ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

“ಕಷ್ಟಗಳು ಜೀವನದಲ್ಲಿ ಪಾಠ ಕಲಿಸಿದರೆ, ನಂಬಿಕೆ ಮನುಷ್ಯನಿಗೆ ಶಕ್ತಿ ತುಂಬುತ್ತದೆ” : ಶ್ರೀ ರಂಭಾಪುರಿ ಜಗದ್ಗುರುಗಳು

On: March 26, 2026 9:24 PM
Follow Us:

ರಾಣೆಬೆನ್ನೂರು: ಮಾನವನ ಜೀವನದಲ್ಲಿ ಸುಖ–ದುಃಖಗಳು ಅವಿಭಾಜ್ಯ ಅಂಗಗಳು. ಜೀವನವನ್ನು ಸುಂದರವಾಗಿ ಕಟ್ಟಿಕೊಳ್ಳಲು ಕಷ್ಟಗಳ ಅನುಭವವೂ ಅಗತ್ಯ, ಅದೇ ಸಮಯದಲ್ಲಿ ನಂಬಿಕೆ ಮತ್ತು ಧೈರ್ಯವೂ ಸಮಾನವಾಗಿ ಮುಖ್ಯ. “ಕಷ್ಟಗಳು ಜೀವನದಲ್ಲಿ ಪಾಠ ಕಲಿಸಿದರೆ, ನಂಬಿಕೆ ಮನುಷ್ಯನಲ್ಲಿ ಶಕ್ತಿ ತುಂಬುತ್ತದೆ” ಎಂದು ಶ್ರೀ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಅವರು ತಾಲ್ಲೂಕಿನ ಲಿಂಗದಹಳ್ಳಿ ಕ್ಷೇತ್ರದಲ್ಲಿ ನಡೆದ ಡಾ. ವೀರಭದ್ರ ಶಿವಾಚಾರ್ಯ ಸ್ವಾಮಿಗಳ ಷಷ್ಠ್ಯಬ್ದಿ ಅಂಗವಾಗಿ ಆಯೋಜಿಸಿದ್ದ ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮ ಜಾಗೃತಿ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಜೀವನದಲ್ಲಿ ಸ್ನೇಹವನ್ನು ಬೆಳೆಸಬೇಕು, ಶತ್ರುತ್ವವನ್ನು ತೊಡೆದುಹಾಕಬೇಕು, ಸಂತೋಷವನ್ನು ಹಂಚಿಕೊಳ್ಳಬೇಕು ಹಾಗೂ ದುಃಖವನ್ನು ಸಹಿಸಿಕೊಂಡು ಮುಂದೆ ಸಾಗಬೇಕು. ಇವುಗಳೆಲ್ಲವೂ ಜೀವನದ ಸಮತೋಲನಕ್ಕಾಗಿ ಅಗತ್ಯವಾದ ಮೌಲ್ಯಗಳಾಗಿವೆ ಎಂದು ಅವರು ತಿಳಿಸಿದರು.

ವೀರಶೈವ ಧರ್ಮದ ಮಹತ್ವವನ್ನು ವಿವರಿಸಿದ ಅವರು, “ವೀರಶೈವ ಧರ್ಮವು ಒಂದು ವೃಕ್ಷದಂತೆ. ಅದರ ಬೇರು ಪಂಚಾಚಾರ್ಯರು ಆಗಿದ್ದರೆ, ಅದರ ಫಲ–ಹಣ್ಣು ಬಸವಣ್ಣ ಹಾಗೂ ಶರಣರ ಚಿಂತನೆಗಳು. ಇವುಗಳ ಸಮನ್ವಯದಿಂದ ಸಮಾಜದಲ್ಲಿ ಸದ್ಭಾವನೆ ಬೆಳೆಯುತ್ತದೆ” ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು, “ಪ್ರಯತ್ನವು ಯಶಸ್ಸಿನ ಮೂಲ. ಸಣ್ಣ ಪದವಾದರೂ ಅದರ ಫಲ ಅಪಾರ. ಜೀವನದಲ್ಲಿ ಸಾಧನೆ ಮಾಡಲು ಶ್ರಮ ಹಾಗೂ ದೃಢಸಂಕಲ್ಪ ಅಗತ್ಯ” ಎಂದು ಹೇಳಿದರು. ವೀರಶೈವ ಧರ್ಮದ ತತ್ವಗಳು ಮಾನವೀಯ ಮೌಲ್ಯಗಳನ್ನು ಬಲಪಡಿಸುತ್ತವೆ ಎಂದರು.

ಇನ್ನೂ ಶ್ರೀಶೈಲದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಜಗದ್ಗುರುಗಳು ಮಾತನಾಡಿ, “ಸತ್ಯದ ಮಾತುಗಳು ಕೆಲವೊಮ್ಮೆ ಕಠಿಣವಾಗಿರಬಹುದು, ಆದರೆ ಅವು ಬದುಕಿಗೆ ದಾರಿದೀಪವಾಗುತ್ತವೆ. ಬಾಲ್ಯದಲ್ಲಿ ಜ್ಞಾನ, ಯೌವನದಲ್ಲಿ ಸಂಪತ್ತು ಮತ್ತು ವೃದ್ಧಾಪ್ಯದಲ್ಲಿ ಆತ್ಮಚಿಂತನೆ ಜೀವನವನ್ನು ಸಮೃದ್ಧಗೊಳಿಸುತ್ತದೆ” ಎಂದು ಅಭಿಪ್ರಾಯಪಟ್ಟರು.

ಕಾಶಿ ಪೀಠದ ಡಾ. ಚಂದ್ರಶೇಖರ ಜಗದ್ಗುರುಗಳು, “ಮಾನವನ ಬದುಕಿಗೆ ನೀರು, ಅನ್ನ, ಗಾಳಿ ಅಗತ್ಯವಾದಂತೆ ಧರ್ಮ ಮತ್ತು ಮೌಲ್ಯಗಳು ಅತ್ಯಗತ್ಯ. ನಾವು ಮಾಡಿದ ಉಪಕಾರವನ್ನು ಮರೆತು, ಇತರರ ತಪ್ಪುಗಳನ್ನು ಕ್ಷಮಿಸಿದಾಗ ಮಾತ್ರ ಸಂಬಂಧಗಳು ಬಲವಾಗುತ್ತವೆ” ಎಂದರು.

ಕಾಶಿ ನೂತನ ಪೀಠದ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಜಗದ್ಗುರುಗಳು, “ಧರ್ಮದ ಶಕ್ತಿ ಅಪಾರ. ಅದನ್ನು ಅಜ್ಞಾನದಿಂದ ತಪ್ಪಾಗಿ ಬಳಸಬಾರದು. ಶಿಕ್ಷಣವು ಬುದ್ಧಿಗೆ ಬೆಳಕು ನೀಡಿದರೆ, ಧರ್ಮವು ಮನಸ್ಸಿಗೆ ಶಾಂತಿ ನೀಡುತ್ತದೆ” ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಲಿಂಗದಹಳ್ಳಿ ಹಿರೇಮಠದ ಡಾ. ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, “ನದಿಯಲ್ಲಿ ನೀರು ತುಂಬಿದರೂ ಅದು ಸದಾ ಹರಿಯುತ್ತಲೇ ಇರುತ್ತದೆ. ಅದೇ ರೀತಿ ಧರ್ಮದ ಅರಿವು ನಿರಂತರವಾಗಿರಬೇಕು. ಮಹಾತ್ಮರು ತಮ್ಮ ಜೀವನದ ಮೂಲಕ ಸಮಾಜಕ್ಕೆ ದಾರಿ ತೋರಿಸಿದ್ದಾರೆ” ಎಂದರು.

ಕಾರ್ಯಕ್ರಮಕ್ಕೂ ಮುನ್ನ ಗ್ರಾಮದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯರ ಅಡ್ಡಪಲ್ಲಕ್ಕಿ ಮಹೋತ್ಸವ ಭವ್ಯವಾಗಿ ನಡೆಯಿತು. ಭಾಗವಹಿಸಿದ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಹಲವು ಮಠಾಧೀಶರು, ಗಣ್ಯರು ಹಾಗೂ ಭಕ್ತರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

K.M.Sathish Gowda

Join WhatsApp

Join Now

Facebook

Join Now

Leave a Comment