ಅಜ್ಜಂಪುರ, ಮಾರ್ಚ್ 30: ಬದುಕಿನ ಉತ್ತುಂಗತೆ ಮತ್ತು ಶ್ರೇಯಸ್ಸು ಧರ್ಮಾಚರಣೆಯಲ್ಲಿ ಇದೆ. ಮನಸ್ಸು ಅಭಿವೃದ್ಧಿಯಾಗಬೇಕು, ಹೃದಯ ವಿಶಾಲವಾಗಬೇಕು. ಭಾವನೆಗಳು ಶುದ್ಧವಾಗಿದ್ದರೆ ಜೀವನದಲ್ಲಿ ನಿಜವಾದ ಬೆಳವಣಿಗೆ ಸಾಧ್ಯ. ಜನರಲ್ಲಿ ಅರಿವು ಮತ್ತು ಪ್ರಜ್ಞೆ ಮೂಡಬೇಕು. ಯಥಾರ್ಥ ಮಾನವನಾಗಿ ಬದುಕಿದರೆ ಜೀವನದಲ್ಲಿ ಸುಖ–ಶಾಂತಿ ದೊರೆಯುತ್ತದೆ ಎಂದು ಶ್ರೀ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯರು ಅಭಿಪ್ರಾಯಪಟ್ಟರು.
ಅವರು ಸೋಮವಾರ ತಾಲೂಕು ಹಣ್ಣೆಮಠದಲ್ಲಿ ನಡೆದ ಶ್ರೀ ಶಿವಾನಂದ ನೂತನ ಗುರುನಿವಾಸ ಉದ್ಘಾಟನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.

ಸುಖಮಯ ಜೀವನಕ್ಕಾಗಿ ಪ್ರಯತ್ನ ಮತ್ತು ಸಾಧನೆ ಅಗತ್ಯ. ಬದುಕು ಸುಧಾರಿಸಲು ಆಧ್ಯಾತ್ಮಿಕ ಅರಿವು ಬೇಕು. ನಡೆ-ನುಡಿ ಮತ್ತು ಮನಸ್ಸಿನ ಶುದ್ಧತೆ ನಿಜವಾದ ಆಧ್ಯಾತ್ಮದ ಮೂಲ. ಕೆಲವರ ಜೀವನ ಸುಖಮಯವಾಗಿದ್ದರೆ, ಇನ್ನೂ ಕೆಲವರು ಸಂಕಷ್ಟಗಳನ್ನು ಎದುರಿಸುತ್ತಾರೆ. ಮಾನವ ಜೀವನದಲ್ಲಿ ಬುದ್ಧಿಗಿಂತ ಹೃದಯದ ಮಹತ್ವ ಹೆಚ್ಚಾಗಿದೆ ಎಂದು ಅವರು ಹೇಳಿದರು.
ವೀರಶೈವ ಧರ್ಮ ಸಂಸ್ಕೃತಿಯಲ್ಲಿ ಜ್ಞಾನ ಮತ್ತು ಕ್ರಿಯೆಗೆ ವಿಶೇಷ ಸ್ಥಾನವಿದೆ. ಸಮಾಜಮುಖಿ ಚಿಂತನೆಗಳ ಮೂಲಕ ಧರ್ಮದ ಸಾರವನ್ನು ಜನರಲ್ಲಿ ಹರಡಲಾಗುತ್ತಿದೆ. ಹನ್ನೆಮಠದಲ್ಲಿ ಲಿಂಗೈಕ್ಯ ಶಿವಾನಂದ ಶಿವಾಚಾರ್ಯರ ಸ್ಮರಣಾರ್ಥ ನಿರ್ಮಿಸಲಾದ ಗುರುನಿವಾಸ ಉದ್ಘಾಟನೆಯು ಸಂತೋಷ ತಂದಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯರು ಮಾತನಾಡಿ, ಶುದ್ಧ ಮನಸ್ಸು ದೇವರ ದರ್ಶನಕ್ಕೆ ದಾರಿ ಮಾಡಿಕೊಡುತ್ತದೆ. ಒಳ್ಳೆಯದು–ಕೆಟ್ಟದ್ದು ಎಲ್ಲವೂ ಮನಸ್ಸಿನಲ್ಲೇ ಹುಟ್ಟುತ್ತದೆ. ನಿರಂತರ ಸಾಧನೆ ಮತ್ತು ಶ್ರದ್ಧೆಯಿಂದ ಶ್ರೇಯಸ್ಸು ಸಾಧಿಸಬಹುದು ಎಂದರು.
ಮಾಜಿ ಶಾಸಕ ಡಿ.ಎಸ್. ಸುರೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಶಾಂತಿ ಮತ್ತು ಸಮೃದ್ಧಿಗೆ ಧರ್ಮಾಚರಣೆ ಅಗತ್ಯ. ಶಿಕ್ಷಣದ ಜೊತೆಗೆ ಸಂಸ್ಕಾರ ಬೆಳೆಸಿದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹುಲಿಕೇರೆ ವಿರೂಪಾಕ್ಷಲಿಂಗ ಶಿವಾಚಾರ್ಯರು, ಎಡೆಯೂರು ರೇಣುಕ ಶಿವಾಚಾರ್ಯರು, ತರೀಕೆರೆ ಜಗದೀಶ್ವರ ಶಿವಾಚಾರ್ಯರು, ಹುಣಸಘಟ್ಟ ಗುರುಮೂರ್ತಿ ಶಿವಾಚಾರ್ಯರು, ಬಿಳಕಿ ರಾಚೋಟೇಶ್ವರ ಶಿವಾಚಾರ್ಯರು, ನಂದಿಪುರ ನಂದೀಶ್ವರ ಶಿವಾಚಾರ್ಯರು, ಬೀರೂರು ರುದ್ರಮುನಿ ಶಿವಾಚಾರ್ಯರು ಹಾಗೂ ತಾವರೆಕೆರೆ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಉಪಸ್ಥಿತರಿದ್ದರು. ಸಮಾರಂಭದ ಬಳಿಕ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು.









