ತುಮಕೂರು: ತುಮಕೂರಿನ ಸಿದ್ಧಗಂಗಾ ಮಠದಲ್ಲಿ ನಡೆದ ಲಿಂ. ಶ್ರೀ ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮವರ್ಧಂತಿ ಮಹೋತ್ಸವದ ವೇಳೆ ಉಂಟಾದ ಆಸನ ವ್ಯವಸ್ಥೆ ವಿವಾದಕ್ಕೆ ಸಂಬಂಧಿಸಿದಂತೆ ಮಠಾಧೀಶರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರು ಇಂದು ಮಾಧ್ಯಮಗಳ ಮುಂದೆ ಸ್ಪಷ್ಟನೆ ನೀಡಿದರು.
ಶಿಷ್ಟಾಚಾರ–ಭದ್ರತಾ ನಿಯಮಗಳ ಪ್ರಭಾವ, ಅವಮಾನ ಅಲ್ಲ, ನಿಯಮ ಪಾಲನೆ ಮಾತ್ರ: ಶ್ರೀ ಸಿದ್ಧಲಿಂಗ ಸ್ವಾಮೀಜಿ
ಕಾರ್ಯಕ್ರಮದಲ್ಲಿ ದ್ರೌಪದಿ ಮುರ್ಮು ಅವರು ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಶಿಷ್ಟಾಚಾರ ಮತ್ತು ಭದ್ರತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗಿದ್ದು, ಈ ಸಂದರ್ಭದಲ್ಲೇ ಆಸನ ವ್ಯವಸ್ಥೆಯಲ್ಲಿ ಗೊಂದಲ ಉಂಟಾಯಿತು ಎಂದು ಅವರು ತಿಳಿಸಿದರು.
“ರಾಷ್ಟ್ರಪತಿಗಳು ಭಾಗವಹಿಸುವ ಕಾರ್ಯಕ್ರಮಗಳಿಗೆ ಕೇಂದ್ರ ಸರ್ಕಾರದ ನಿಗದಿತ ಶಿಷ್ಟಾಚಾರ ನಿಯಮಗಳು ಅನ್ವಯಿಸುತ್ತವೆ. ಆ ನಿಯಮಗಳನ್ನು ಭದ್ರತಾ ಸಿಬ್ಬಂದಿ ಕಟ್ಟುನಿಟ್ಟಾಗಿ ಪಾಲಿಸುವುದು ಸಹಜ. ಈ ಸಂದರ್ಭದಲ್ಲಿ ನನಗೆ ವೇದಿಕೆಯ ಕೊನೆಯ ಭಾಗದಲ್ಲಿ ಆಸನ ನೀಡಲಾಗಿದೆ. ಇದನ್ನು ನಾವು ಯಾವುದೇ ರೀತಿಯ ಅವಮಾನವಾಗಿ ಪರಿಗಣಿಸಿಲ್ಲ,” ಎಂದು ಸ್ವಾಮೀಜಿಗಳು ಹೇಳಿದರು.
ಇದೇ ವೇಳೆ, ಹಿಂದಿನ ಸಂದರ್ಭಗಳಲ್ಲಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಮಠಕ್ಕೆ ಆಗಮಿಸಿದಾಗ ಶಿಷ್ಟಾಚಾರದ ಕ್ರಮ ವಿಭಿನ್ನವಾಗಿತ್ತು. ಆ ಕಾಲದ ನಿಯಮಗಳು ಮತ್ತು ಇಂದಿನ ಭದ್ರತಾ ಕ್ರಮಗಳು ಬದಲಾಗಿರುವುದರಿಂದ ಇಂತಹ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ ಎಂದು ಅವರು ವಿವರಿಸಿದರು.

ಹಳೆಯ–ಹೊಸ ನಿಯಮಗಳ ವ್ಯತ್ಯಾಸ, ಭಕ್ತರಿಗೆ ಶಾಂತಿ ಕಾಪಾಡುವ ಶ್ರೀಗಳು ಮನವಿ
ಕಾರ್ಯಕ್ರಮದ ವೇಳೆ ಕೆಲಕಾಲ ಉಂಟಾದ ಗೊಂದಲದಿಂದ ಭಕ್ತರಲ್ಲಿ ಅಸಮಾಧಾನ ಉಂಟಾಗಿರುವುದನ್ನು ಗಮನಿಸಿದ ಸ್ವಾಮೀಜಿಗಳು, “ಭಕ್ತರು ತೋರಿದ ಪ್ರೀತಿ ಮತ್ತು ಕಾಳಜಿ ನಮಗೆ ಮಹತ್ವದ್ದು. ಆದರೆ, ಇಂತಹ ಸಂದರ್ಭಗಳಲ್ಲಿ ಶಾಂತಿ ಮತ್ತು ಸಮನ್ವಯ ಕಾಪಾಡುವುದು ಅಗತ್ಯ,” ಎಂದು ಮನವಿ ಮಾಡಿದರು.
ಇನ್ನು ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವರಾದ ವಿ. ಸೋಮಣ್ಣ ಹಾಗೂ ಪ್ರಲ್ಹಾದ್ ಜೋಶಿ ಅವರು ಸ್ವಾಮೀಜಿಗಳಿಗೆ ರಾಷ್ಟ್ರಪತಿಗಳ ಪಕ್ಕದಲ್ಲಿ ಆಸನ ಕಲ್ಪಿಸಲು ಮನವಿ ಮಾಡಿಕೊಂಡಿದ್ದರೂ, ಭದ್ರತಾ ನಿಯಮಗಳ ಕಾರಣದಿಂದ ಅದು ಸಾಧ್ಯವಾಗಲಿಲ್ಲ ಎಂಬುದನ್ನು ಅವರು ದೃಢಪಡಿಸಿದರು.
ಈ ಘಟನೆ ಶಿಷ್ಟಾಚಾರ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನದ ಫಲಿತಾಂಶವಾಗಿದ್ದು, ಮಠ ಅಥವಾ ಸ್ವಾಮೀಜಿಗಳಿಗೆ ಉದ್ದೇಶಿತ ಅವಮಾನವಲ್ಲ ಎಂದು ಅವರು ಸ್ಪಷ್ಟಪಡಿಸಿದರು.










