ಸಂಸತ್ ಅಧಿವೇಶನ ನಡೆಯುತ್ತಿರುವ ಸಂಧರ್ಭದಲ್ಲಿ ಕೇಂದ್ರದ ಸಂಪುಟದ ಪುನರ್ ರಚನೆಯ ಸಾಧ್ಯತೆ ದಟ್ಟವಾಗಿದೆ. ಈ ಸುಳಿವು ದೊರೆಯುತ್ತಿದ್ದಂತೆಯೇ ಸಚಿವ ಸ್ಥಾನದ ಕನಸು ಕಾಣುತ್ತಿರುವ ರಾಜ್ಯದ ಸಂಸದರಲ್ಲೂ ನಿರೀಕ್ಷೆಗಳು ಗರಿಗೆದರಿವೆ.
ಸಂಪುಟ ವಿಸ್ತರಣೆಯಲ್ಲಿ ರಾಜ್ಯದಿಂದ ಬಿ. ವೈ. ರಾಘವೇಂದ್ರ ಅವರ ಹೆಸರು ಮುಂಚೂಣಿಯಲ್ಲಿದೆ. ರಾಜ್ಯದಿಂದ ಇಬ್ಬರು ಸಚಿವರಾಗುವುದು ಖಾತ್ರಿ ಎಂದು ಹೇಳಲಾಗುತ್ತಿದೆ. ಅದರಲ್ಲಿ ಒಂದು ಸ್ಥಾನವು ರಾಘವೇಂದ್ರ ಅವರಿಗೆ ಒಲಿದು ಬರಲಿದೆ ಎಂಬ ಮಾತುಗಳು ಕೇಂದ್ರದ ಬಿಜೆಪಿ ವಲಯದಲ್ಲಿ ಕೇಳಿಬಂದಿದೆ.
ಶೀಘ್ರದಲ್ಲೇ ಶೋಭಾ ಕರಂದ್ಲಾಜೆಗೆ ಗೇಟ್ಪಾಸ್?
ಶೋಭಾ ಬದಲಾಗಿ ಶಿವಮೊಗ್ಗ ಸಂಸದ ರಾಘವೇಂದ್ರಗೆ ಅವಕಾಶ ಸಿಗುವ ನಿರೀಕ್ಷೆಯಿದೆ. ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಸಮಾಧಾನಪಡಿಸಲು ಬಿಜೆಪಿ ವರಿಷ್ಠರು ಈ ತಂತ್ರದ ಮೊರೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿವೈ ವಿಜಯೇಂದ್ರ ವಂಚಿತರಾದರೆ, ಬಿಎಸ್ವೈ ಅವರ ಹಿರಿಯ ಪುತ್ರ ರಾಘವೇಂದ್ರಗೆ ಮಣೆಹಾಕಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಅಭಿವೃದ್ಧಿ ಕೆಲಸಗಳ ಮೂಲಕವೇ ಜನರಿಗೆ ಹತ್ತಿರವಾದ ಸಂಸದ ಬಿ. ವೈ. ರಾಘವೇಂದ್ರ ಅವರಿಗೆ ಈ ಬಾರಿ ಕೇಂದ್ರ ಸಂಪುಟದಲ್ಲಿ ಪ್ರಾತಿನಿಧ್ಯ ದೊರೆತರೆ ಶಿವಮೊಗ್ಗದ ಮಟ್ಟಿಗೆ ಅದೊಂದು ದಾಖಲೆಯಾಗಲಿದೆ.
ಖುದ್ದಾಗಿ ಕೇಂದ್ರದ ಎಲ್ಲಾ ಸಚಿವರನ್ನು ಭೇಟಿ ಮಾಡಿ, ರೈಲ್ವೆ ಯೋಜನೆಗಳು, ರಾಷ್ಟ್ರೀಯ ಹೆದ್ದಾರಿ ಯೋಜನೆಗಳು, ಸಿಗಂದೂರು ಸೇತುವೆಯಂತಹ ಯೋಜನೆಗಳನ್ನು ಶಿವಮೊಗ್ಗಕ್ಕೆ ತಂದು ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶಿವಮೊಗ್ಗದ ಸಮಗ್ರ ಅಭಿವೃದ್ಧಿಗೆ ಏನೇನು ಯೋಜನೆಗಳನ್ನು ಕೈಗೊಳ್ಳಬಹುದು ಎಂಬುದನ್ನು ತಜ್ಞರೊಂದಿಗೆ ಚರ್ಚಿಸುವುದು, ಅದಕ್ಕೆ ಪೂರಕವಾಗಿ ಯೋಜನೆಗಳು ಮತ್ತು ಅನುದಾನವನ್ನು ತರುವುದು ಅವರ ವಿಶಿಷ್ಟ ಗುಣ. ಈ ಗುಣಗಳೇ ಅವರಿಗೆ ಸಚಿವ ಸ್ಥಾನಕ್ಕೆ ಅರ್ಹತೆಯನ್ನು ತಂದುಕೊಟ್ಟಿವೆ.