಶಿಕ್ಷೆ ಖಚಿತಪಡಿಸಿ, ನ್ಯಾಯಕ್ಕೆ ಗೆಲುವು ತಂದುಕೊಟ್ಟಿದೆ.

ಮಹೇಶಪ್ಪ ಹಾಗೂ ಆರೋಪಿತರಾದ ಕುಮಾರ್ (57) ಮತ್ತು ಕಾರ್ತಿಕ್ (28) ಇವರ ನಡುವೆ ಹಲವು ವರ್ಷಗಳಿಂದ ಜಮೀನು ವಿಚಾರವಾಗಿ ಉಂಟಾಗಿದ್ದ ವೈಮನಸ್ಸು ದಿನದಿಂದ ದಿನಕ್ಕೆ ತೀವ್ರಗೊಂಡಿತ್ತು. ಹೊರಗೆ ಸಾಮಾನ್ಯ ಗಲಾಟೆಯಂತೆ ಕಾಣುತ್ತಿದ್ದ ಈ ವಿವಾದ, ಒಳಗೆ ಕೊಲೆ ಸಂಚಿನ ರೂಪ ತಾಳಿತ್ತು. ಕೊನೆಗೆ 03-12-2023ರಂದು ಆರೋಪಿತರು ಮಹೇಶಪ್ಪನನ್ನು ಜೀವಂತವಾಗಿ ಕೊಲ್ಲುವ ಕ್ರೂರ ಸಂಚು ರೂಪಿಸಿದರು.

ಡಿ.03, 2023ರ ಬೆಳಿಗ್ಗೆ—ತನ್ನ ಮಗಳ ಮನೆಗೆ ತೆರಳುತ್ತಿದ್ದ ಮಹೇಶಪ್ಪ ದ್ವಿಚಕ್ರ ವಾಹನದಲ್ಲಿ ಸುಮಾರು ₹60,000 ನಗದು ಇಟ್ಟುಕೊಂಡು ತೋಟದ ಕೆಲಸಕ್ಕಾಗಿ ಹೊರಟಿದ್ದರು. ಈ ವೇಳೆ ಮತ್ತೋಡು ಹನಸವಾಡಿ ಕ್ರಾಸ್ ಬಳಿ ಹೊಂಚು ಹಾಕಿ ಕಾಯುತ್ತಿದ್ದ ದಾಯಾದಿ ಕುಮಾರಪ್ಪ ಹಾಗೂ ಅವನ ಮಗ ಕಾರ್ತಿಕ್, ಮಹೇಶಪ್ಪನನ್ನು ತಡೆದು ದಾಳಿ ನಡೆಸಿದರು. ಆರೋಪಿತರು ಕ್ಷಣಾರ್ಧದಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ಅವನನ್ನು ಜೀವಂತವಾಗಿ ದಹಿಸಿದರು. ಅಲ್ಲದೆ, ಮಹೇಶಪ್ಪನ ಬಳಿ ಇದ್ದ ಹಣ ಹಾಗೂ ಬೈಕ್‌ನನ್ನೂ ಸುಟ್ಟು ಹಾಕಿ ಆರೋಪಿತರು ಪರಾರಿಯಾದರು.

ಗಂಭೀರವಾಗಿ ಸುಟ್ಟ ಗಾಯಗಳಿಂದ ನರಳುತ್ತಿದ್ದ ಮಹೇಶಪ್ಪನು ತನ್ನ ಅಳಿಯನಿಗೆ ಕರೆ ಮಾಡಿ, ತನ್ನ ಮೇಲೆ ದಾಳಿ ಮಾಡಿದವರ ಹೆಸರನ್ನು ತಿಳಿಸಿದ್ದನು. ಈ ಹೇಳಿಕೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿ ಪರಿಣಮಿಸಿತು. ಬಳಿಕ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದರೂ, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತರಾಗಿದ್ದರು.

ಮೂರು ಎಕರೆ ಜಮೀನು ವಿಚಾರವಾಗಿ ಮಹೇಶಪ್ಪ ಮತ್ತು ಕುಮಾರಪ್ಪ ನಡುವೆ ಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿದ್ದು, ಈ ವಿವಾದದ ಹಿನ್ನೆಲೆಯಲ್ಲೇ ಈ ದಾರುಣ ಘಟನೆ ನಡೆದಿತ್ತು.

ಘಟನೆಯ ತೀವ್ರತೆ ಅರಿತ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ತಕ್ಷಣವೇ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಗಂಭೀರವಾಗಿ ಕೈಗೆತ್ತಿಕೊಂಡರು. ಪ್ರಾಥಮಿಕವಾಗಿ ಇದು ಆಕಸ್ಮಿಕ ಕೃತ್ಯವೇ ಅಥವಾ ಪೂರ್ವಯೋಜಿತ ಹತ್ಯೆಯೇ ಎಂಬ ಅನುಮಾನಗಳ ನಡುವೆಯೇ, ತನಿಖಾಧಿಕಾರಿಗಳ ತಂಡ ಸಾಕ್ಷ್ಯಾಧಾರಗಳನ್ನು ಕಲೆಹಾಕಲು ಕಾರ್ಯಪ್ರವೃತ್ತವಾಯಿತು.

ಆಗಿನ ತನಿಖಾಧಿಕಾರಿಗಳಾದ ಪಿಐ ಸತ್ಯನಾರಾಯಣ ವೈ. ಅವರ ನೇತೃತ್ವದಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸರ ತಂಡ ಅತ್ಯಂತ ಜಾಣತನ, ಸಮರ್ಪಣೆ ಹಾಗೂ ವೃತ್ತಿಪರ ನಿಖರತೆಯಿಂದ ತನಿಖೆ ನಡೆಸಿದ್ದು ಗಮನಾರ್ಹವಾಗಿದೆ. ಘಟನೆ ನಡೆದ ಕ್ಷಣದಿಂದಲೇ ಪ್ರತಿಯೊಂದು ಸುಳಿವನ್ನೂ ಕಳೆದುಕೊಳ್ಳದೆ, ಘಟನಾ ಸ್ಥಳದ ವೈಜ್ಞಾನಿಕ ಪರಿಶೀಲನೆ, ಸಾಕ್ಷಿದಾರರ ಸಮಗ್ರ ಹೇಳಿಕೆಗಳ ಸಂಗ್ರಹಣೆ, ತಾಂತ್ರಿಕ ಮಾಹಿತಿಗಳ ವಿಶ್ಲೇಷಣೆ ಹಾಗೂ ಆರೋಪಿತರ ಚಲನವಲನಗಳ ಸೂಕ್ಷ್ಮ ಮೌಲ್ಯಮಾಪನದ ಎಲ್ಲಾ ಸೇರಿ ಪ್ರಕರಣದ ನಿಜಸ್ವರೂಪವನ್ನು ಬಹಿರಂಗಪಡಿಸಿದರು.

ಪಿಐ ಸತ್ಯನಾರಾಯಣ ಅವರ ದಿಟ್ಟ ಮಾರ್ಗದರ್ಶನದಲ್ಲಿ ಪೊಲೀಸರು ಪ್ರಕರಣವನ್ನು ಎಲ್ಲಾ ರೀತಿಯಲ್ಲಿ ವಿಶ್ಲೇಷಿಸಿ, ಇದು ಪೂರ್ವಯೋಜಿತ ಕ್ರೂರ ಹತ್ಯೆ ಎಂಬುದನ್ನು ಅಸಂದಿಗ್ಧವಾಗಿ ಸಾಬೀತುಪಡಿಸುವಲ್ಲಿ ಯಶಸ್ವಿಯಾದರು. ಯಾವುದೇ ಅಂಶದಲ್ಲೂ ಲೋಪವಾಗದಂತೆ ಕಾನೂನುಬದ್ಧವಾಗಿ ಪ್ರತಿಯೊಂದು ಸಾಕ್ಷ್ಯವನ್ನು ಬಲಪಡಿಸಿ, ದೃಢವಾದ ಮತ್ತು ನಿರ್ಣಾಯಕ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಮೂಲಕ ಅಪರಾಧಿಗಳಿಗೆ ಶಿಕ್ಷೆ ಖಚಿತಪಡಿಸುವಲ್ಲಿ ಪೊಲೀಸರ ತನಿಖೆ ಮಾದರಿಯಾಗಿದೆ.

ನಂತರ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಮಮತಾ ಬಿ.ಎಸ್ ಅವರು ಖಡಕ್ ಹಾಗೂ ತೀಕ್ಷ್ಣ ವಾದ ಮಂಡಿಸಿದರು. ಪೊಲೀಸರ ಸಂಗ್ರಹಿಸಿದ ದೃಢ ಸಾಕ್ಷ್ಯಾಧಾರಗಳು ನ್ಯಾಯಾಲಯದ ಮುಂದೆ ಸ್ಪಷ್ಟ ಚಿತ್ರಣ ನೀಡಿದ್ದು, ಆರೋಪಿಗಳ ವಿರುದ್ಧದ ಅಪರಾಧ ದೃಢವಾಗಿ ಸಾಬೀತಾಯಿತು.

ಈ ಹಿನ್ನೆಲೆಯಲ್ಲಿ ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ಶ್ರೀ ಅಭಯ್ ಧನಪಾಲ್ ಚೌಗಲ ಅವರು ಆರೋಪಿಗಳಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ಜೊತೆಗೆ ₹57,000 ದಂಡ ವಿಧಿಸಿ ತೀರ್ಪು ನೀಡಿದರು.

ಈ ಪ್ರಕರಣದಲ್ಲಿ ಪೊಲೀಸರ ವೇಗದ ಹಾಗೂ ನಿಖರ ತನಿಖೆ, ಸಾಕ್ಷ್ಯಾಧಾರಗಳ ಸಂಗ್ರಹಣೆಯಲ್ಲಿನ ವೃತ್ತಿಪರತೆ ಮತ್ತು ನ್ಯಾಯಾಂಗದ ದೃಢ ನಿಲುವು ಎಲ್ಲಾ ಸೇರಿ ಅಪರಾಧಿಗಳಿಗೆ ತಕ್ಕ ಶಿಕ್ಷೆ ದೊರಕುವಂತೆ ಮಾಡಿದೆ. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಅನಿವಾರ್ಯ ಎಂಬುದಕ್ಕೆ ಇದು ಗಟ್ಟಿಯಾದ ಸಂದೇಶವಾಗಿದ್ದು, ಸಮಾಜದಲ್ಲಿ ನ್ಯಾಯ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment