ಬೆಂಗಳೂರು, ಸೆ.16: ಕೃಷ್ಣಾ ಮೇಲ್ದಂಡೆ ಯೋಜನೆ (UKP) ಹಂತ–3ಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಆಲಮಟ್ಟಿ ಜಲಾಶಯದ ಎತ್ತರವನ್ನು 519.6 ಮೀಟರ್ನಿಂದ 524.256 ಮೀಟರ್ಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಈ ತೀರ್ಮಾನದಿಂದ ಸುಮಾರು 5.94 ಲಕ್ಷ ಹೆಕ್ಟೇರ್ (14–15 ಲಕ್ಷ ಎಕರೆ) ಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದಲ್ಲಿ ನಡೆದ ವಿಶೇಷ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ“ನೀರನ್ನು ಸಮುದ್ರ ಸೇರದಂತೆ ಸದ್ಬಳಕೆ ಮಾಡಿಕೊಂಡು, ಲಕ್ಷಾಂತರ ರೈತರ ಬದುಕನ್ನು ಹಸನಾಗಿಸಲು ಸರ್ಕಾರ ಐತಿಹಾಸಿಕ ತೀರ್ಮಾನ ಕೈಗೊಂಡಿದೆ”ಎಂದು ತಿಳಿಸಿದರು.

ರೈತರಿಗೆ ಭೂಸ್ವಾಧೀನ ಪರಿಹಾರ
- ನೀರಾವರಿ ಜಮೀನು: ಎಕರೆಯೊಂದಕ್ಕೆ ₹40 ಲಕ್ಷ ಪರಿಹಾರ
- ಒಣಭೂಮಿ: ಎಕರೆಯೊಂದಕ್ಕೆ ₹30 ಲಕ್ಷ ಪರಿಹಾರ
- ಕಾಲುವೆ ನಿರ್ಮಾಣಕ್ಕೆ ಬೇಕಾದ ಭೂಮಿ: ನೀರಾವರಿ ಜಮೀನುಗೆ ₹30 ಲಕ್ಷ, ಒಣಭೂಮಿಗೆ ₹25 ಲಕ್ಷ ಪರಿಹಾರ
- ಪರಿಹಾರವನ್ನು ಮೂರು ಆರ್ಥಿಕ ವರ್ಷಗಳೊಳಗೆ ಹಂತ ಹಂತವಾಗಿ ನೀಡಲಾಗುವುದು.
ಮುಳುಗಡೆಯಾಗುವ ಪ್ರದೇಶ
- ಒಟ್ಟು 1,33,867 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗುವುದು.
- ಇದರಲ್ಲೇ 75,563 ಎಕರೆ ಮುಳುಗಡೆಯಾಗಲಿದೆ.
- 51,837 ಎಕರೆ ಕಾಲುವೆ ನಿರ್ಮಾಣಕ್ಕೆ ಬಳಸಲಾಗುವುದು.
- ಪುನರ್ವಸತಿ ಕಾರ್ಯಗಳಿಗೆ 6,469 ಎಕರೆ ಬೇಕಾಗಲಿದೆ.
- ಸುಮಾರು 20 ಗ್ರಾಮಗಳು ಮತ್ತು ಕೆಲವು ಪಟ್ಟಣದ ವಾರ್ಡ್ಗಳು ಜಲಾಶಯದಲ್ಲಿ ಮುಳುಗಡೆಯಾಗುವ ಸಾಧ್ಯತೆ ಇದೆ.
ಯೋಜನೆಯ ವೆಚ್ಚ
ಪ್ರತಿವರ್ಷ ₹15,000 – ₹20,000 ಕೋಟಿ ವೆಚ್ಚವಾಗಲಿದೆ. ಒಟ್ಟಾರೆ ಯೋಜನೆಯ ಅಂದಾಜು ವೆಚ್ಚ ₹70,000 ಕೋಟಿ.
ಹಿಂದೆ ನಿಂತ ಯೋಜನೆಗೆ ನೂತನ ಚೈತನ್ಯ
2023ರಲ್ಲಿ ಹಿಂದಿನ ಬಿಜೆಪಿ ಸರ್ಕಾರ ಪರಿಹಾರದ ಮೊತ್ತ ಕಡಿಮೆ ನಿಗದಿ ಮಾಡಿದ್ದರಿಂದ ರೈತರು ಭೂಮಿ ನೀಡಲು ಮುಂದೆ ಬರಲಿಲ್ಲ. ಇದರಿಂದ ಯೋಜನೆ ಸ್ಥಗಿತಗೊಂಡಿತ್ತು. ಈಗ ಎಕರೆಗೆ ₹40 ಲಕ್ಷ ಪರಿಹಾರದ ಘೋಷಣೆಯೊಂದಿಗೆ ರೈತರು ಸಹಕರಿಸುವ ನಿರೀಕ್ಷೆಯಿದೆ.
ಆಲಮಟ್ಟಿ ಎತ್ತರ 524 ಮೀ.ಗೆ – ರೈತರ ಭವಿಷ್ಯ ಬದಲಾಗಬಹುದೇ?
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ–3ಕ್ಕೆ ರಾಜ್ಯ ಸರ್ಕಾರ ಕೊನೆಗೂ ಹಸಿರು ನಿಶಾನೆ ತೋರಿದೆ. ಆಲಮಟ್ಟಿ ಜಲಾಶಯದ ಎತ್ತರವನ್ನು 519.6 ಮೀಟರ್ನಿಂದ 524.256 ಮೀಟರ್ಗೆ ಹೆಚ್ಚಿಸುವ ನಿರ್ಧಾರದಿಂದ ಲಕ್ಷಾಂತರ ಎಕರೆಗಳ ಭೂಮಿಗೆ ನೀರಾವರಿ ಸೌಲಭ್ಯ ಒದಗುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ನಿರ್ಧಾರವನ್ನು “ಐತಿಹಾಸಿಕ” ಎಂದು ಕೊಂಡಾಡಿದ್ದಾರೆ. ಆದರೆ, ಈ ಯೋಜನೆ ನೆಲೆಯೂರಲು ರೈತರ ಸಹಕಾರ, ಭೂಸ್ವಾಧೀನದ ಸೂಕ್ಷ್ಮ ನಿರ್ವಹಣೆ ಮತ್ತು ಪುನರ್ವಸತಿ ಕಾರ್ಯಾಚರಣೆ ಮುಖ್ಯವಾಗಲಿದೆ.
ಒಣಭೂಮಿಗೆ ಎಕರೆಗೆ ₹30 ಲಕ್ಷ, ನೀರಾವರಿ ಜಮೀನಿಗೆ ಎಕರೆಗೆ ₹40 ಲಕ್ಷ ಪರಿಹಾರದ ಘೋಷಣೆ ಹಿಂದೆಂದೂ ಕೇಳಿ ಬಾರದಂತಹದು. ಕಾಲುವೆ ನಿರ್ಮಾಣಕ್ಕೆ ಭೂಮಿ ಕಳೆದುಕೊಳ್ಳುವ ರೈತರಿಗೆ ₹25–30 ಲಕ್ಷ ಪರಿಹಾರ ನಿಗದಿಯಾಗಿದೆ. ಇದು ಸರ್ಕಾರ ರೈತರ ಮನವೊಲಿಸುವ ತಂತ್ರವೇ ಸರಿ, ಆದರೆ ಪರಿಹಾರ ವಿತರಣೆಯ ಪಾರದರ್ಶಕತೆ ಪ್ರಶ್ನೆಯಾದರೆ ಮತ್ತೊಂದು ಹೋರಾಟ ತಪ್ಪದು.