ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಡಿಕೆ ಶಿವಕುಮಾರ್ ಮಧ್ಯಸ್ಥಿಕೆಯಿಂದ ಐಪಿಎಲ್ ಟಿಕೆಟ್ ವಿವಾದಕ್ಕೆ ತೆರೆ: ಶಾಸಕರಿಗೆ ತಲಾ ಮೂರು ಟಿಕೆಟ್ ಖಚಿತ

On: March 30, 2026 10:02 PM
Follow Us:

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ಟಿಕೆಟ್ ಹಂಚಿಕೆ ಕುರಿತು ಉಂಟಾಗಿದ್ದ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಶಾಸಕರ ಬೇಡಿಕೆಗೆ ಮನ್ನಣೆ ನೀಡಿ, ಪ್ರತಿ ಶಾಸಕರಿಗೂ ತಲಾ ಮೂರು ಟಿಕೆಟ್ ನೀಡಲು ಒಪ್ಪಂದವಾಗಿದೆ.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸೋಮವಾರ ತಮ್ಮ ಸದಾಶಿವನಗರ ನಿವಾಸದಲ್ಲಿ ತುರ್ತು ಸಭೆ ನಡೆಸಿ ಈ ನಿರ್ಧಾರಕ್ಕೆ ಕಾರಣರಾದರು. ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮ್ಯಾನೇಜ್‌ಮೆಂಟ್ ಸದಸ್ಯರು ಭಾಗವಹಿಸಿದ್ದರು.

ಶಾಸಕರ ಅಸಮಾಧಾನಕ್ಕೆ ಪರಿಹಾರ

ಇತ್ತೀಚೆಗೆ ವಿಧಾನಸಭೆಯಲ್ಲಿ ಹಲವು ಶಾಸಕರು ಐಪಿಎಲ್ ಪಂದ್ಯಗಳ ಟಿಕೆಟ್ ಸಿಗುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಮಧ್ಯಸ್ಥಿಕೆ ವಹಿಸಿದ ಡಿಸಿಎಂ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾದರು.

ಈ ಮೊದಲು ‘ಒನ್ ಪ್ಲಸ್ ಒನ್’ ಆಧಾರದ ಮೇಲೆ ಪ್ರತಿ ಶಾಸಕರಿಗೆ ಎರಡು ಟಿಕೆಟ್ ನೀಡುವ ವ್ಯವಸ್ಥೆ ಇತ್ತು. ಆದರೆ ಇಂದಿನ ಚರ್ಚೆಯ ಬಳಿಕ ಮತ್ತೊಂದು ಟಿಕೆಟ್ ಹೆಚ್ಚಳ ಮಾಡಲಾಗಿದ್ದು, ಅಂತಿಮವಾಗಿ ಮೂರು ಟಿಕೆಟ್ ನೀಡಲು ಒಪ್ಪಿಗೆ ನೀಡಲಾಗಿದೆ.

ಅಂತರಾಷ್ಟ್ರೀಯ ಪಂದ್ಯಗಳಿಗೆ ಬೇರೆ ನಿಯಮ

ಸಭೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್,
“ಶಾಸಕರ ಬೇಡಿಕೆ ಕುರಿತು ಸ್ಪೀಕರ್ ಅವರೊಂದಿಗೂ ಚರ್ಚಿಸಿದ್ದೇನೆ. ಐಪಿಎಲ್ ಪಂದ್ಯಗಳಿಗೆ ಪ್ರತಿ ಶಾಸಕರಿಗೆ ಮೂರು ಟಿಕೆಟ್ ನೀಡಲು ಒಪ್ಪಂದವಾಗಿದೆ. ಆದರೆ ಅಂತರಾಷ್ಟ್ರೀಯ ಪಂದ್ಯಗಳ ಸಂದರ್ಭದಲ್ಲ ಮಾತ್ರ ಎರಡು ಟಿಕೆಟ್‌ಗಳನ್ನು ನೀಡಲಾಗುತ್ತದೆ,” ಎಂದು ಸ್ಪಷ್ಟಪಡಿಸಿದರು.

ಹೆಚ್ಚುವರಿ ಟಿಕೆಟ್ ಅಗತ್ಯವಿದ್ದಲ್ಲಿ ಶಾಸಕರು ಪ್ರತ್ಯೇಕವಾಗಿ ಮನವಿ ಮಾಡಿಕೊಳ್ಳಬಹುದು ಅಥವಾ ಹಣ ಪಾವತಿಸಿ ಖರೀದಿಸಬೇಕಾಗುತ್ತದೆ ಎಂದೂ ಅವರು ತಿಳಿಸಿದರು.

ಕ್ರೀಡಾಂಗಣ ವಿಸ್ತರಣೆಗೆ ಚಿಂತನೆ

ಬೆಂಗಳೂರು ನಗರದಲ್ಲಿ ಕ್ರಿಕೆಟ್‌ಪ್ರೇಮಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ, ಚಿನ್ನಸ್ವಾಮಿ ಕ್ರೀಡಾಂಗಣದ ಆಸನ ಸಾಮರ್ಥ್ಯವನ್ನು ಹೆಚ್ಚಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ. ಈ ಸಂಬಂಧ ಕೆಎಸ್‌ಸಿಎ ಈಗಾಗಲೇ ಪ್ರಾಥಮಿಕ ಯೋಜನೆ ರೂಪಿಸಿದ್ದು, ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲು ಸೂಚಿಸಲಾಗಿದೆ.

ಡಿಕೆಶಿಗೆ ಆರ್‌ಸಿಬಿ ಜರ್ಸಿ ಗೌರವ

ಸಭೆಯ ವೇಳೆ ಆರ್‌ಸಿಬಿ ತಂಡದ ಸಿಇಒ, ಡಿ.ಕೆ. ಶಿವಕುಮಾರ್ ಅವರಿಗೆ ತಂಡದ ಅಧಿಕೃತ ಜರ್ಸಿಯನ್ನು ಉಡುಗೊರೆಯಾಗಿ ನೀಡಿದರು. ಡಿಸಿಎಂ ಜರ್ಸಿ ಧರಿಸಿ ಫೋಟೋಗೆ ಪೋಸ್ ನೀಡುವ ಮೂಲಕ ತಂಡಕ್ಕೆ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಒಟ್ಟಾರೆ, ಶಾಸಕರಿಗೆ ಐಪಿಎಲ್ ಟಿಕೆಟ್ ಹಂಚಿಕೆ ವಿಷಯದಲ್ಲಿ ಉಂಟಾಗಿದ್ದ ಗೊಂದಲ ನಿವಾರಣೆಯಾಗಿದ್ದು, ಮುಂದಿನ ಪಂದ್ಯಗಳಿಗೆ ಸ್ಪಷ್ಟ ಮಾರ್ಗಸೂಚಿ ರೂಪುಗೊಂಡಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment