ಬೆಂಗಳೂರು, ಜೂನ್ 17: ಬಿಡದಿ ಟೌನ್ಶಿಪ್ ಯೋಜನೆಗಾಗಿ ಕೃಷಿ ಭೂಮಿಯನ್ನು ಭೂಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ವಿರೋಧಿಸಿ ಕಳೆದ ಒಂದು ವರ್ಷಕ್ಕೂ ಅಧಿಕ ಕಾಲದಿಂದ ಬೈರಮಂಗಲದಲ್ಲಿ ನಿರಂತರವಾಗಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಹೆಚ್.ಆರ್. ಬಸವರಾಜಪ್ಪ ಅವರು ಹೋರಾಟ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದರು.

ಅನ್ನ ಕೊಡುವ ಭೂಮಿ ಕಿತ್ತುಕೊಳ್ಳುವುದು ಸರಿಯಲ್ಲ; ಬಿಡದಿಯಲ್ಲಿ ಸರ್ಕಾರಕ್ಕೆ ರೈತ ನಾಯಕ ಹೆಚ್.ಆರ್. ಬಸವರಾಜಪ್ಪ ನೇರ ಸವಾಲು
“ಬಿಡದಿ ಭಾಗವು ಸಂಪೂರ್ಣ ನೀರಾವರಿ ಆಶ್ರಿತ ಪ್ರದೇಶವಾಗಿದ್ದು, ಮಲೆನಾಡಿನಂತೆ ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ. ಇಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರೇ ಹೆಚ್ಚಾಗಿದ್ದು, ಅವರ ಇಡೀ ಜೀವನೋಪಾಯವೇ ಕೃಷಿಯನ್ನು ಅವಲಂಬಿಸಿದೆ. ಇಂತಹ ಅತ್ಯಂತ ಫಲವತ್ತಾದ ಹಾಗೂ ಅನ್ನ ಕೊಡುವ ಭೂಮಿಯನ್ನು ಟೌನ್ಶಿಪ್ ಹೆಸರಿನಲ್ಲಿ ವಶಪಡಿಸಿಕೊಳ್ಳಲು ಹೊರಟಿರುವ ಸರ್ಕಾರದ ನಡೆ ತೀವ್ರ ಖಂಡನೀಯ. ಯಾವುದೇ ಕಾರಣಕ್ಕೂ ಇಲ್ಲಿನ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ.”
“ನೂರಾರು ಕೋಟಿ ಬಂಡವಾಳ ಹೂಡಿ ಉದ್ಯಮ ನಡೆಸುವವನು ಹೇಗೆ ಆ ಕೈಗಾರಿಕೆಯ ಮಾಲೀಕನೋ, ಹಾಗೆಯೇ ಕೇವಲ ಗುಂಟೆ ಜಮೀನಿದ್ದರೂ ಆ ರೈತನೇ ತನ್ನ ಭೂಮಿಗೆ ಸರ್ವಾಧಿಕಾರಿ ಮಾಲೀಕ. ರೈತ ಎಂದಿಗೂ ಮೋಸ, ವಂಚನೆ ಅಥವಾ ಭ್ರಷ್ಟಾಚಾರದಿಂದ ಬದುಕಿದವನಲ್ಲ. ತನ್ನ ರಕ್ತವನ್ನು ಬೆವರಾಗಿಸಿ, ಕಷ್ಟಪಟ್ಟು ಭೂಮಿ ತಾಯಿಯನ್ನು ನಂಬಿ ಬೆಳೆ ಬೆಳೆದು, ತಾನು ಬದುಕುವುದರ ಜೊತೆಗೆ ಇಡೀ ದೇಶಕ್ಕೆ ಅನ್ನ ನೀಡುವ ಹೆಮ್ಮೆಯ ಅನ್ನದಾತ.”
– ಹೆಚ್.ಆರ್. ಬಸವರಾಜಪ್ಪ.

ಹೋರಾಟಕ್ಕೆ ‘ಸಂಯುಕ್ತ ಹೋರಾಟ-ಕರ್ನಾಟಕ’ದ ಬಲ
“ಬಿಡದಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯು ನಡೆಸುತ್ತಿರುವ ಈ ಸುದೀರ್ಘ ಹೋರಾಟಕ್ಕೆ ‘ಸಂಯುಕ್ತ ಹೋರಾಟ-ಕರ್ನಾಟಕ’ ಒಕ್ಕೂಟವು ತನ್ನ ಸಂಪೂರ್ಣ ಮತ್ತು ಬೇಷರತ್ ಬೆಂಬಲವನ್ನು ಘೋಷಿಸುತ್ತದೆ. ರೈತ ಬಾಂಧವರು ಯಾವುದೇ ಪ್ರಲೋಭನೆ ಅಥವಾ ಒತ್ತಡಕ್ಕೆ ಮಣಿದು ಹೋರಾಟದಿಂದ ಹಿಂದೆ ಸರಿಯಬಾರದು. ಮುಂದಿನ ದಿನಗಳಲ್ಲಿ ಬಿಡದಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಹಾಗೂ ಸಂಯುಕ್ತ ಹೋರಾಟ-ಕರ್ನಾಟಕ ಒಂಟಿಯಾಗಿ ನಿರ್ಧಾರ ಕೈಗೊಳ್ಳದೆ, ಜಂಟಿಯಾಗಿ ಹಮ್ಮಿಕೊಳ್ಳಲಿರುವ ಉಗ್ರ ಸ್ವರೂಪದ ಹೋರಾಟಗಳಲ್ಲಿ ತಾವೆಲ್ಲರೂ ಒಗ್ಗಟ್ಟಿನಿಂದ ಹಾಗೂ ಸಕ್ರಿಯವಾಗಿ ಭಾಗವಹಿಸಬೇಕು,” ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಯುಕ್ತ ಹೋರಾಟ-ಕರ್ನಾಟಕದ ಪ್ರಮುಖ ಮುಖಂಡರಾದ ಬಡಗಲಪುರ ನಾಗೇಂದ್ರ, ಯಶವಂತ್, ಶಿವಪ್ರಕಾಶ್ ಸೇರಿದಂತೆ ಬಿಡದಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಪದಾಧಿಕಾರಿಗಳು, ರೈತ ಮುಖಂಡರು, ಹೋರಾಟಗಾರರು ಹಾಗೂ ಅನೇಕ ರೈತರು ಉಪಸ್ಥಿತರಿದ್ದರು.
ಧರಣಿ ಸ್ಥಳದಲ್ಲಿ ರೈತರು ತಮ್ಮ ಭೂಮಿ, ಬದುಕು ಮತ್ತು ಕೃಷಿಯ ಉಳಿವಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ವಿವಿಧ ಸಂಘಟನೆಗಳ ಮುಖಂಡರು ಬೆಂಬಲ ಸೂಚಿಸಿದ್ದು, ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಸ್ಪಷ್ಟಪಡಿಸಿದರು.








