ಶಿವಮೊಗ್ಗ, ಏಪ್ರಿಲ್ 9: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿ ಹಾಗೂ ಆರ್ಎಸ್ಎಸ್ ವಿರುದ್ಧ ನೀಡಿರುವ ಹೇಳಿಕೆಗಳು ಅತ್ಯಂತ ಖಂಡನೀಯವಾಗಿದ್ದು, ಸಮಾಜದಲ್ಲಿ ಅಶಾಂತಿ, ವಿಭಜನೆ ಮತ್ತು ಅನಗತ್ಯ ಉದ್ವಿಗ್ನತೆಗೆ ಕಾರಣವಾಗುವಂತಿವೆ. ರಾಷ್ಟ್ರದ ಉನ್ನತ ಹುದ್ದೆಯಲ್ಲಿ ಇರುವ ನಾಯಕನಾಗಿ ಖರ್ಗೆ ಅವರು ಬಳಸಿರುವ ಪದಗಳು ಜವಾಬ್ದಾರಿಯುತ ಸಾರ್ವಜನಿಕ ಜೀವನಕ್ಕೆ ಸೂಕ್ತವಲ್ಲದ್ದಾಗಿದ್ದು ಸಮಾಜದ ಸೌಹಾರ್ದತೆಯನ್ನು ಹಾಳುಮಾಡುವ ಪ್ರಯತ್ನವೆಂದು ವ್ಯಾಪಕವಾಗಿ ಆಕ್ಷೇಪ ವ್ಯಕ್ತವಾಗಿದೆ.
ಸಾರ್ವಜನಿಕ ವೇದಿಕೆಯಲ್ಲಿ ಜವಾಬ್ದಾರಿ ಅಗತ್ಯ: ತೀರ್ಥೇಶ್
ಬಿಜೆಪಿ ಯುವ ಮುಖಂಡ ಹೆಚ್.ಆರ್ ತೀರ್ಥೇಶ್ ಅವರು ಈ ಕುರಿತು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿ, ಖರ್ಗೆ ಅವರ ಹೇಳಿಕೆಗಳನ್ನು ಖಂಡಿಸಿದ್ದಾರೆ. ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡುವಾಗ ರಾಷ್ಟ್ರದ ಏಕತೆ ಮತ್ತು ಶಾಂತಿಯನ್ನು ಗಮನದಲ್ಲಿಟ್ಟುಕೊಂಡು ಮಾತನಾಡಬೇಕು ಎಂಬ ಮೂಲಭೂತ ಜವಾಬ್ದಾರಿಯನ್ನು ಅವರು ಮರೆತಿರುವುದು ದುಃಖಕರ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.

ಯುವಕರಲ್ಲಿ ನಾಯಕತ್ವ ಬೆಳೆಸುವ ಆರ್ಎಸ್ಎಸ್
ಆರ್ಎಸ್ಎಸ್ ಸಂಘಟನೆ ದೇಶದ ಯುವಕರಲ್ಲಿ ಶಿಸ್ತು, ದೇಶಭಕ್ತಿ ಮತ್ತು ಸೇವಾಭಾವನೆಗಳನ್ನು ಬೆಳೆಸುವ ಕಾರ್ಯವನ್ನು ದೀರ್ಘಕಾಲದಿಂದ ಮಾಡುತ್ತಾ ಬಂದಿದೆ ಎಂದು ಹೇಳಿದರು. ಯುವಕರನ್ನು ದೈಹಿಕ, ಮಾನಸಿಕ ಹಾಗೂ ಬೌದ್ಧಿಕವಾಗಿ ಸದೃಢರನ್ನಾಗಿ ರೂಪಿಸಿ, ಅವರನ್ನು ರಾಷ್ಟ್ರ ನಿರ್ಮಾಣದ ದಿಸೆಯಲ್ಲಿ ಮುನ್ನಡೆಸುವಲ್ಲಿ ಸಂಘಟನೆಯ ಪಾತ್ರ ಅತ್ಯಂತ ಮಹತ್ತರವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆರ್ಎಸ್ಎಸ್ ಸಂಘಟನೆ ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಮತ್ತು ವಿಪತ್ತು ಪರಿಹಾರ ಸೇರಿದಂತೆ ಅನೇಕ ಸಾಮಾಜಿಕ ಕ್ಷೇತ್ರಗಳಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದು, ಸಂಕಷ್ಟದ ಸಂದರ್ಭಗಳಲ್ಲಿ ಜನರ ನೆರವಿಗೆ ಸದಾ ಮುಂಚೂಣಿಯಲ್ಲಿ ನಿಂತಿದೆ. ರಾಷ್ಟ್ರದ ಏಕತೆ, ಸೌಹಾರ್ದತೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವಲ್ಲಿ ಸಂಘದ ಕೊಡುಗೆ ಗಮನಾರ್ಹವಾಗಿದೆ ಎಂದು ಹೇಳಿದ್ದಾರೆ.
ಇಂತಹ ಸೇವಾ ಧೋರಣೆಯ ಸಂಘಟನೆಯ ವಿರುದ್ಧ ಪ್ರಚೋದನಕಾರಿ ಮತ್ತು ಅವಹೇಳನಕಾರಿ ಹೇಳಿಕೆ ನೀಡಿರುವುದು ಕೇವಲ ಸಂಘದ ಕಾರ್ಯಕರ್ತರ ಮನಸ್ಸಿಗೆ ನೋವುಂಟುಮಾಡುವುದಷ್ಟೇ ಅಲ್ಲದೆ, ಸಮಾಜದ ಸಮಗ್ರತೆಯ ಮೇಲೆಯೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತೀರ್ಥೇಶ್ ತಿಳಿಸಿದ್ದಾರೆ.
ಕ್ಷಮೆಯಾಚನೆಗೆ ಒತ್ತಾಯ
ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಹೇಳಿಕೆಗೆ ತಕ್ಷಣ ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದ ಅವರು, ಮುಂದಿನ ದಿನಗಳಲ್ಲಿ ಸಾರ್ವಜನಿಕ ನಾಯಕರು ತಮ್ಮ ಮಾತುಗಳಲ್ಲಿ ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ









