ಶಿವಮೊಗ್ಗ: ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಶ್ರೀ ಸಿದ್ದೇಶ್ವರ ಸೇವಾ ಸಮಿತಿಯ ಸಂಯುಕ್ತಾಶ್ರಯದಲ್ಲಿ ಪುರಲೆಯ ಶ್ರೀ ಸಿದ್ದೇಶ್ವರ ದೇವಾಲಯದಿಂದ ಪ್ರಾರಂಭವಾದ ವೀರಶೈವ ಶಿವಾಚಾರ್ಯರ ಸದ್ಬೋಧನಾ ಧರ್ಮಜಾಗೃತಿ ಪಾದಯಾತ್ರೆ ಇಂದು ಭವ್ಯವಾಗಿ, ಭಕ್ತಿಭಾವದ ನಡುವೆ ಯಶಸ್ವಿಯಾಗಿ ನೆರವೇರಿತು.
ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸಿದ ಈ ಪವಿತ್ರ ಪಾದಯಾತ್ರೆಯಲ್ಲಿ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡು ಧಾರ್ಮಿಕ ಸಂಪ್ರದಾಯದ ಶಕ್ತಿಶಾಲಿ ಸಮ್ಮೇಳನಕ್ಕೆ ಸಾಕ್ಷಿಯಾದರು.

ಯಾತ್ರೆಯ ಸಂದರ್ಭದಲ್ಲಿ ಭಕ್ತರಿಗೆ ವಿಭೂತಿ, ರುದ್ರಾಕ್ಷಿ, ಶಿವಧಾರ, ಜೊತೆಗೆ ವೀರಶೈವ ಧರ್ಮಗ್ರಂಥ ‘ಸಿದ್ಧಾಂತ ಶಿಖಾಮಣಿ’ ವಿತರಿಸಲಾಗಿದ್ದು, ಭಕ್ತರಲ್ಲಿ ಉತ್ಸಾಹ ತುಂಬಿತು. ಸಾವಿರಾರು ವರ್ಷಗಳ ಪಾರಂಪರ್ಯ ಹೊಂದಿರುವ ವೀರಶೈವ–ಲಿಂಗಾಯತ ಪರಂಪರೆಯ ಪಂಚಾಚಾರ, ಷಟಸ್ಥಳ ಮತ್ತು ಅಷ್ಟಾವರಣ ತತ್ತ್ವಗಳನ್ನು ಪುನರುಜ್ಜೀವನಗೊಳಿಸುವ ಧ್ಯೇಯವನ್ನು ಮುಂದಿಟ್ಟುಕೊಂಡು ಪಾದಯಾತ್ರೆ ಸಂಭ್ರಮದಿಂದ ಸಾಗಿತು.

ಪಾದಯಾತ್ರೆಯಲ್ಲಿ ಬಿಳಿಕಿ ಶ್ರೀ, ಹೊನ್ನಾಳಿ ಶ್ರೀ, ತೊಗರ್ಸಿ ಶ್ರೀ, ಹುಣಸಘಟ್ಟ ಶ್ರೀ, ಬಳಸೋಡ ಶ್ರೀ, ಮಳಲಿ ಶ್ರೀ, ಕೋಣಂದೂರು ಶ್ರೀ, ಚಿಕ್ಕಮಗಳೂರು ಶ್ರೀ, ಬೀರೂರು ಶ್ರೀ, ಸೇರಿದಂತೆ 15 ಕ್ಕೂ ಹೆಚ್ಚು ಶಿವಾಚಾರ್ಯರುಗಳು ದಿವ್ಯ ಸಾನ್ನಿಧ್ಯ ವಹಿಸಿದರು.

ಇದೇ ಸಂದರ್ಭದಲ್ಲಿ ಹಲವಾರು ಗಣ್ಯರು ಸಹ ಭಾಗವಹಿಸಿ ಕಾರ್ಯಕ್ರಮಕ್ಕೆ ಗೌರವ ಹೆಚ್ಚಿಸಿದರು. ಶಾಸಕ ಚನ್ನಬಸಪ್ಪ ಎಸ್.ಎನ್, ಜ್ಯೋತಿ ಪ್ರಕಾಶ್, ರುದ್ರಮುನಿ ಸಜ್ಜನ್, ಮಾಜಿ ಸಚಿವ ಈಶ್ವರಪ್ಪ ಕೆ.ಎಸ್., ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಮಾಜಿ ಶಾಸಕರು ಆಯನೂರು ಮಂಜುನಾಥ್, ಎಚ್.ಎಂ. ಚಂದ್ರಶೇಖರಪ್ಪ, ಎಚ್.ವಿ. ಮಹೇಶ್ವರಪ್ಪ, ಎಂ. ಚಂದ್ರಯ್ಯ, ಮಹಾಲಿಂಗಯ್ಯ ಶಾಸ್ತ್ರಿ, ಮಲ್ಲಿಕಾರ್ಜುನ ಸ್ವಾಮಿ, ವಿಕ್ರಮ್, ನವೀನ್ ವಾರದ್, ಬಾಳೆಕಾಯಿ ಮೋಹನ್, ಪಿ. ರುದ್ರೇಶ್, ಮಹೇಶ್ ಮೂರ್ತಿ, ರೇಣುಕಾರಾಧ್ಯ, ಸಚಿನ್ ಪೂಜಾರ್, ಜಗದೀಶ್ ಮತ್ತು ಹಲವಾರು ಸ್ಥಳೀಯ ಸಮುದಾಯ ಮುಖಂಡರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಯಶಸ್ವಿ ಆಯೋಜನೆಗಾಗಿ ಶ್ರೀ ಸಿದ್ದೇಶ್ವರ ಸೇವಾ ಸಮಿತಿಯ ನೀಲಕಂಠಪ್ಪ, ಮಲ್ಲಿಕಾರ್ಜುನ ಪುರಲೆ ಮತ್ತು ಗ್ರಾಮಸ್ಥರು ಸಮಾಜಬಾಂಧವರು ತೋರಿದ ಭಕ್ತಿ, ಸಾನ್ನಿಧ್ಯ ಹಾಗೂ ಶಾಂತಿಪೂರ್ಣ ಸಹಕಾರತೆಗೆ ಸಂಘಟಕರು ಕೃತಜ್ಞತೆ ಸಲ್ಲಿಸಿದ್ದಾರೆ.











