ಅಕ್ರಮ ಹಣ ವರ್ಗಾವಣೆ, ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಬೆಳ್ಳಂ ಬೆಳಿಗ್ಗೆ ದಾಳಿ ನಡೆಸಿ, ಶೋಧ ಕಾರ್ಯಾಚರಣೆ ನಡೆಸಿದೆ. ಇದರ ಬೆನ್ನಲ್ಲೇ ಸಿಕ್ಕಿಂನಲ್ಲಿ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಯನ್ನು ವಶಕ್ಕೆ ಪಡೆದಿದ್ದಾರೆ.
ಜಾರಿ ನಿರ್ದೇಶನಾಲಯದ(E.D.) ಅಧಿಕಾರಿಗಳು ಇಂದು ಚಿತ್ರದುರ್ಗದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಮನೆ, ಕಚೇರಿಗಳ ಮೇಲೆಲ್ಲಾ ದಾಳಿ ಮಾಡಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ವೀರೇಂದ್ರ ಪಪ್ಪಿಗೆ ಸಂಬಂಧಿಸಿದ ಬೆಂಗಳೂರಿನ 10 ಸ್ಥಳಗಳು ಹಾಗೂ ಜೋಧಪುರದ 3 ಸ್ಥಳಗಳ ಮೇಲೆ ಇ.ಡಿ. ದಾಳಿಯಾಗಿದೆ. ಹುಬ್ಬಳ್ಳಿಯ ಒಂದು ಸ್ಥಳ, ಮುಂಬೈನ ಎರಡು ಸ್ಥಳಗಳ ಮೇಲೆ ಇ.ಡಿ. ದಾಳಿಯಾಗಿದೆ. ಗೋವಾದ 8 ಸ್ಥಳಗಳ ಮೇಲೆ ಇ.ಡಿ. ರೇಡ್ ಮಾಡಿದೆ.
ಗೋವಾದಲ್ಲಿ ಪಪ್ಪಿ ಕ್ಯಾಶಿನೋ ಗೋಲ್ಡ್, ಓಸಿಯಾನ್ ರೀವರ್ ಕ್ಯಾಶಿನೋ, ಪಪ್ಪಿ ಕ್ಯಾಸಿನೋ ಪ್ರೈಡ್, ಓಸಿಯಾನ್ 7 ಕ್ಯಾಸಿನೋ, ಬಿಗ್ ಡ್ಯಾಡಿ ಕ್ಯಾಸಿನೋ ಮೇಲೆ ಇ.ಡಿ. ರೇಡ್ ಮಾಡಿದೆ. ಇವೆಲ್ಲವೂ ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಮಾಲೀಕತ್ವದ ಕ್ಯಾಸಿನೋಗಳು.

ಇನ್ನೂ ವೀರೇಂದ್ರ ಪಪ್ಪಿ ಮೇಲೆ ಇ.ಡಿ. ರೇಡ್ ಮಾಡಲು ಕಾರಣವಾಗಿದ್ದು, ಆಕ್ರಮ ಆನ್ ಲೈನ್ ಮತ್ತು ಆಫ್ ಲೈನ್ ಬೆಟ್ಟಿಂಗ್ ಕೇಸ್ ಎಂದು ಇ.ಡಿ. ಅಧಿಕಾರಿಗಳು ಹೇಳಿದ್ದಾರೆ. ವೀರೇಂದ್ರ ಪಪ್ಪಿ ಅನೇಕ ಆನ್ ಲೈನ್ ಬೆಟ್ಟಿಂಗ್ ಸೈಟ್ ಗಳನ್ನು ನಡೆಸುತ್ತಿದ್ದಾರೆ. ಕಿಂಗ್ 567, ರಾಜಾ567, ಪಪ್ಪಿ003, ರತ್ನ ಗೇಮಿಂಗ್ ಇತ್ಯಾದಿ ಆನ್ ಲೈನ್ ಬೆಟ್ಟಿಂಗ್ ಸೈಟ್ ಗಳನ್ನು ನಡೆಸುತ್ತಿದ್ದಾರೆ. ಇನ್ನೂ ವೀರೇಂದ್ರ ಪಪ್ಪಿ ಸೋದರ ಕೆ.ಸಿ.ತಿಪ್ಪೇಸ್ವಾಮಿ ದುಬೈನಲ್ಲಿದ್ದುಕೊಂಡು ಮೂರು ಬ್ಯುಸಿನೆಸ್ ಕಂಪನಿಗಳನ್ನು ನಡೆಸುತ್ತಿದ್ದಾರೆ. ದುಬೈ ಸಾಫ್ಟ ಟೇಕ್, ಟಿಆರ್ಎಸ್ ಟೆಕ್ನಾಲಜೀಸ್, ಪ್ರೈಮ್ 9 ಟೆಕ್ನಾಲಜೀಸ್ ಎಂಬ ಕಂಪನಿಗಳನ್ನು ನಡೆಸುತ್ತಿದ್ದು, ಇವೆಲ್ಲವೂ ಕಾಲ್ ಸೆಂಟರ್ ಸರ್ವೀಸ್ ನೀಡುವ ಕಂಪನಿಗಳಾಗಿವೆ. ಜೊತೆಗೆ ಕೆ.ಸಿ.ವೀರೇಂದ್ರರ ಗೇಮಿಂಗ್ ಬ್ಯುಸಿನೆಸ್ ಗೆ ಸಂಬಂಧಿಸಿದ ಕಂಪನಿಗಳಾಗಿವೆ. ಇನ್ನೂ ವೀರೇಂದ್ರ ಪಪ್ಪಿ ಜೊತೆಗೆ ವ್ಯವಹಾರಿಕ ಸಂಬಂಧ ಹೊಂದಿರುವ ಅನಿಲ್ ಗೌಡ ಮೇಲೂ ದಾಳಿ ನಡೆಸಲಾಗಿದೆ ಎಂದು ಇ.ಡಿ. ಹೇಳಿದೆ. ಈ ಅನಿಲ್ ಗೌಡ ಕಾಂಗ್ರೆಸ್ ಬೆಂಗಳೂರು ಜಿಲ್ಲಾಧ್ಯಕ್ಷರಾಗಿರುವ ಹನುಮಂತರಾಯಪ್ಪ ಅವರ ಮಗ. ಅನ್ನಪೂರ್ಣೇಶ್ವರಿ ನಗರದ ಅನಿಲ್ ಗೌಡ ಮನೆ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ಬಗ್ಗೆ ಇ.ಡಿ. ಈಗ ಅಧಿಕೃತ ಮಾಹಿತಿಯನ್ನು ನೀಡಿದೆ.
ಚಿತ್ರದುರ್ಗದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ವಿರುದ್ಧ ಆನ್ ಲೈನ್ ಮತ್ತು ಆಫ್ ಲೈನ್ ಬೆಟ್ಟಿಂಗ್ ಕೇಸ್ ದಾಖಲಾಗಿದೆ. ಆನ್ ಲೈನ್ ಬೆಟ್ಟಿಂಗ್ ನಿಂದ ಗಳಿಸಿದ ಹಣವನ್ನು ಆಕ್ರಮವಾಗಿ ವರ್ಗಾವಣೆ ಮಾಡಿದ ಆರೋಪ ಇದೆ. ಹೀಗಾಗಿ ಇ.ಡಿ. ಅಧಿಕಾರಿಗಳು ಇಂದು ಒಟ್ಟಾರೆ 24 ಸ್ಥಳಗಳ ಮೇಲೆ ದಾಳಿ ಮಾಡಿದ್ದಾರೆ. ವೀರೇಂದ್ರ ಪಪ್ಪಿ ಗೋವಾದಲ್ಲಿ ಕ್ಯಾಸಿನೋ ಬ್ಯುಸಿನೆಸ್ ಹೊಂದಿದ್ದಾರೆ ಎಂಬುದು ಚಿತ್ರದುರ್ಗದ ಜನರಿಗೆಲ್ಲಾ ಗೊತ್ತಿರುವ ವಿಚಾರ. ಆದರೇ, ಈಗ ಆನ್ ಲೈನ್ ಬೆಟ್ಟಿಂಗ್ ಸೈಟ್ ಗಳನ್ನು ನಡೆಸುತ್ತಿದ್ದಾರೆ ಎಂಬುದು ಗೊತ್ತಾಗಿದೆ.
2016ರಲ್ಲಿಯೂ ದಾಳಿ
20ಕ್ಕೂ ಹೆಚ್ಚು ವಾಹನದಲ್ಲಿ ಬಂದಿರುವ 40ಕ್ಕೂ ಹೆಚ್ಚು ಇಡಿ ಅಧಿಕಾರಿಗಳು ಮನೆಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಹಿಂದೆ ಅಂದರೆ 2016ರ ಡಿಸೆಂಬರ್ 11 ರಂದು ಕೆಸಿ ವೀರೇಂದ್ರ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ವಿರೇಂದ್ರ ಮನೆಯ ಬಾತ್ ರೂಂನಲ್ಲಿ 5 ಕೋಟಿ ರೂಪಾಯಿಗೂ ಹೆಚ್ಚು ಹಣ, 30 ಕೆಜಿಗೂ ಹೆಚ್ಚು ಚಿನ್ನ ಪತ್ತೆ ಆಗಿತ್ತು.