ಶಿವಮೊಗ್ಗ: ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಬೆಂಗಳೂರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಶಿವಮೊಗ್ಗ ಹಾಗೂ ಶ್ರೀ ಸಿದ್ದೇಶ್ವರ ಸೇವಾ ಸಮಿತಿ, ಪುರಲೆ — ಇವರ ಸಂಯುಕ್ತಾಶ್ರಯದಲ್ಲಿ ವೀರಶೈವ ಶಿವಾಚಾರ್ಯರ ಸದ್ಬೋಧನಾ ಧರ್ಮಜಾಗೃತಿ ಪಾದಯಾತ್ರೆ ಮತ್ತು ವಿಭೂತಿ, ರುದ್ರಾಕ್ಷಿ, ಶಿವಧಾರ ಹಾಗೂ ಸಿದ್ಧಾಂತ ಶಿಖಾಮಣಿ ಮಹಾಗ್ರಂಥ ವಿತರಣೆ ಕಾರ್ಯಕ್ರಮ ನಾಳೆ (ದಿನಾಂಕ 24, ಸೋಮವಾರ) ಬೆಳಿಗ್ಗೆ 10 ಗಂಟೆಗೆ ಪುರಲೆಯ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಆರಂಭಗೊಳ್ಳಲಿದೆ.
ಈ ಧಾರ್ಮಿಕ ಪಾದಯಾತ್ರೆಯಲ್ಲಿ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ ಅನೇಕ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಲಿದ್ದು, ಭಕ್ತ ಸಮುದಾಯದಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸುವುದು ಮುಖ್ಯ ಉದ್ದೇಶವಾಗಿದೆ.

ಪಂಚಾಚಾರ–ಷಟಸ್ಥಳ ತತ್ತ್ವಗಳ ಜಾಗೃತಿ ಕೇಂದ್ರೀಕೃತ
ಹಿಂದೂ ಧರ್ಮದ ವೀರಶೈವ–ಲಿಂಗಾಯಿತ ಪರಂಪರೆ ಸಾವಿರಾರು ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿರುವ
ಪಂಚಾಚಾರ, ಷಟಸ್ಥಳ ಹಾಗೂ ಅಷ್ಟಾವರಣ ತತ್ತ್ವಗಳು ಭಕ್ತನ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಶ್ರೇಯೋಭಿವೃದ್ಧಿಗೆ ಮಾರ್ಗದರ್ಶಕವಾಗಿವೆ. ಈ ಪರಂಪರೆಗಳ ಪುನರುಜ್ಜೀವನಕ್ಕಾಗಿ ಪಾದಯಾತ್ರೆಯನ್ನು ಆಯೋಜಿಸಲಾಗಿದೆ.

ವಿಭೂತಿಧಾರಣೆ ವೀರಶೈವ–ಲಿಂಗಾಯಿತ ಪರಂಪರೆಯ ಅತ್ಯಂತ ಪವಿತ್ರ ಆಚರಣೆಗಳಲ್ಲಿ ಒಂದಾಗಿ ಪರಿಗಣಿತವಾಗಿದ್ದು, ಭಕ್ತನ ಜೀವನದಲ್ಲಿ ಶುದ್ಧತೆ, ತಾತ್ವಿಕತೆ ಮತ್ತು ಶಿವನ ನಿತ್ಯಸಾನ್ನಿಧ್ಯವನ್ನು ಪ್ರತಿಬಿಂಬಿಸುತ್ತದೆ. ದೇಹದ ಮೇಲೆ ಹಚ್ಚುವ ವಿಭೂತಿ, ಅಹಂಕಾರದ ಕರಗುವಿಕೆ ಮತ್ತು ಜೀವನದ ಅನಿತ್ಯತೆಯ ಅರಿವು ಮೂಡಿಸುವ ಸಂಕೇತವಾಗಿದ್ದು, ಭಕ್ತನ ಆತ್ಮಶಕ್ತಿಯನ್ನು ಬಲಪಡಿಸಲು ಸಹಕಾರಿಸುತ್ತದೆ. ಶಿವಪೂಜೆ, ಜಪ, ಧ್ಯಾನ ಹಾಗು ನಿತ್ಯಾಚರಣೆಯ ಅಂಗವಾಗಿ ವಿಭೂತಿಧಾರಣೆ ಮನಸ್ಸಿಗೆ ಶಾಂತಿ, ಚೈತನ್ಯ ಮತ್ತು ಆಧ್ಯಾತ್ಮಿಕ ಜಾಗೃತಿ ನೀಡುವ ಶೈವಸಿದ್ಧಾಂತದ ಮುಖ್ಯ ಉದ್ದೇಶವಾಗಿದೆ.

ರುದ್ರಾಕ್ಷಿಧಾರಣೆ ಶಿವಭಕ್ತನಿಗೆ ರಕ್ಷಣೆಯ ಕವಚವಾಗಿದ್ದು, ಮನಸ್ಸಿಗೆ ಏಕಾಗ್ರತೆ, ಶಾಂತಿ ಮತ್ತು ಭಕ್ತಿಭಾವವನ್ನು ಹೆಚ್ಚಿಸುತ್ತದೆ. ಶಿವನ ಕೃಪೆ ಸದಾ ಜೊತೆಗಿರಲೆಂದು ಧರಿಸುವ ಈ ಪವಿತ್ರ ಮಣಿಯು ಭಕ್ತನ ಆತ್ಮಶಕ್ತಿ ಮತ್ತು ಆಧ್ಯಾತ್ಮಿಕತೆಗೆ ಬಲ ನೀಡುತ್ತದೆ.
ಶಿವಧಾರ / ಇಷ್ಟಲಿಂಗಾಧಾರಣೆ ಭಕ್ತ ಮತ್ತು ಶಿವನ ನಡುವಿನ ನೇರ ಆಧ್ಯಾತ್ಮಿಕ ಬಾಂಧವ್ಯವನ್ನು ಸೂಚಿಸುವ ವೀರಶೈವ ಪರಂಪರೆಯ ಮುಖ್ಯ ಆಧಾರ.

ಸಿದ್ಧಾಂತ ಶಿಖಾಮಣಿ ಮಹಾಗ್ರಂಥ
ವೀರಶೈವ ಧರ್ಮದ ಮೂಲ ತತ್ತ್ವ, ಆಚರಣೆಗಳು, ಆಧ್ಯಾತ್ಮಿಕ ಮಾರ್ಗಗಳನ್ನು ವಿವರಿಸುವ ಪ್ರಾಮಾಣಿಕ ಧಾರ್ಮಿಕ ಗ್ರಂಥ. ಭಕ್ತರಿಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಇದನ್ನು ವಿತರಿಸಲಾಗುತ್ತದೆ.
ಪಾದಯಾತ್ರೆಯ ಸಂದರ್ಭದಲ್ಲಿ ಪುರಲೆ ಗ್ರಾಮದ ಮನೆಮನೆಗೆ ಭೇಟಿ ನೀಡಿ ವಿಭೂತಿ, ರುದ್ರಾಕ್ಷಿ, ಶಿವಧಾರ ಹಾಗೂ ಸಿದ್ಧಾಂತ ಶಿಖಾಮಣಿ ಮಹಾಗ್ರಂಥಗಳನ್ನು ಭಕ್ತರಿಗೆ ವಿತರಿಸುವ ಮೂಲಕ ಸಂಪ್ರದಾಯದ ಮಹತ್ವ ಮತ್ತು ಧಾರ್ಮಿಕ ಆಚರಣೆಗಳ ಪಾವಿತ್ರ್ಯವನ್ನು ಜನಮನದಲ್ಲಿ ಪುನರುಜ್ಜೀವನಗೊಳಿಸುವ ಯತ್ನ ಕೈಗೊಳ್ಳಲಾಗಿದೆ. ಇದರಿಂದ ಆತ್ಮಶೋಧನೆ, ಭಕ್ತಿಭಾವ ಮತ್ತು ವೀರಶೈವ ಸಂಸ್ಕೃತಿಯ ತತ್ತ್ವಗಳು ಭಕ್ತರ ನಿತ್ಯಜೀವನದಲ್ಲಿ ಇನ್ನಷ್ಟು ಗಟ್ಟಿಯಾಗಲಿದೆ ಎಂದು ಶಿವಾಚಾರ್ಯರು ತಿಳಿಸಿದ್ದಾರೆ.
ಧರ್ಮಪುನರುಜ್ಜೀವನ ಪಾದಯಾತ್ರೆಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮಹಾಸಭಾ ಮನವಿ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಮನಿ ಸಜ್ಜನ್ ಮತ್ತು ಶಿವಮೊಗ್ಗ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಸಮಾಜದ ಎಲ್ಲಾ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಧರ್ಮಪುನರುಜ್ಜೀವನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.












