ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಕಾಂಗ್ರೆಸ್ ಪಕ್ಷದಲ್ಲಿ ಸೆಪ್ಟಂಬರ್ ಕ್ರಾಂತಿ ಮುಂಚಿತವಾಗಿಯೇ ಆರಂಭವಾಗಿದೆ: ಬಿ.ವೈ.ವಿಜಯೇಂದ್ರ ವಾಗ್ದಾಳಿ.

On: August 11, 2025 7:14 PM
Follow Us:

ಸಚಿವ ಸ್ಥಾನಕ್ಕೆ ಕೆ.ಎನ್‌ ರಾಜಣ್ಣ ರಾಜೀನಾಮೆ ನೀಡಿರುವ ವಿಚಾರ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಈ ಮಧ್ಯೆ ವಿಪಕ್ಷ ನಾಯಕರು ರಾಜಣ್ಣ ರಾಜೀನಾಮೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು, ಸತ್ಯವನ್ನ‌ಕೇಳಲಾಗದ ರಾಹುಲ್ ಗಾಂಧಿ, ರಾಜಣ್ಣನವರ ರಾಜೀನಾಮೆ ಪಡೆದಿದ್ದಾರೆ ಎಂದು ಹೇಳಿದ್ದಾರೆ.


ಚುನಾವಣಾ ಆಯೋಗದ ವಿರುದ್ಧ ಬಾಲಿಶತನದ ಆರೋಪ ಮಾಡುವ ಮೂಲಕ ನಗೆ ಪಾಟಲಿಗೀಡಾಗಿರುವ ಕಾಂಗ್ರೆಸ್ ನಾಯಕ Rahul Gandhi ಅವರು ಸದ್ಯ ಹತಾಶ ಮನಸ್ಥಿತಿಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ‘ಇದ್ದಿದ್ದು ಇದ್ದಂಗೆ ಹೇಳಿ’ ಕಾಂಗ್ರೆಸ್ ದೋಷಗಳಿಗೆ ಕನ್ನಡಿ ಹಿಡಿದ ಹಿರಿಯ ಸಚಿವ ಕೆ.ಎನ್ ರಾಜಣ್ಣ ಅವರ ತಲೆದಂಡವಾಗಿದೆ. ಮುಖ್ಯಮಂತ್ರಿಗಳ ಬಲಗೈ ಭಂಟರಾಗಿ ಕಾಂಗ್ರೆಸ್ ಪಕ್ಷದ ವೈಫಲ್ಯಗಳು ಹಾಗೂ ಆಂತರಿಕ ದಬ್ಬಾಳಿಕೆಗಳನ್ನು ನಿಷ್ಟೂರವಾಗಿ ಬಿಚ್ಚಿಡುತ್ತಿದ್ದ ರಾಜಣ್ಣ ಹೈಕಮಾಂಡ್ ಪಾಲಿಗೆ ಬಿಸಿ ತುಪ್ಪವಾಗಿದ್ದರು.


‘ಕೈ’ ವರಿಷ್ಠ ನೇತಾರ ರಾಹುಲ್ ಗಾಂಧಿಯವರ ಎಡಬಿಡಂಗಿ ನಡೆಯನ್ನು ಎತ್ತಿ ತೋರಿಸಿದ ಪರಿಶಿಷ್ಟ ಪಂಗಡ ಹಾಗೂ ಶೋಷಿತ ಸಮುದಾಯಗಳ ಪರವಾಗಿ ದನಿಯಾಗಿದ್ದ K N Rajanna ನವರು ಸಚಿವ ಪದವಿಯಿಂದ ಉಚ್ಚಾಟಿತಗೊಂಡಿರುವುದು ಕಾಂಗ್ರೆಸ್ ಪಕ್ಷದ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಸಂಸ್ಕೃತಿ ಇನ್ನೂ ತೊಲಗಿಲ್ಲ, ಪರಿಶಿಷ್ಟ ಸಮುದಾಯದ ನಾಯಕರ ನಾಯಕತ್ವವನ್ನು ದಮನ ಮಾಡುವ ದಬ್ಬಾಳಿಕೆ ಇನ್ನೂ ನಿಂತಿಲ್ಲ ಎನ್ನುವುದನ್ನು ಸಾಕ್ಷೀಕರಿಸಿದೆ.


ಮತಗಳ್ಳತನದ ಆರೋಪ ಮಾಡುತ್ತಿರುವ ರಾಹುಲ್ ಗಾಂಧಿ ಅವರ ಅಪ್ರಬುದ್ಧ ನಡೆಯನ್ನು ವಿಶ್ಲೇಷಿಸಿ ಕಾಂಗ್ರೆಸ್ ಪಕ್ಷದ್ದೇ ತಪ್ಪು, “2024 ರ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿತ್ತು, ಲೋಕಸಭಾ ಚುನಾವಣೆಗೂ ಮುಂಚೆಯೇ ಮತದಾರರ ಪಟ್ಟಿಯನ್ನು ಪರಿಶೀಲಿಸುವುದು ಕಾಂಗ್ರೆಸ್ ಪಕ್ಷದ ಜವಾಬ್ದಾರಿಯಾಗಿತ್ತು, ಚುನಾವಣಾ ಸಂದರ್ಭದಲ್ಲಿ ಬೂತ್ ಕಾರ್ಯಕರ್ತರು ಇದನ್ನು ಗಮನಿಸುವಂತೆ ಪಕ್ಷ ನೋಡಿಕೊಳ್ಳಬೇಕಿತ್ತು, ಮತದಾನದಂದು ಕಾಂಗ್ರೆಸ್ ಪಕ್ಷದ ಏಜೆಂಟರುಗಳು ಲೋಪಗಳಿದ್ದರೆ ಗಮನಿಸುವಂತೆ ತರಬೇತಿ ನೀಡಬೇಕಾಗಿತ್ತು, ಚುನಾವಣೆಯ ನಂತರವೂ ದೂರು ಸಲ್ಲಿಸಬೇಕಾಗಿತ್ತು, ಇದ್ಯಾವುದನ್ನೂ ಮಾಡದೆ ಏಕಾಏಕಿ ಈಗ ಚುನಾವಣಾ ಆಯೋಗದ ಮೇಲೆ ಗೂಬೆ ಕೂರಿಸಲು ಹೊರಟಿರುವ ಕ್ರಮ ಸರಿಯಲ್ಲ” ಎಂದು ರಾಜಣ್ಣ ಹೇಳಿದ್ದರು. ಇದನ್ನೇ ನಾಡಿನ ಪ್ರಮುಖ ಪತ್ರಿಕೆಗಳು ತಮ್ಮ ಸಂಪಾದಕೀಯದಲ್ಲೂ ಉಲ್ಲೇಖಿಸಿವೆ.


ಕಾಂಗ್ರೆಸ್ ಪಕ್ಷದ ಬೇಜವಾಬ್ದಾರಿತನ, ಕ್ಷುಲ್ಲಕ ರಾಜಕೀಯ ನಡೆ, ಪ್ರಧಾನಿ ಶ್ರೀ Narendra Modi ಜೀ ಅವರನ್ನು ವಿರೋಧಿಸುವುದಕ್ಕಾಗಿ ವಿತಂಡ ವಿರೋಧ ಮಾಡುವುದು, ಇದಕ್ಕಾಗಿ ಸಾಂವಿಧಾನಿಕ ಸಂಸ್ಥೆಗಳ ಮೇಲೂ ಆರೋಪ ಹೊರಿಸುವುದು ರಾಹುಲ್ ಗಾಂಧಿ ಹಾಗೂ Indian National Congress ಇತ್ತೀಚಿನ ನಡವಳಿಕೆಯಾಗಿದೆ. ಇದನ್ನು ಪ್ರಶ್ನಿಸುವ ಕಾಂಗ್ರೆಸ್ ಪಕ್ಷದ ಕಾಳಜಿಯ ನಾಯಕರುಗಳನ್ನು ಮೂಲೆಗೆ ಸೇರಿಸುವ ತುಘಲಕ್ ದರ್ಬಾರ್ ಆರಂಭವಾಗಿದೆ, ಇದಕ್ಕೆ ಕೆ.ಎನ್.ರಾಜಣ್ಣನವರ ಮೂಲಕ ಮೊದಲ ವಿಕೆಟ್ ಪತನವಾಗಿದೆ. ಈ ಮೂಲಕ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯನವರಿಗೂ ಎಚ್ಚರಿಕೆಯ ಸಂದೇಶ ರವಾನಿಸಿದೆ.


ಈ ಅವಧಿಯಲ್ಲಿ ಮುಖ್ಯಮಂತ್ರಿ Siddaramaiah ಅವರು ಕೇವಲ ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿ ಆಗಿ ಕೆಲಸ ಮಾಡುತ್ತಿದ್ದಾರೆ, ಎನ್ನುವುದು ಇತ್ತೀಚಿನ ಕರ್ನಾಟಕ ಸರ್ಕಾರದ ನಿರ್ಧಾರಗಳನ್ನು ದೆಹಲಿಯ ಹೈಕಮಾಂಡ್ ಅಂಗಳದಲ್ಲಿ ಪ್ರಕಟಿಸುತ್ತಿರುವುದು ಸ್ಪಷ್ಟವಾಗಿದೆ. ರಾಜಣ್ಣನವರು ಈ ಹಿಂದೆ ಹೇಳಿದಂತೆ ಕಾಂಗ್ರೆಸ್ ಪಕ್ಷದಲ್ಲಿ ಸೆಪ್ಟಂಬರ್ ಕ್ರಾಂತಿ ಮುಂಚಿತವಾಗಿಯೇ ಆರಂಭವಾಗಿದೆ, ಕ್ರಾಂತಿಯ ಕಿಡಿ ಯಾರನ್ನಾದರೂ ಬಲಿತೆಗೆದು ಕೊಳ್ಳಲಿ ಆದರೆ ಸದ್ಯ ಈಗಾಗಲೇ ಸೊರಗಿರುವ ಕರ್ನಾಟಕವನ್ನು ಸುಡದಿರಲಿ.


ಸ್ವಾರ್ಥದ ಅಟ್ಟಹಾಸ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಸರಣೀ ಹಗರಣಗಳನ್ನು ಕತ್ತಿಗೆ ಸುತ್ತಿಕೊಂಡಿರುವ ಕಾಂಗ್ರೆಸ್ ರಾಜ್ಯದಲ್ಲಿ ಜನರ ಹಿತವನ್ನು ಮರೆತು ಪಕ್ಷ ಹಾಗೂ ಅಧಿಕಾರದ ಸುತ್ತ ಗಮನವನ್ನು ಕೇಂದ್ರೀಕರಿಸಿ ರಾಜ್ಯ ಹಾಗೂ ರಾಜ್ಯದ ಜನರ ಹಿತಾಸಕ್ತಿಯನ್ನು ಸಂಪೂರ್ಣ ಮರೆತಿದೆ. Indian National Congress – Karnataka ಅಧಿಕಾರಕ್ಕೆ ತಂದ ಕಾರಣಕ್ಕಾಗಿ ಜನ ಶಪಿಸುತ್ತಿದ್ದಾರೆ ಇದರ ನಡುವೆ ದಮನಿತ ಸಮುದಾಯದ ನಾಯಕರನ್ನೂ ರಾಜಕೀಯವಾಗಿ ಮುಗಿಸುವ ಷಡ್ಯಂತ್ರದಿಂದ ಕಾಂಗ್ರೆಸ್ ಪಕ್ಷದ ಅಸಲಿ ಮುಖವಾಡವನ್ನು ಜನ ಮತ್ತೊಮ್ಮೆ ತಿಳಿಯುವಂತಾಗಿದೆ ಎಂದು ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

K.M.Sathish Gowda

Join WhatsApp

Join Now

Facebook

Join Now

Leave a Comment