ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

“ಮಹಿಳಾ ಮೀಸಲಾತಿ ಮಸೂದೆ ಹೆಸರಿನಲ್ಲಿ ರಾಜಕೀಯ: ಬಿಜೆಪಿಗೆ ಡಿಕೆಶಿ ತಿರುಗೇಟು”

On: April 19, 2026 2:55 PM
Follow Us:

ಬೆಂಗಳೂರು: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಹಿನ್ನಡೆಯಾದ ಹಿನ್ನೆಲೆ ರಾಜಕೀಯ ವಲಯದಲ್ಲಿ ಆರೋಪ–ಪ್ರತ್ಯಾರೋಪಗಳು ತೀವ್ರಗೊಂಡಿವೆ. ಈ ಕುರಿತು ಬಿಜೆಪಿ ಕಾಂಗ್ರೆಸ್ ವಿರುದ್ಧ ನಿರಂತರವಾಗಿ ಟೀಕೆಗಳನ್ನು ಮಾಡುತ್ತಿದ್ದರೆ, ಅದಕ್ಕೆ ತಿರುಗೇಟು ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು “ಮಹಿಳಾ ಮೀಸಲಾತಿ ಯಾರೊಬ್ಬರ ಸ್ವತ್ತು ಅಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳಾ ಮೀಸಲಾತಿ ವಿಚಾರದಲ್ಲಿ ಬಿಜೆಪಿ ತನ್ನ ನಿಜವಾದ ನಿಲುವು ಮರೆಮಾಚಲು ಯತ್ನಿಸುತ್ತಿದೆ ಎಂದು ಆರೋಪಿಸಿದರು. “ಮಹಿಳಾ ಮೀಸಲಾತಿಗೆ ನಿಜವಾದ ವಿರೋಧಿಗಳು ಬಿಜೆಪಿಯವರೇ. ಮಸೂದೆ ಪಾಸಾಗುವುದಿಲ್ಲ ಎಂಬುದು ಗೊತ್ತಿದ್ದರೂ ರಾಜಕೀಯ ಲಾಭಕ್ಕಾಗಿ ಅದನ್ನು ಮುಂದಿಟ್ಟಿದ್ದಾರೆ” ಎಂದು ಅವರು ಟೀಕಿಸಿದರು.

ಪ್ರಜಾಪ್ರಭುತ್ವದಲ್ಲಿ ಎಲ್ಲ ಪಕ್ಷಗಳೂ ಸಮಾನ ಪ್ರತಿನಿಧಿಗಳಾಗಿದ್ದು, ಪ್ರಮುಖ ಮಸೂದೆಗಳ ಕುರಿತು ಸಮಗ್ರ ಚರ್ಚೆ ನಡೆಸುವುದು ಅನಿವಾರ್ಯ ಎಂದು ಅವರು ಒತ್ತಿಹೇಳಿದರು. “ನಾವು ಲೋಕಸಭೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ರತಿನಿಧಿಗಳಿದ್ದೇವೆ. ಮಸೂದೆ ಕುರಿತು ನಮ್ಮೊಂದಿಗೆ ಚರ್ಚೆ ಮಾಡದೇ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವುದು ಪ್ರಜಾಪ್ರಭುತ್ವದ ಆತ್ಮಕ್ಕೆ ವಿರುದ್ಧ” ಎಂದು ಹೇಳಿದರು.

ಇದೇ ವೇಳೆ, ಮಹಿಳಾ ಮೀಸಲಾತಿ ಮಸೂದೆಯ ಹೆಸರಿನಲ್ಲಿ ಕ್ಷೇತ್ರ ಪುನರ್ವಿಂಗಡಣೆ (Delimitation) ವಿಷಯವನ್ನು ಸೇರಿಸಿರುವುದು ಅನುಚಿತ ಎಂದು ಅವರು ಆಕ್ಷೇಪಿಸಿದರು. “ಕ್ಷೇತ್ರ ಪುನರ್ವಿಂಗಡಣೆ ಮೂಲಕ ದಕ್ಷಿಣ ಭಾರತದ ಕ್ಷೇತ್ರಗಳ ಸಂಖ್ಯೆಯನ್ನು ಕಡಿಮೆ ಮಾಡುವ ಹಾಗೂ ಉತ್ತರ ಭಾರತದಲ್ಲಿ ಹೆಚ್ಚಿಸುವ ಯತ್ನ ನಡೆದಿದೆ. ಇದು ಸಮತೋಲನಕ್ಕೆ ಧಕ್ಕೆ ತರುವ ನಡೆ. ಈ ರೀತಿಯ ಕ್ರಮವನ್ನು ಯಾರೂ ಸಹಿಸಲು ಸಾಧ್ಯವಿಲ್ಲ” ಎಂದು ಕಿಡಿಕಾರಿದರು.

ಕಾಂಗ್ರೆಸ್ ನಾಯಕರು ಮತ್ತು ದಕ್ಷಿಣ ಭಾರತದ ಸಂಸದರು ಈ ವಿಷಯವಾಗಿ ತೀವ್ರ ವಿರೋಧ ವ್ಯಕ್ತಪಡಿಸಿರುವುದಾಗಿ ಅವರು ತಿಳಿಸಿದರು. “ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕರು ಪ್ರತಿಭಟನೆ ನಡೆಸಿದ್ದಾರೆ. ಮಸೂದೆ ಪಾಸಾಗದಿರುವುದು ಈ ಪ್ರತಿಭಟನೆಗೆ ದೊರೆತ ದೊಡ್ಡ ಜಯ” ಎಂದು ಹೇಳಿದರು.

ಮಹಿಳಾ ಸಬಲೀಕರಣದ ವಿಷಯದಲ್ಲಿ ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟ ಸದಾ ಮಹಿಳಾ ಪರ ನಿಂತಿದೆ ಎಂದು ಪುನರುಚ್ಚರಿಸಿದ ಅವರು, “ನಾವು ಮಹಿಳೆಯರನ್ನು ಅವಮಾನಿಸುವ ರಾಜಕೀಯ ಮಾಡುವುದಿಲ್ಲ. ಮಹಿಳೆಯರಿಗೆ ನ್ಯಾಯ ಸಿಗಬೇಕು ಎಂಬುದೇ ನಮ್ಮ ಧ್ಯೇಯ” ಎಂದು ಹೇಳಿದರು.

ಮಹಿಳಾ ಮೀಸಲಾತಿ ಮಸೂದೆ ವಿಚಾರವು ಕೇವಲ ಕಾನೂನು ಚರ್ಚೆಯಷ್ಟೇ ಅಲ್ಲ, ಪ್ರಾದೇಶಿಕ ಸಮತೋಲನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನೂ ಒಳಗೊಂಡ ಮಹತ್ವದ ರಾಜಕೀಯ ವಿಷಯವಾಗಿ ಮುಂದುವರಿದಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment