ದಾವಣಗೆರೆಯಲ್ಲಿ ಐತಿಹಾಸಿಕ ವೀರಶೈವ ಪೀಠಾಚಾರ್ಯರ ಶೃಂಗ ಸಮ್ಮೇಳನವು 16 ವರ್ಷಗಳ ನಂತರ ಪಂಚ ಪೀಠಾಚಾರ್ಯರನ್ನು ಒಂದೇ ವೇದಿಕೆಯಲ್ಲಿ ಸೇರಿಸಿತು. ಈ ಸಮ್ಮೇಳನದಲ್ಲಿ ವೀರಶೈವ ಲಿಂಗಾಯತ ಪರಂಪರೆಯನ್ನು ರಕ್ಷಿಸುವ ಬಗ್ಗೆ ಪ್ರತಿಜ್ಞೆ ಮಾಡಲಾಯಿತು. ಸಮಾಜದ ಒಗ್ಗಟ್ಟನ್ನು ಕಾಪಾಡಿಕೊಂಡು, ಎಲ್ಲರೂ ಒಂದಾಗಬೇಕೆಂದು ನಾಯಕರು ಕರೆ ನೀಡಿದರು.
ದಾವಣಗೆರೆ: ನಗರದ ಅಭಿನವ ರೇಣುಕ ಮಂದಿರ ಸೋಮವಾರ ಐತಿಹಾಸಿಕ ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನಕ್ಕೆ ಸಾಕ್ಷಿಯಾಯಿತು. 16 ವರ್ಷಗಳ ಸುದೀರ್ಘ ಅಗಲಿಕೆಯ ಬಳಿಕ ಪಂಚ ಪೀಠಾಚಾರ್ಯರು ಒಂದೇ ವೇದಿಕೆಯಲ್ಲಿಸೇರಲು ಮಧ್ಯ ಕರ್ನಾಟಕದ ದಾವಣಗೆರೆ ಸಾಕ್ಷಿಯಾಯಿತು.
ಕೇದಾರ, ಕಾಶಿ, ಉಜ್ಜಯಿನಿ, ಬಾಳೆಹೊನ್ನೂರು ಹಾಗೂ ಶ್ರೀಶೈಲ ಪೀಠಗಳ ಪೀಠಾಚಾರ್ಯರ ಜತೆಗೆ ರಾಜ್ಯದ ಉದ್ದಗಲಕ್ಕೂ ಇರುವ ಗುರು, ವಿರಕ್ತ ಪರಂಪರೆಯ ಮಠಗಳ ಮಠಾಧೀಶರು ಈ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾದರು. ಹಿರಿಯ ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷಶಾಮನೂರು ಶಿವಶಂಕರಪ್ಪ ಸಂಕಲ್ಪ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಮುತುವರ್ಜಿಯಿಂದಾಗಿ ನಡೆದ ಸಮಾರಂಭದಲ್ಲಿರಾಜಕೀಯ ಮುಖಂಡರು ಪಕ್ಷಭೇದ ಮರೆತು ವೇದಿಕೆ ಹಂಚಿಕೊಂಡರು.
ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯಿಂದ ನಡೆದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಕೇದಾರ ಪೀಠದ ಶ್ರೀ ಭೀಮಾಶಂಕರ ಲಿಂಗ ಶಿವಾಚಾರ್ಯ ಸ್ವಾಮೀಜಿ, ”ನಾವು ಪರಂಪರೆಯನ್ನು ಭದ್ರವಾಗಿಸಿಕೊಂಡು ಸಮಾಜವನ್ನು ರಕ್ಷಣೆ ಮಾಡಬೇಕು. ಪರಂಪರೆಯನ್ನು ಕಡೆಗಣಿಸಿದರೆ ಯಾವ ಕಾರಣಕ್ಕೂ ಸಮಾಜ ಭದ್ರವಾಗುವುದಿಲ್ಲ,” ಎಂದು ಹೇಳಿದರು.
ವೀರಶೈವ ಲಿಂಗಾಯತ ಪರಂಪರೆ ರಕ್ಷಿಸಿ
”ಪರಂಪರೆಯನ್ನು ರಕ್ಷಣೆ ಮಾಡುವುದಾಗಿ ಕೇದಾರ ಪೀಠದಲ್ಲಿನಾವು ಸಂಕಲ್ಪ ಮಾಡಿದ್ದೇವೆ. ಅದೇ ಪ್ರಕಾರ ನಾವು ನಡೆಯಬೇಕಾಗುತ್ತದೆ. ಒಂದು ವೇಳೆ ಮಾತಿಗೆ ತಕ್ಕಂತೆ ನಡೆಯದೇ ಇದ್ದರೆ ಮೋಕ್ಷ ಕಟ್ಟಿಟ್ಟ ಬುತ್ತಿ. ಸಮಾಜ ಪರಿವರ್ತನೆ ಆಗುತ್ತಿದೆ. ಆದರೆ, ಪರಂಪರೆ ಪರಿವರ್ತನೆ ಆಗುತ್ತಿಲ್ಲ. ಪೀಠದ ಮೇಲೆ ಕೂರುವ ವ್ಯಕ್ತಿಗಳು ಪರಿವರ್ತನೆ ಆಗುತ್ತಿದ್ದಾರೆ. ಆದರೆ, ಪೀಠ ಮಾತ್ರ ಶಾಶ್ವತವಾಗಿದೆ. ಅದರಂತೆ ಪರಂಪರೆಯೂ ಶಾಶ್ವತ. ಇಲ್ಲಿವ್ಯಕ್ತಿ ಪ್ರಧಾನವಲ್ಲ, ಪರಂಪರೆ ಮತ್ತು ಶಕ್ತಿ ಪ್ರಧಾನವಾಗುತ್ತದೆ” ಎಂದರು.
ದೇಶವೇ ನೋಡುತ್ತದೆ
ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ”ನವ ಕರ್ನಾಟಕದ ನಿರ್ಮಾಣದಲ್ಲಿಅಮೋಘ ಕೊಡುಗೆ ನೀಡಿರುವುದು ವೀರಶೈವ ಲಿಂಗಾಯತರ ಹೆಗ್ಗಳಿಕೆ. ಈಗ ಸಮಾಜದಲ್ಲಿಹಲವು ಸಮಸ್ಯೆಗಳಿವೆ. ವರ್ತಮಾನದಲ್ಲಿಸಮಾಜ ಸಂಘಟನೆಗೆ ಶ್ರಮಿಸಬೇಕಿದೆ. ಸಮಾಜ ಛಿದ್ರವಾಗಿ, ದಿನೇ ದಿನೆ ದುರ್ಬಲವಾಗುತ್ತಿದೆ. ವೀರಶೈವ ಮತ್ತು ಲಿಂಗಾಯತ ಎರಡೂ ಸಮಾನಾರ್ಥಕವಾಗಿದ್ದು, ನಾವೆಲ್ಲರೂ ಇಂದು ವಿಘಟನೆಯಿಂದ ಒಗ್ಗಟ್ಟಿನ ಕಡೆ ಹೋಗಬೇಕಿದೆ. ನಾವೆಲ್ಲಒಗ್ಗಟ್ಟಾದರೆ ಇಡೀ ದೇಶ ನಮ್ಮ ಕಡೆ ನೋಡುತ್ತದೆ” ಎಂದು ಹೇಳಿದರು.
ಗುರು-ವಿರಕ್ತರ ಸೇರಿಸಲಿ
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ ಮಾತನಾಡಿ, ‘ಇಡೀ ವೀರಶೈವ ಲಿಂಗಾಯತ ಸಮಾಜ ಒಂದಾಗಬೇಕು ಎಂಬುದು ಎಲ್ಲರ ಕಳಕಳಿ. ಅದರಂತೆ ಮುಂದಿನ ದಿನಗಳಲ್ಲಿಎಲ್ಲಗುರು-ವಿರಕ್ತ ಮಠಾಧೀಶರೂ ಒಂದೇ ವೇದಿಕೆಯಲ್ಲಿಸೇರುವಂತಹ ಕಾರ್ಯವಾಗಬೇಕು. ಶಾಮನೂರು ಶಿವಶಂಕರಪ್ಪ ಹಾಗೂ ರಂಭಾಪುರಿ ಶ್ರೀಗಳು ಇದರ ನೇತೃತ್ವ ವಹಿಸಬೇಕು. ಮಹಾರಾಷ್ಟ್ರದಲ್ಲಿ12 ವರ್ಷಗಳ ಕೆಳಗೆ 1 ಕೋಟಿ 10 ಲಕ್ಷ ವೀರಶೈವ ಲಿಂಗಾಯತರಿದ್ದರು. ರಾಜ್ಯದಲ್ಲಿನಮ್ಮ ಸಮಾಜದವರ ಸಂಖ್ಯೆ ಮಹಾರಾಷ್ಟ್ರಕ್ಕಿಂತ ದುಪ್ಪಟ್ಟಿದೆ. ಆದರೆ, ಇಂದು ರಾಜ್ಯದಲ್ಲಿನಮ್ಮ ಸಂಖ್ಯೆ ಕಡಿಮೆ ತೋರಿಸುವ ಷಡ್ಯಂತ್ರ ನಡೆಯುತ್ತಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯರಾದ ಶಾಮನೂರು ಶಿವಶಂಕರಪ್ಪ ಸಮಾರಂಭ ಉದ್ಘಾಟಿಸಿದರು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಹಾಸಭಾ ಉಪಾಧ್ಯಕ್ಷ ಅಣಬೇರು ರಾಜಣ್ಣ, ರಾಜ್ಯಾಧ್ಯಕ್ಷ ಶಂಕರ ಬಿದರಿ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಡಾ.ಎ.ಎಚ್. ಶಿವಯೋಗಿಸ್ವಾಮಿ, ಬಿ.ಎಂ. ವಾಗೀಶ ಸ್ವಾಮಿ, ಮುರುಗೇಶ ಆರಾಧ್ಯ, ಆರ್.ಟಿ. ಪ್ರಶಾಂತ್, ಚಂದ್ರಶೇಖರ ಪೂಜಾರ್, ಕೆ.ಎಂ. ಸುರೇಶ್, ಮಾಡಾಳು ಮಲ್ಲಿಕಾರ್ಜುನ ಇತರರಿದ್ದರು.











