ನವದೆಹಲಿ: ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ಉಚಿತವಾಗಿ ಭೂಮಿ ನೀಡಲು ಹಾಗೂ ಯೋಜನಾ ವೆಚ್ಚದ ಶೇ 50:50 ವೆಚ್ಚ ಭರಿಸಲು ನಿರಾಕರಿಸಿದ ಕಾರಣಕ್ಕೆ ಶಿವಮೊಗ್ಗ-ಹರಿಹರ ನಡುವಿನ ರೈಲ್ವೆ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬುಧವಾರ ಹೇಳಿದ್ದಾರೆ.
ರಾಜ್ಯ ಸರಕಾರ 832 ಕೋಟಿ ವೆಚ್ಚದಲ್ಲಿ ಭೂಮಿ ವಶಪಡಿಸಿಕೊಳ್ಳಬೇಕಿತ್ತು. ಆದರೆ, ಸರಕಾರ ಅಸಮರ್ಥತೆ ತೋರಿದ್ದರಿಂದ ಯೋಜನೆ ಸ್ಥಗಿತಗೊಂಡಿದೆ.
ಹರಿಹರ -ಶಿವಮೊಗ್ಗ (79 ಕಿಮೀ) ರೈಲು ಯೋಜನೆಯನ್ನು ಶೇ.50ರ ಅನುಪಾತದ ಯೋಜನೆಯಡಿ ಮಂಜೂರು ಮಾಡಲಾಗಿತ್ತು. ರಾಜ್ಯ ಸರಕಾರ 832 ಕೋಟಿ ವೆಚ್ಚದಲ್ಲಿ ಯೋಜನೆಗೆ ಬೇಕಾದ ಭೂಮಿಯನ್ನು ವಶಪಡಿಸಿಕೊಂಡು ಒದಗಿಸಬೇಕಿದೆ. ಒಟ್ಟು 488 ಹೆ. ಭೂಮಿಯನ್ನು ಒದಗಿಸಲು ರೈಲ್ವೆ ಇಲಾಖೆ ಕರ್ನಾಟಕ ಸರಕಾರವನ್ನು ಕೋರಿತ್ತು. ಆದರೆ, ಈ ವೆಚ್ಚವನ್ನು ಹಂಚಿಕೊಳ್ಳಲು ಮತ್ತು ಉಚಿತವಾಗಿ ಭೂಮಿಯನ್ನು ಒದಗಿಸಲು ಕರ್ನಾಟಕ ಸರಕಾರ ಅಸಮರ್ಥತೆ ತೋರಿಸಿದೆ, ಈ ಕಾರಣಕ್ಕೆ ಯೋಜನೆ ಸ್ಥಗಿತಗೊಂಡಿದೆ ಎಂದರು.

ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಬೇಕೆಂದರೆ ಅದು, ರಾಜ್ಯ ಸರ್ಕಾರದ ತ್ವರಿತ ಭೂಸ್ವಾಧೀನ, ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಅರಣ್ಯ ತೆರವು, ಸ್ಥಳಾಂತರ, ವಿವಿಧ ಅಧಿಕಾರಿಗಳಿಂದ ಶಾಸನಬದ್ಧ ಅನುಮತಿಗಳು, ಪ್ರದೇಶದ ಭೌಗೋಳಿಕ ಮತ್ತು ಭೌಗೋಳಿಕ ಪರಿಸ್ಥಿತಿಗಳು, ಯೋಜನಾ ಸ್ಥಳಗಳ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ, ನಿರ್ದಿಷ್ಟ ಯೋಜನೆಗಳ ಕುರಿತ ಮಾಹಿತಿ ಸೇರಿದಂತೆ ಹಳವು ಅಂಶಗಳನ್ನು ಅವಲಂಬಿಸಿರುತ್ತದೆ. ಈ ಎಲ್ಲಾ ಅಂಶಗಳು ಯೋಜನೆಗಳ ಪೂರ್ಣಗೊಳಿಸುವ ಸಮಯ ಮತ್ತು ವೆಚ್ಚದ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಿದರು.