ನವದೆಹಲಿ: ತನ್ನ ಸಾಂವಿಧಾನಿಕ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಚುನಾವಣಾ ಆಯೋಗವು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕಾಂಗ್ರೆಸ್ ಹೊರತುಪಡಿಸಿ ಇತರ ಪ್ರತಿ ಪಕ್ಷಗಳಾದ ಸಮಾಜವಾದಿ ಪಕ್ಷ, ಟಿಎಂಸಿ, ಶಿವಸೇನೆ, ಡಿಎಂಕೆ, ಎನ್ಸಿಪಿ, ಆರ್ಜೆಡಿ, ಆಮ್ ಆದ್ಮಿ ಪಕ್ಷ, ಜೆಎಂಎಂ, ಸಿಪಿಐ, ಸಿಪಿಐ(ಎಂ), ಸಿಪಿಐ(ಎಂಎಲ್), ಐಯುಎಂಎಲ್, ನ್ಯಾಷನಲ್ ಕಾನ್ಫರೆನ್ಸ್ ಸೇರಿದಂತೆ ಇತರ ವಿರೋಧ ಪಕ್ಷಗಳು ಆರೋಪಿಸಿವೆ. ಈ ಕುರಿತು ಸೋಮವಾರ ವಿರೋಧ ಪಕ್ಷಗಳು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿವೆ.
ಚುನಾವಣಾ ಆಯೋಗದ ವತಿಯಿಂದ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಕಠಿಣ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು ಎಂದು ಪ್ರತಿಪಕ್ಷಗಳು ದೂರಿವೆ.
ಮಹಾದೇವಪುರದಲ್ಲಿ ಬೆಳಕಿಗೆ ಬಂದಿರುವ ಮತದಾರರ ವಂಚನೆಯ ಕುರಿತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಾಡಿರುವ ಆರೋಪಗಳ ಬಗ್ಗೆ ಸಿಇಸಿ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದಿರುವ ಪ್ರತಿಪಕ್ಷಗಳು ಮತದಾರರ ವಂಚನೆಯ ಆರೋಪಗಳ ಕುರಿತು ಯಾವುದೇ ತನಿಖೆ ಯಾಕೆ ನಡೆದಿಲ್ಲ ಎಂದು ಪ್ರಶ್ನಿಸಿವೆ.
ಆಡಳಿತ ಪಕ್ಷಕ್ಕೆ ಸವಾಲು ಹಾಕುವವರನ್ನು ಬೆದರಿಸಲು ಚುನಾವಣಾ ಆಯೋಗ ಈ ಆಯ್ಕೆ ಮಾಡಿಕೊಂಡಿದೆ. ಇದು ಗಂಭೀರ ಆರೋಪ ಎಂದು ಎಂದು ವಿರೋಧ ಪಕ್ಷಗಳು ಹೇಳಿವೆ. ದೇಶದಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣಾ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳುವ ತನ್ನ ಸಾಂವಿಧಾನಿಕ ಕರ್ತವ್ಯವನ್ನು ನಿರ್ವಹಿಸುವಲ್ಲಿ ಚುನಾವಣಾ ಆಯೋಗ ಸಂಪೂರ್ಣ ವಿಫಲವಾಗಿದೆ. ಸಮಾನ ಆಟದ ಮೈದಾನವನ್ನು ಖಚಿತಪಡಿಸಿಕೊಳ್ಳಬಲ್ಲ ಅಧಿಕಾರಿಗಳು ಚುನಾವಣಾ ಆಯೋಗದ ನೇತೃತ್ವ ವಹಿಸುತ್ತಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಇನ್ನು ಇದರ ನೇತೃತ್ವ ವಹಿಸಿದವರು ತನಿಖೆಯ ಪ್ರಯತ್ನವನ್ನು ದಿಕ್ಕು ತಪ್ಪಿಸುತ್ತಾರೆ ಎಂದು ತಿಳಿಸಿದೆ.
2022ರ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಮತದಾರರ ಅಳಿಸುವಿಕೆ ಮತ್ತು ಅಕ್ರಮಗಳನ್ನು ಆರೋಪಿಸಿರುವ ಎಸ್ ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಸೋಮವಾರ ಸಂಸತ್ ಸಂಕೀರ್ಣದಲ್ಲಿ ಸುದ್ದಿಗಾರರಿಗೆ ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್ಗಳ ಪ್ರತಿಗಳನ್ನು ವಿತರಿಸಿದರು.
ಬಳಿಕ ಮಾತನಾಡಿದ ಅವರು, ಚುನಾವಣಾ ಸಂಸ್ಥೆಯಿಂದ ನೋಟಿಸ್ ಪಡೆದ ಅನಂತರ ಸುಮಾರು 18,000 ಅಫಿಡವಿಟ್ಗಳನ್ನು ಸಿದ್ಧಪಡಿಸಿ ಸಲ್ಲಿಸಲಾಗಿದೆ ಎಂದು ಹೇಳಿದರು.
ನನಗೆ ನೋಟಿಸ್ ಬಂದಾಗ ನಾನು ಎಸ್ಪಿ ಕಾರ್ಯಕರ್ತರಿಂದ ಸಹಾಯ ಕೋರಿದೆ. ನಾವು ನಿರ್ದಿಷ್ಟ ಸಮಯದೊಳಗೆ ಕೇವಲ 18,000 ಅಫಿಡವಿಟ್ಗಳನ್ನು ಸಿದ್ಧಪಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ನಮಗೆ ಹೆಚ್ಚಿನ ಸಮಯವಿದ್ದರೆ ನಾವು ಇನ್ನೂ ಹೆಚ್ಚಿನದನ್ನು ಸಿದ್ಧಪಡಿಸಬಹುದಿತ್ತು. ಈ ಅಫಿಡವಿಟ್ಗಳನ್ನು ಸಲ್ಲಿಸಿದ ಅನಂತರ ಯಾವುದೇ ತನಿಖೆ ಅಥವಾ ಕ್ರಮ ಕೈಗೊಳ್ಳದಿದ್ದರೆ ಚುನಾವಣಾ ಆಯೋಗವನ್ನು ಯಾರು ನಂಬುತ್ತಾರೆ ಎಂದು ಪ್ರಶ್ನಿಸಿರುವ ಅವರು, ಉಪಚುನಾವಣೆಗಳಲ್ಲಿ ಇದು ಸಣ್ಣ ಕಳ್ಳತನವಲ್ಲ. ದೊಡ್ಡ ದರೋಡೆ ಎಂದು ದೂರಿದರು.











