ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಮೇ 17ಕ್ಕೆ ಶಿವಮೊಗ್ಗ ಸಜ್ಜು: ಇತಿಹಾಸ ನಿರ್ಮಿಸಲಿರುವ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆ

On: March 22, 2026 11:21 PM
Follow Us:

ಶಿವಮೊಗ್ಗದಲ್ಲಿ ಇತಿಹಾಸ ನಿರ್ಮಿಸಲಿರುವ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ
ಸಮಗ್ರ ಸಿದ್ಧತೆಗಳಿಗೆ ವೇಗ – ಸಮಾಜದ ಸರ್ವಾಂಗೀಣ ಏಕತೆಯ ಸಂಕೇತವಾಗುವ ಮಹಾಸಂಭ್ರಮ

ಶಿವಮೊಗ್ಗ: ನಗರದ ಶ್ರೀ ಅಲ್ಲಮಪ್ರಭು ಮೈದಾನ (ಫ್ರೀಡಂ ಪಾರ್ಕ್) ನಲ್ಲಿ ದಿನಾಂಕ 17-05-2026ರ ಭಾನುವಾರದಂದು ನಡೆಯಲಿರುವ ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ, ಧರ್ಮಜಾಗೃತಿ ಸಭೆ ಹಾಗೂ ರಾಜ್ಯದ ಹೆಮ್ಮೆಯ ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಬಿ.ಎಸ್. ಯಡಿಯೂರಪ್ಪ ನವರ ಅಭಿನಂದನಾ ಸಮಾರಂಭವು ಶಿವಮೊಗ್ಗ ಜಿಲ್ಲೆಯಷ್ಟೇ ಅಲ್ಲ, ರಾಜ್ಯದ ಮಟ್ಟದಲ್ಲಿ ಮಹತ್ವದ ಧಾರ್ಮಿಕ-ಸಾಮಾಜಿಕ ಉತ್ಸವವಾಗಿ ರೂಪುಗೊಳ್ಳುತ್ತಿದೆ. ಈ ಮಹೋತ್ಸವವು ಬಸವೇಶ್ವರ ವೀರಶೈವ ಲಿಂಗಾಯತ ಸಮಾಜದ ಶತಮಾನೋತ್ಸವದ ಸಂಭ್ರಮದೊಂದಿಗೆ ನಡೆಯುತ್ತಿರುವುದು ವಿಶೇಷವಾಗಿದೆ.

ಈ ಮಹೋತ್ಸವವನ್ನು ಭವ್ಯ, ಅದ್ದೂರಿ ಹಾಗೂ ಶಿಸ್ತುಬದ್ಧವಾಗಿ ಆಯೋಜಿಸಲು ವಿವಿಧ ಹಂತಗಳಲ್ಲಿ ಪೂರ್ವಭಾವಿ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ಇದರ ಅಂಗವಾಗಿ ಇಂದು ಸಂಜೆ ವೀರಶೈವ ಕಲ್ಯಾಣ ಮಂದಿರದಲ್ಲಿ ಅಡ್ಡಪಲ್ಲಕ್ಕಿ ಮಹೋತ್ಸವ ಸಮಿತಿಯ ನೂತನ ಕಚೇರಿಯನ್ನು ಉದ್ಘಾಟಿಸಲಾಯಿತು. ಈ ಕಚೇರಿ ಮುಂದಿನ ದಿನಗಳಲ್ಲಿ ಎಲ್ಲಾ ಸಿದ್ಧತೆಗಳ ಕೇಂದ್ರವಾಗಲಿದೆ.

ಕಾರ್ಯಕ್ರಮದ ಸಮಗ್ರ ರೂಪರೇಷೆಗಳನ್ನು ಅಂತಿಮಗೊಳಿಸಲು ಮತ್ತು ಜವಾಬ್ದಾರಿಗಳನ್ನು ಹಂಚಿಕೊಳ್ಳಲು ಇಂದು ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಸಮಾಜದ ಗಣ್ಯರು, ಪ್ರಮುಖ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಹೋತ್ಸವದ ಯಶಸ್ಸಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಅವರು ಮಾತನಾಡಿ, ಅಡ್ಡಪಲ್ಲಕ್ಕಿ ಮಹೋತ್ಸವವು ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ, ಅದು ಸಮಾಜದ ಒಗ್ಗಟ್ಟು ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಹೇಳಿದರು. ಪಂಚಪೀಠಾಧಿಪತಿಗಳಾದ ರಂಭಾಪುರಿ ಶ್ರೀ, ಶ್ರೀಶೈಲ ಶ್ರೀ, ಕಾಶಿ ಶ್ರೀ, ಉಜ್ಜಯಿನಿ ಶ್ರೀ ಮತ್ತು ಕೇದಾರ ಶ್ರೀಗಳಿಗೆ ಆಹ್ವಾನ ನೀಡಲಾಗಿದ್ದು, ಅವರ ಆಗಮನದಿಂದ ಕಾರ್ಯಕ್ರಮಕ್ಕೆ ವಿಶೇಷ ಮಹತ್ವ ಸಿಗಲಿದೆ ಎಂದು ಹೇಳಿದರು.

ಪ್ರತಿ ಭಕ್ತನಿಗೂ ಅನುಕೂಲವಾಗುವಂತೆ ಸಾರಿಗೆ, ಕುಡಿಯುವ ನೀರು, ಪ್ರಸಾದ ವಿತರಣೆ, ಭದ್ರತೆ, ಸ್ವಚ್ಛತೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಸಮಗ್ರವಾಗಿ ರೂಪಿಸಲಾಗುತ್ತಿದೆ. ಸ್ವಾಗತ, ಪ್ರಚಾರ, ಅಲಂಕಾರ, ವೇದಿಕೆ ನಿರ್ವಹಣೆ, ಪ್ರಸಾದ ವಿತರಣೆ, ವಾಹನ ವ್ಯವಸ್ಥೆ ಸೇರಿದಂತೆ ಅನೇಕ ಉಪಸಮಿತಿಗಳನ್ನು ರಚಿಸಲಾಗಿದ್ದು, ಪ್ರತಿಯೊಂದು ಸಮಿತಿಗೂ ಸ್ಪಷ್ಟವಾದ ಜವಾಬ್ದಾರಿಗಳನ್ನು ಹಂಚಲಾಗಿದೆ ಎಂದು ಹೇಳಿದರು.

ಸಂಸದರಾದ ಬಿ.ವೈ. ರಾಘವೇಂದ್ರ ಅವರು ಮಾತನಾಡಿ, “32 ವರ್ಷಗಳ ಬಳಿಕ ನಡೆಯುತ್ತಿರುವ ಈ ಮಹೋತ್ಸವ ಇಂದಿನ ಪೀಳಿಗೆಯವರಿಗೆ ಐತಿಹಾಸಿಕ ಅನುಭವವಾಗಲಿದೆ. ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಎಲ್ಲರೂ ಕೈಜೋಡಿಸಿದಾಗ ಮಾತ್ರ ಈ ಕಾರ್ಯಕ್ರಮ ಯಶಸ್ವಿಯಾಗುತ್ತದೆ” ಎಂದು ಹೇಳಿದರು. ತಮ್ಮ ತಂದೆ ಬಿ.ಎಸ್. ಯಡಿಯೂರಪ್ಪ ಅವರ ಸನ್ಮಾನ ಕಾರ್ಯಕ್ರಮವೂ ಇದೇ ವೇದಿಕೆಯಲ್ಲಿ ನಡೆಯುತ್ತಿರುವುದು ವಿಶೇಷ ಎಂದು ಹೇಳಿದರು.

ಬಸವೇಶ್ವರ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಎಸ್.ಎಸ್. ಜ್ಯೋತಿಪ್ರಕಾಶ್ ಅವರು ಮಾತನಾಡಿ, ಸಮಾಜದ ಎಲ್ಲಾ ವರ್ಗಗಳೂ ಒಂದಾಗಿ ಈ ಮಹೋತ್ಸವವನ್ನು ಯಶಸ್ವಿಗೊಳಿಸಲು ಕೈಜೋಡಿಸಬೇಕು ಎಂದು ಕರೆ ನೀಡಿದರು. ಹಿಂದಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಸಹಕಾರ ನೀಡಿದಂತೆ ಈ ಬಾರಿಯೂ ಸಂಪೂರ್ಣ ಬೆಂಬಲ ನೀಡುವುದಾಗಿ ಅವರು ಭರವಸೆ ನೀಡಿದರು.

ಶಾಸಕರಾದ ಚನ್ನಬಸಪ್ಪ ಅವರು ಮಾತನಾಡಿ, ಈ ಹಿಂದೆ ನೆಹರು ಕ್ರೀಡಾಂಗಣದಲ್ಲಿ ನಡೆದ ಮಹೋತ್ಸವದ ಯಶಸ್ಸನ್ನು ಸ್ಮರಿಸಿ, ಅದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಈ ಬಾರಿ ಕಾರ್ಯಕ್ರಮವನ್ನು ಆಯೋಜಿಸಲು ಎಲ್ಲರೂ ಶ್ರಮಿಸಬೇಕೆಂದು ಹೇಳಿದರು. “ಈ ಮಹೋತ್ಸವ ಶಿವಮೊಗ್ಗದ ಹೆಮ್ಮೆಯಾಗಬೇಕು” ಎಂದು ಅವರು ಅಭಿಪ್ರಾಯಪಟ್ಟರು.

ಭದ್ರಾವತಿ ಶಾಸಕ ಸಂಗಮೇಶ್ ರವರ ಸಹೋದರ ಜಗದೀಶ್ ಅವರು ಮಾತನಾಡಿ, ತಮ್ಮ ತಾಲ್ಲೂಕಿನಿಂದ ಕನಿಷ್ಠ 25ಕ್ಕೂ ಹೆಚ್ಚು ಬಸ್ಸುಗಳ ಮೂಲಕ ಭಕ್ತರನ್ನು ಕರೆತರಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು. ಇದರಿಂದ ಗ್ರಾಮೀಣ ಭಾಗದ ಜನರೂ ಮಹೋತ್ಸವದಲ್ಲಿ ಭಾಗವಹಿಸುವಂತಾಗುತ್ತದೆ ಎಂದು ಹೇಳಿದರು.

ಮಾಜಿ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್ ಅವರು ಮಾತನಾಡಿ, 32 ವರ್ಷಗಳ ಹಿಂದೆ ನಡೆದ ಅಡ್ಡಪಲ್ಲಕ್ಕಿ ಮಹೋತ್ಸವವು ಇಂದಿಗೂ ಜನಮನದಲ್ಲಿ ಉಳಿದಿದೆ. ಅದೇ ರೀತಿಯ ಭಾವನೆ ಮತ್ತು ಭಕ್ತಿಭಾವದಿಂದ ಈ ಬಾರಿ ನಡೆಯುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಹೇಳಿದರು. “ಇದು ಕೇವಲ ಉತ್ಸವವಲ್ಲ, ನಮ್ಮ ಸಂಸ್ಕೃತಿಯ ಪುನರುಜ್ಜೀವನ” ಎಂದರು.

ಮಾಜಿ ಸದಸ್ಯರಾದ ಎಸ್. ರುದ್ರೇಗೌಡ್ರು ಮಾತನಾಡಿ, ಈ ಕಾರ್ಯಕ್ರಮದಲ್ಲಿ ಜಗಜ್ಯೋತಿ ಬಸವೇಶ್ವರರ ಸಂದೇಶಗಳು ಮತ್ತು ಭಾವಚಿತ್ರ ಜನರಿಗೆ ತಲುಪಿಸುವ ಪ್ರಯತ್ನ ಮಾಡಬೇಕು. ಮಹಿಳೆಯರು ಮತ್ತು ಯುವಜನರಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂದು ಸಲಹೆ ನೀಡಿದರು. ಶಿವಮೊಗ್ಗದಲ್ಲಿ ದಾಖಲೆ ನಿರ್ಮಿಸುವಂತಹ ಕಾರ್ಯಕ್ರಮವಾಗಬೇಕೆಂದು ಅವರು ಆಶಿಸಿದರು.

ಸಭೆಯಲ್ಲಿ ಭಾಗವಹಿಸಿದ ಎಲ್ಲರೂ ಮಹೋತ್ಸವವನ್ನು ಯಶಸ್ವಿಗೊಳಿಸಲು ತಮ್ಮ ಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು. ವಿವಿಧ ಸಲಹೆಗಳು, ಸೂಚನೆಗಳು ಹಾಗೂ ಕಾರ್ಯಯೋಜನೆಗಳನ್ನು ಚರ್ಚಿಸಿ, ಕಾರ್ಯಕ್ರಮವನ್ನು ಸುಸೂತ್ರವಾಗಿ ನಡೆಸಲು ನಿರ್ಧರಿಸಲಾಯಿತು.

ಈ ಸಂದರ್ಭದಲ್ಲಿ ಎಡೆಯೂರು ಶ್ರೀ, ಬಿಳಿಕಿ ಶ್ರೀ, ಮಳಲಿ ಶ್ರೀ, ತೊಗರ್ಸಿ ಶ್ರೀ, ತಾವರೆಕೆರೆ ಶ್ರೀ, ಕೋಣಂದೂರು ಶ್ರೀ ಸೇರಿದಂತೆ ಅನೇಕ ಪೂಜ್ಯ ಗುರುಗಳು ಆಶೀರ್ವಾದ ನೀಡಿದರು.

ಈ ಸಂದರ್ಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಚನ್ನಬಸಪ್ಪ, ಮಾಜಿ ಶಾಸಕರಾದ ಆಯನೂರು ಮಂಜುನಾಥ್, ಎಸ್. ರುದ್ರೇಗೌಡ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ್ ಸರ್ಜಿ, ಸಿ.ಎಸ್. ಷಡಾಕ್ಷರಿ, ಎಸ್.ಎಸ್. ಜ್ಯೋತಿಪ್ರಕಾಶ್, ಬಳ್ಳೇಕೆರೆ ಸಂತೋಷ, ಎಸ್.ಪಿ. ದಿನೇಶ್, ಜಗದೀಶ್, ರುದ್ರಮಣಿ ಸಜ್ಜನ್, ಮಹೇಶ್ವರಯ್ಯ, ಟಿ.ಬಿ.ಜಗದೀಶ್, ಪ್ರಕಾಶ್, ವಿರೂಪಾಕ್ಷಪ್ಪ, ಮಲ್ಲಿಕಾರ್ಜುನ ಸ್ವಾಮಿ, ಶ್ರೀಮತಿ ಶಾಂತಾ ಆನಂದ, ಅನಿತಾ ರವಿಶಂಕರ್, ರತ್ನಮ್ಮ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Leave a Comment