ಬೆಂಗಳೂರು: ಕನ್ನಡ ಸಿನಿರಂಗದ ಸಾಹಸಸಿಂಹ, ದಿವಂಗತ ನಟ ಡಾ. ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಕನ್ನಡ ಚಿತ್ರರಂಗದ ಹಿರಿಯ ನಟಿಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿನ ಸಿಎಂ ನಿವಾಸದಲ್ಲಿ ನಟಿ ಜಯಮಾಲ, ಶ್ರತಿ ಹಾಗೂ ಮಾಳವಿಕಾ ಅವಿನಾಶ್ ಅವರು ಸಿಎಂ ಅವರನ್ನು ಭೇಟಿಯಾಗಿ, “ಕನ್ನಡದ ಅಮರ ನಾಯಕ ವಿಷ್ಣುವರ್ಧನ್ ಅವರ ಸೇವೆ, ಜನಪ್ರಿಯತೆ ಹಾಗೂ ಅಭಿಮಾನಿಗಳ ಅಪಾರ ಪ್ರೀತಿ ಗೌರವಕ್ಕೆ ತಕ್ಕಂತೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಬೇಕು” ಎಂದು ಮನವಿ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಪಂಚಭಾಷಾ ನಟಿ ಬಿ. ಸರೋಜಾದೇವಿ ಅವರ ಹೆಸರನ್ನು, ಅವರು ವಾಸವಿದ್ದ ಮಲ್ಲೇಶ್ವರಂನ ರಸ್ತೆಗೆ ನಾಮಕರಣ ಮಾಡುವಂತೆ ಕೂಡ ಅವರು ಸರ್ಕಾರದ ಗಮನಕ್ಕೆ ತಂದಿದ್ದಾರೆ.
ಅಭಿಮಾನಿಗಳ ಭಾವನೆಗೆ ತಕ್ಕಂತೆ ಸಮಾಧಿ ಸ್ಥಳ ಉಳಿಸಲು ಮನವಿ
ಸಾಹಸಸಿಂಹ ವಿಷ್ಣುವರ್ಧನ್ ಅವರ ಸಮಾಧಿ ಸ್ಥಳದ ಬಗ್ಗೆ ಇತ್ತೀಚೆಗೆ ಭಾರೀ ವಿವಾದ ಎದ್ದಿತ್ತು.

ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಮಾಧಿ ಸ್ಥಳವನ್ನು ಬಾಲಣ್ಣ ಕುಟುಂಬಸ್ಥರು ನೆಲಸಮಗೊಳಿಸಿದ ಹಿನ್ನೆಲೆಯಲ್ಲಿ ವಿಷ್ಣುವರ್ಧನ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಘಟನೆ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು.
ಸರ್ಕಾರವು ನಂತರ ಸ್ಟುಡಿಯೋ ಜಾಗವನ್ನು ತನ್ನ ಸುಪರ್ದಿಗೆ ಪಡೆಯಲು ಜಿಲ್ಲಾಧಿಕಾರಿಗಳಿಗೆ ನೋಟಿಸ್ ನೀಡಿತ್ತು. ಇದರಿಂದ ಅಭಿಮಾನಿಗಳ ಹೋರಾಟಕ್ಕೆ ಮತ್ತಷ್ಟು ಬಲ ಸಿಕ್ಕಿತು.
ಈ ಹಿನ್ನೆಲೆಯಲ್ಲೇ ಭಾರತಿ ವಿಷ್ಣುವರ್ಧನ್ ಹಾಗೂ ಅಳಿಯ ನಟ ಅನಿರುದ್ಧ್ ಜತ್ಕರ್ ಅವರು ನಾಳೆ (ಸೆಪ್ಟೆಂಬರ್ 3) ಬೆಳಿಗ್ಗೆ 10.30 ಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, “ಅಭಿಮಾನಿಗಳ ಭಾವನೆಗಳನ್ನು ಗೌರವಿಸಿ, ವಿಷ್ಣುವರ್ಧನ್ ಸಮಾಧಿ ಸ್ಥಳಕ್ಕಾಗಿ ಅಭಿಮಾನ್ ಸ್ಟುಡಿಯೋದಲ್ಲಿ ಕನಿಷ್ಠ 10 ಗುಂಟೆ ಜಾಗವನ್ನು ಮೀಸಲಿಡಬೇಕು” ಎಂದು ಮನವಿ ಮಾಡಲು ತೀರ್ಮಾನಿಸಿದ್ದಾರೆ.