ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಲು ಶಿಕ್ಷಕರ ಸಂಘ ಹಾಗೂ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರು ಹೆಚ್ಚುವರಿ 10 ದಿನಗಳ ಕಾಲಾವಕಾಶ ಕೇಳಿ ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಟೋಬರ್ 18ರವರೆಗೆ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ರಜೆ ವಿಸ್ತರಿಸಿರುವುದಾಗಿ ತಿಳಿಸಿದ್ದಾರೆ.
ದಸರಾ ರಜೆ ಮೂಲತಃ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ನಿಗದಿಯಾಗಿತ್ತು. ಆದರೆ, ಶಿಕ್ಷಕರು ಜಾತಿ ಸಮೀಕ್ಷೆ ಕಾರ್ಯದಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ರಜೆಯನ್ನು ವಿಸ್ತರಿಸಿ ಒಟ್ಟು 8 ಕಾರ್ಯದಿನಗಳ ಹೆಚ್ಚುವರಿ ರಜೆ ಘೋಷಿಸಲಾಗಿದೆ.
ಸಿಎಂ ಸಿದ್ದರಾಮಯ್ಯ ಅವರು ಹೇಳುವಂತೆ, “ರಾಜ್ಯದ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ಸೆಪ್ಟೆಂಬರ್ 2ರಿಂದ ಪ್ರಾರಂಭಗೊಂಡಿದೆ. ಕೆಲವು ಜಿಲ್ಲೆಗಳಲ್ಲಿ ಸಮೀಕ್ಷೆ ಪೂರ್ಣಗೊಳ್ಳದಿರುವುದರಿಂದ ಅವಧಿ ವಿಸ್ತರಿಸಲಾಗಿದೆ. ಕೊಪ್ಪಳದಲ್ಲಿ ಶೇ.97ರಷ್ಟು ಕಾರ್ಯ ಪೂರ್ಣಗೊಂಡಿದ್ದರೆ, ದಕ್ಷಿಣ ಕನ್ನಡದಲ್ಲಿ ಶೇ.67 ಮಾತ್ರ ನಡೆದಿದೆ. ಹೀಗಾಗಿ ಸಮೀಕ್ಷೆ ಪೂರ್ಣಗೊಳಿಸಲು ಶಿಕ್ಷಕರ ಸಂಘದಿಂದ ಬಂದ ಮನವಿಯನ್ನು ನಾವು ಅಂಗೀಕರಿಸಿದ್ದೇವೆ,” ಎಂದರು.

ರಾಜ್ಯದಲ್ಲಿ ಸುಮಾರು 1 ಲಕ್ಷ 20 ಸಾವಿರ ಶಿಕ್ಷಕರು ಸೇರಿ ಒಟ್ಟು 1.6 ಲಕ್ಷ ಸಿಬ್ಬಂದಿ ಈ ಮಹತ್ವದ ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲೇ 6,700 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ನಗರದಲ್ಲಿ 46 ಲಕ್ಷ ಮನೆಗಳ ಸಮೀಕ್ಷೆ ನಡೆಯಬೇಕಿದ್ದು, ಪ್ರತೀ ದಿನ 10 ರಿಂದ 15 ಮನೆಗಳ ಸಮೀಕ್ಷೆ ನಡೆಸುವ ಗುರಿ ನೀಡಲಾಗಿದೆ. ನರಕ ಚತುರ್ದಶಿಯೊಳಗೆ ಸಮೀಕ್ಷೆ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ.
ಸಮೀಕ್ಷೆ ವೇಳೆ ಕರ್ತವ್ಯದಲ್ಲಿದ್ದ ಮೂರು ಶಿಕ್ಷಕರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಅವರಿಗೆ ತಲಾ ₹20 ಲಕ್ಷ ಪರಿಹಾರ ನೀಡಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ. ಸಮೀಕ್ಷೆ ಕಾರ್ಯದಲ್ಲಿ ಸಹಕರಿಸಲು ಹಿಂದೇಟು ಹಾಕುವವರ ವಿರುದ್ಧ ಸರ್ಕಾರ ಶಿಸ್ತಿನ ಕ್ರಮ ಕೈಗೊಳ್ಳಲಿದೆ ಎಂದೂ ಅವರು ಎಚ್ಚರಿಸಿದ್ದಾರೆ.
ಇದೇ ವೇಳೆ, ಅಕ್ಟೋಬರ್ 12ರಿಂದ ಆರಂಭವಾಗುವ ದ್ವಿತೀಯ ಪಿಯು ಮಧ್ಯಂತರ ಪರೀಕ್ಷೆ ಹಿನ್ನೆಲೆಯಲ್ಲಿ ಪಿಯುಸಿ ಉಪನ್ಯಾಸಕರಿಗೆ ಸಮೀಕ್ಷೆ ಕಾರ್ಯದಿಂದ ವಿನಾಯ್ತಿ ನೀಡಲಾಗಿದೆ.
ಶಾಲೆಗಳ ಪುನರಾರಂಭ:
ಅಕ್ಟೋಬರ್ 18ರ ವರೆಗೆ ರಜೆ ವಿಸ್ತರಣೆಗೊಂಡಿರುವುದರಿಂದ, ಅಕ್ಟೋಬರ್ 19 ಭಾನುವಾರವಾಗಿದ್ದು, 20 ಹಾಗೂ 22ರಂದು ದೀಪಾವಳಿ ರಜೆಗಳು ಇರುವುದರಿಂದ, ಶಾಲೆಗಳು ಬಹುತೇಕ ಹಬ್ಬಗಳ ನಂತರವೇ ಪುನರಾರಂಭಗೊಳ್ಳಲಿವೆ.
ರಾಜ್ಯಾದ್ಯಂತ ನಡೆಯುತ್ತಿರುವ ಈ ಸಮೀಕ್ಷೆ ಪೂರ್ತಿಯು ಜನಗಣತಿ ಹಾಗೂ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಪ್ರಮುಖ ಹೆಜ್ಜೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.







