ಬೆಂಗಳೂರು, ಸೆಪ್ಟೆಂಬರ್ 19: ರಾಜ್ಯದಲ್ಲಿ ಕಾಂಗ್ರೆಸ್ ಪಿಸಲು ವಿಫಲವಾಗಿರುವ ಆರೋಪಗಳ ನಡುವೆಯೇ, ಬಣಬಡಿದಾಟ ಹೆಚ್ಚುತ್ತಿರುವ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ರಾಜ್ಯ ಬಿಜೆಪಿ ನಾಯಕರಿಗೆ ಗಟ್ಟಿಯಾದ ಶಿಸ್ತಿನ ಪಾಠ ಮಾಡಿದ್ದಾರೆ.
ಬಿಜೆಪಿ ಚಿಂತನಾ ಸಭೆಯ ಸಮಾರೋಪ ಭಾಷಣದಲ್ಲಿ ಮಾತನಾಡಿದ ಸಂತೋಷ್ ಅವರು, “ಪಕ್ಷದಲ್ಲಿ ಆಂತರಿಕ ಸ್ಪರ್ಧೆ ಅಗತ್ಯ. ಆದರೆ ಅದು ಅಶಿಸ್ತಿನ ಹಂತಕ್ಕೆ ತಲುಪಬಾರದು. ತಪ್ಪುಗಳು ನಡೆದಿವೆ, ಅದನ್ನು ಒಪ್ಪಿಕೊಂಡು ಸರಿಪಡಿಸಿಕೊಳ್ಳಬೇಕು. ನಾಯಕರು ನೇರವಾಗಿ ಮಾತನಾಡಬೇಕು, ಮಧ್ಯವರ್ತಿಗಳ ಮೂಲಕ ಸಂದೇಶ ಕಳುಹಿಸುವ ಸಂಸ್ಕೃತಿ ಬೇಡ” ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ.
ಅವರು ಮುಂದುವರಿದು, “ಎಲ್ಲಾ ಸರ್ವೇಗಳಲ್ಲೂ ಕಾಂಗ್ರೆಸ್ಗೆ ಕಡಿಮೆ ಸ್ಥಾನಗಳು ಬರುತ್ತಿವೆ. ಆದರೆ ನಾವು ನಡೆಸುವ ಹೋರಾಟವನ್ನು ಕಾಂಗ್ರೆಸ್ ವಿಷಯಾಂತರ ಮಾಡುತ್ತಿದೆ. ಧರ್ಮಸ್ಥಳ ವಿಚಾರ ಮುಗಿದ ತಕ್ಷಣ ಚಾಮುಂಡಿ ಬೆಟ್ಟದ ವಿಷಯ ತಂದರು. ಹೀಗಾಗಿ ನಮ್ಮ ನಾಯಕರ ಮಾತು-ನಡತೆಯಲ್ಲಿ ಸ್ಪಷ್ಟತೆ ಇರಬೇಕು. ಕಾರ್ಯಕರ್ತರ ಕೈಗೆ ಸಿಗುವಂತ ನಾಯಕತ್ವ ಇರಲಿ. ಅನಗತ್ಯ ಹೇಳಿಕೆಗಳಿಂದ ದೂರವಿರಿ” ಎಂದು ಎಚ್ಚರಿಕೆ ನೀಡಿದರು.
ಕಾರ್ಯಕರ್ತರ ಅಭಿಲಾಷೆ ಅರಿತು ನಡೆಯುವಂತೆ ಕಿವಿಮಾತು ನೀಡಿದ ಸಂತೋಷ್, “ನಾಯಕರ ನಡುವೆ ಒಗ್ಗಟ್ಟು, ಸಮನ್ವಯ ಕೊರತೆ ಇದೆ ಎಂದು ಕಾರ್ಯಕರ್ತರು ಭಾವಿಸುತ್ತಿದ್ದರೆ ಅದು ನಿಜಕ್ಕೂ ಇದೆ ಅನ್ನೋ ಅರ್ಥ. ಅದನ್ನು ಸರಿಪಡಿಸಿಕೊಳ್ಳಬೇಕು. ರಾಜ್ಯ ಸರ್ಕಾರ ಜನಪ್ರಿಯತೆ ಕಳೆದುಕೊಳ್ಳುತ್ತಿರುವುದು ನಮ್ಮಿಗೆ ಸದಾವಕಾಶ. ತಳಮಟ್ಟದಿಂದ ಜನಾಭಿಪ್ರಾಯ ರೂಪಿಸಿ ಮುಂಬರುವ ಸ್ಥಳೀಯ ಸಂಸ್ಥೆ ಹಾಗೂ ವಿಧಾನಸಭೆ ಚುನಾವಣೆಗಳಿಗೆ ಸಂಘಟಿತ ಸಿದ್ಧತೆ ಮಾಡಿಕೊಳ್ಳಿ” ಎಂದು ಸಲಹೆ ನೀಡಿದರು.
“ಕಾಂಗ್ರೆಸ್ ತಪ್ಪಿನಿಂದ ಗೆಲ್ಲುವಂತಾಗಬಾರದು”
“ಮೊದಲು ನಿಮ್ಮ ಆತ್ಮಾವಲೋಕನ ಮಾಡಿ. ಆರು ತಿಂಗಳಲ್ಲಿ ನೀವು ಮಾತನಾಡಿದ್ದನ್ನೇ ಪರಿಶೀಲಿಸಿ, ಆಗ ನಿಮ್ಮ ತಪ್ಪುಗಳು ಗೋಚರಿಸುತ್ತವೆ. ಈಗ ಸರ್ವೇ ಮಾಡಿದರೆ ಕಾಂಗ್ರೆಸ್ 60 ಸ್ಥಾನಗಳಲ್ಲಿ ಬರಬಹುದು. ಆದರೆ ಅದು ಅವರ ಗೆಲುವಲ್ಲ, ನಮ್ಮ ಸೋಲೂ ಅಲ್ಲ. ಕಾಂಗ್ರೆಸ್ ತಪ್ಪಿನಿಂದ ಅವರಿಗೆ ಅವಕಾಶ ಸಿಗಬಾರದು. ನಮ್ಮ ಸಾಮರ್ಥ್ಯದಿಂದಲೇ ಗೆಲ್ಲಬೇಕು” ಎಂದು ಬಿ.ಎಲ್. ಸಂತೋಷ್ ಹೇಳಿದ್ದಾರೆ.
ಚಿಂತನಾ ಸಭೆಯನ್ನು ಅಶೋಕ್ ಮತ್ತು ವಿಜಯೇಂದ್ರ ಯಶಸ್ವಿಯಾಗಿ ನಡೆಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, “ಇದು ಮುಂದುವರಿಯಲಿ” ಎಂದು ಸಲಹೆ ನೀಡಿದ್ದಾರೆ.