ಶಿವಮೊಗ್ಗ: ಬಸವ ಸಂಗಮ ವತಿಯಿಂದ ಆಯೋಜಿಸಲಾದ ಪ್ರತಿಷ್ಠಿತ “ಬಸವ ಕಪ್ – 2026” ಕ್ರಿಕೆಟ್ ಟ್ರೋಫಿ ಹಾಗೂ ಟಿ-ಶರ್ಟ್ ಅನಾವರಣ ಕಾರ್ಯಕ್ರಮವು ಇಂದು ಬೆಕ್ಕಿನಕಲ್ಮಠದಲ್ಲಿ ನೆರವೇರಿತು.
ಶಿಸ್ತು, ಒಗ್ಗಟ್ಟು ಮತ್ತು ಸಮಾಜಮುಖಿ ಚಿಂತನೆಗೆ ಕ್ರೀಡೆಯೇ ದಾರಿ: ಬೆಕ್ಕಿನಕಲ್ಮಠ ಶ್ರೀಗಳು
ಈ ಕಾರ್ಯಕ್ರಮವು ಬೆಕ್ಕಿನಕಲ್ಮಠದ ಪೂಜ್ಯ ಗುರುಗಳಾದ ಶ್ರೀ ಡಾ. ಮಲ್ಲಿಕಾರ್ಜುನ ಮುರುಗರಾಜೇಂದ್ರ ಮಹಾಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಜರುಗಿದ್ದು, ಅವರ ಆಶೀರ್ವಾದದಿಂದ ಕಾರ್ಯಕ್ರಮಕ್ಕೆ ವಿಶೇಷ ಅನುಗ್ರಹದ ಮೆರಗು ದೊರೆಯಿತು. ಯುವಜನತೆಯಲ್ಲಿ ಕ್ರೀಡಾ ಮನೋಭಾವ, ಶಿಸ್ತು, ಒಗ್ಗಟ್ಟು ಹಾಗೂ ಸಮಾಜಮುಖಿ ಚಿಂತನೆ ಬೆಳೆಸುವಲ್ಲಿ ಇಂತಹ ಕ್ರೀಡಾ ಚಟುವಟಿಕೆಗಳು ಮಹತ್ವಪೂರ್ಣ ಪಾತ್ರ ವಹಿಸುತ್ತವೆ ಎಂದು ಸ್ವಾಮೀಜಿಯವರು ಆಶೀರ್ವಚನ ನೀಡಿದರು.

ಕ್ರೀಡಾ ಶಿಸ್ತು, ನಾಯಕತ್ವ ಮತ್ತು ಒಗ್ಗಟ್ಟನ್ನು ಬೆಳೆಸುತ್ತದೆ: ಸಿ.ಎಸ್. ಷಡಾಕ್ಷರಿ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ “ಬಸವ ಕಪ್ – 2026” ಕ್ರೀಡಾಕೂಟದ ಟ್ರೋಫಿ ಹಾಗೂ ಅಧಿಕೃತ ಟಿ-ಶರ್ಟ್ಗಳನ್ನು ಅನಾವರಣಗೊಳಿಸಿದರು. ಕ್ರೀಡೆಗಳು ದೈಹಿಕ ಸದೃಢತೆ ಮಾತ್ರವಲ್ಲದೆ ನಾಯಕತ್ವ ಗುಣ, ಶಿಸ್ತು ಮತ್ತು ಒಗ್ಗಟ್ಟಿನ ಮನೋಭಾವ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಬಸವ ಸಂಗಮ ಸಂಸ್ಥೆಯು ಯುವಜನತೆಯಲ್ಲಿ ಕ್ರೀಡಾ ಸ್ಫೂರ್ತಿ ಮತ್ತು ಒಗ್ಗಟ್ಟನ್ನು ಬೆಳೆಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಈ ಕ್ರೀಡಾ ಸರಣಿ ಶ್ಲಾಘನೀಯವಾಗಿದೆ ಎಂದು ಸಮಾಜದ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜದ ಸದಸ್ಯರುಗಳಾದ ರೇಣುಕಾರಾಧ್ಯ, ಪಿ. ರುದ್ರೇಶ್, ಶ್ರೀಮತಿ ಅನಿತಾ ರವಿಶಂಕರ್, ಬಸವ ಸಂಗಮದ ಅಧ್ಯಕ್ಷರಾದ ಚೇತನ್ ದುಮಳ್ಳಿ, ಧ್ರುವ ಕುಮಾರ್,ಅವಿನಾಶ್ ಬಿದರೆ, ನವೀನ್ ವಾರದ್, ಗೀತಾರವೀಂದ್ರ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.











