ಬೆಂಗಳೂರು, ಅ. 10: ಬೆಂಗಳೂರು ನಗರದ ಅಭಿವೃದ್ಧಿಗೆ ಮಹತ್ತ್ವದ ಹೆಜ್ಜೆಯಾಗಿ ಪರಿಗಣಿಸಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ದ ಮೊದಲ ಸಭೆ ಶುಕ್ರವಾರ ಕೆಂಪೇಗೌಡ ಪೌರ ಸಭಾಂಗಣದಲ್ಲಿ ನಡೆಯಿತು. ಈ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವು ಪ್ರಮುಖ ಸೂಚನೆಗಳನ್ನು ನೀಡಿ ಅಧಿಕಾರಿಗಳನ್ನು ನಗರ ಅಭಿವೃದ್ಧಿಗೆ ಬದ್ಧತೆಯಿಂದ ಕೆಲಸ ಮಾಡಲು ಕರೆ ನೀಡಿದರು.
ಸರ್ಕಾರದ ನಿರ್ಧಾರಗಳು ಮತ್ತು ಮುಖ್ಯಮಂತ್ರಿ ಸೂಚನೆಗಳು
- ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಮುಂದಿನ ದಿನಗಳಲ್ಲಿ ಜಿಬಿಎ ಮೂಲಕ ಕೆಳಗಿನ ವಿಷಯಗಳ ಮೇಲೆ ಆದ್ಯತೆ ನೀಡುವುದಾಗಿ ತಿಳಿಸಿದರು.
- ಬೆಂಗಳೂರಿನ ನಾಗರಿಕರಿಗೆ ಮೂಲ ಸೌಲಭ್ಯಗಳ ಒದಗಿಕೆ, ಸಮರ್ಪಕ ಕಸ ವಿಲೇವಾರಿ ಮತ್ತು ಸಂಚಾರ ದಟ್ಟಣೆ ಕಡಿತ ನಿರ್ವಹಣೆ.
- ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಸುಧಾರಣೆ, ಪಾದಚಾರಿ ಮಾರ್ಗಗಳ ವಿಸ್ತರಣೆ ಮತ್ತು ಸ್ವಚ್ಚತೆಗೆ ಆದ್ಯತೆ.
- ಮೆಟ್ರೋ ರೈಲು ಮಾರ್ಗಗಳಲ್ಲಿ ಲಾಸ್ಟ್ ಮೈಲ್ ಕನೆಕ್ಟಿವಿಟಿ ಹೆಚ್ಚಿಸಲು ಸಣ್ಣ ಬಸ್ಸುಗಳ ಅನುಷ್ಠಾನ ಯೋಜನೆಗೆ ಸಾರಿಗೆ ಇಲಾಖೆಗೆ ಸೂಚನೆ.
- ಐದು ಹೊಸ ನಗರಪಾಲಿಕೆಗಳಿಗೆ ಸ್ವತಂತ್ರ ಆಡಳಿತ ಕಚೇರಿಗಳ ನಿರ್ಮಾಣಕ್ಕೆ ಸ್ಥಳ ಗುರುತಿಸಬೇಕೆಂದು ಆದೇಶ.
- ಎಲ್ಲ ಪಾಲಿಕೆ ಆಯುಕ್ತರಿಗೆ ತೆರಿಗೆ ಸಂಗ್ರಹ ಹೆಚ್ಚಿಸುವುದು ಹಾಗೂ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬಾರದೆಂದು ಎಚ್ಚರಿಕೆ.
- ಬಿಡಿಎ, ಬಿಡಬ್ಲುಎಸ್ಎಸ್ಬಿ, ಬೆಸ್ಕಾಂ, ಬಿಎಂಆರ್ಸಿಎಲ್ ಸೇರಿದಂತೆ ಎಲ್ಲಾ ಸಂಸ್ಥೆಗಳು ಜಿಬಿಎ ಜೊತೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕೆಂಬ ಕರೆ.
- ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಜನರಿಗೆ ಉತ್ತಮ ಆಡಳಿತ ನೀಡುವ ಉದ್ದೇಶ ಮಾತ್ರ ಇದೆ ಎಂದು ಸಿಎಂ ಸ್ಪಷ್ಟೀಕರಣ ನೀಡಿದರು.

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಕ್ರೋಶ
ಇನ್ನೊಂದೆಡೆ, ಜಿಬಿಎ ಸಭೆ ನಡೆಸಿದ ವಿಧಾನವನ್ನು ತರಾಟೆಗೆ ತೆಗೆದುಕೊಂಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಈ ಸಭೆಯನ್ನು ಸಂವಿಧಾನದ ಉಲ್ಲಂಘನೆ ಎಂದು ಟೀಕಿಸಿದರು.
ಸರ್ಕಾರ ಎಂದರೆ ಕಾನೂನು, ಸುವ್ಯವಸ್ಥೆ ಇರಬೇಕು. ನಿನ್ನೆ ಫೋನ್ ಮಾಡಿ, ಇಂದು ಸಭೆ..! ಇದು ಯಾವ ನಿಯಮ? ಎಂದು ಪ್ರಶ್ನಿಸಿದ ಅವರು, ಹೊಸ ಪಾಲಿಕೆಗೆ ಮೇಯರ್ ಸುಪ್ರೀಂ ಆಗಬೇಕು, ಆದರೆ ಮುಖ್ಯಮಂತ್ರಿಯೇ ಎಲ್ಲಾ ಯೋಜನೆಗಳಿಗೆ ಅನುಮೋದನೆ ಕೊಡುತ್ತಿದ್ದಾರೆ. ಇದು ಅಧಿಕಾರ ಕಬಳಿಕೆ ಎಂದು ಆರೋಪಿಸಿದರು. 5 ಪಾಲಿಕೆ ಮಾಡ್ತಾ ಇದ್ದರೆ, ಅವುಗಳಿಗೆ ಸಭೆ ನಡೆಸೋ ಸಭಾಂಗಣಗಳಾದ್ರೂ ಇದ್ದಾವೆ? ಎಂದು ವ್ಯಂಗ್ಯವಾಡಿದರು. ನಿಯಮಾನುಸಾರ ಕನಿಷ್ಟ 7 ದಿನಗಳ ಮೊದಲು ನೋಟಿಸ್ ಕೊಡಬೇಕು, ಆದರೆ ಸರ್ಕಾರ ಅವಸರದಲ್ಲಿ ಸಭೆ ನಡೆಸಿದೆ ಎಂದು ದೂರಿದರು. ಬಿಜೆಪಿ ನಾಯಕರು ಈಗಾಗಲೇ ಈ ವಿಚಾರವಾಗಿ ಪಿಐಎಲ್ ದಾಖಲಿಸಿರುವುದಾಗಿ ತಿಳಿಸಿದರು. ಒಂದು ಕಡೆ ಸರ್ಕಾರ ನೂತನ ರಚನೆಯ ಮೂಲಕ ನಗರಾಭಿವೃದ್ಧಿಗೆ ವೇಗ ನೀಡಲು ಪ್ರಯತ್ನಿಸುತ್ತಿರುವುದಾಗಿ ಹೇಳಿಕೊಳ್ಳುತ್ತಿರುವಾಗ, ಮತ್ತೊಂದು ಕಡೆ ವಿರೋಧ ಪಕ್ಷ ಇದನ್ನು ಪದ್ದತಿಹೀನ ಕ್ರಮವೆಂದು ಆರೋಪಿಸಿದೆ.







