ಶಿವಮೊಗ್ಗ: ಒಂದು ಸಹಕಾರ ಸಂಸ್ಥೆಯು ಶತಮಾನದ ಕಾಲ ಯಶಸ್ವಿಯಾಗಿ ಮುನ್ನಡೆಯಬೇಕಾದರೆ ಸಾರ್ವಜನಿಕರ ಅಚಲವಾದ ವಿಶ್ವಾಸ ಮತ್ತು ಸಮರ್ಪಕವಾದ ಸೇವೆಯೇ ಪ್ರಮುಖ ಕಾರಣ. ಶ್ರೀ ಬಸವೇಶ್ವರ ಪಟ್ಟಣ ಪತ್ತಿನ ಸಹಕಾರ ಸಂಘವು ಜನರ ನಂಬಿಕೆಯನ್ನು ಉಳಿಸಿಕೊಂಡು, ನೂರು ವರ್ಷಗಳ ಸುದೀರ್ಘ ಸೇವೆಯನ್ನು ಪೂರೈಸಿ ಮುನ್ನಡೆಯುತ್ತಿರುವುದು ಇಡೀ ಸಮಾಜಕ್ಕೆ ಹೆಮ್ಮೆಯ ಸಂಗತಿಯಾಗಿದೆ, ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ ಅವರು ತಿಳಿಸಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಶ್ರೀ ಬಸವೇಶ್ವರ ಪಟ್ಟಣ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಂಭ್ರಮ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

₹1,100 ರಿಂದ ಕೋಟ್ಯಂತರ ರೂಪಾಯಿ ವಹಿವಾಟಿನತ್ತ ಐತಿಹಾಸಿಕ ಪಯಣ
ಸಂಸ್ಥೆಯ ಇತಿಹಾಸ ಮತ್ತು ಆರ್ಥಿಕ ಪ್ರಗತಿಯನ್ನು ಶ್ಲಾಘಿಸಿದ ಅವರು, “ಆರಂಭದ ದಿನಗಳಲ್ಲಿ ದಿವಂಗತ ಮಹಾಲಿಂಗಯ್ಯನವರು ಕೇವಲ 45 ರಿಂದ 50 ಜನರನ್ನು ಒಟ್ಟುಗೂಡಿಸಿ, ಬರಿಯ ರೂ.1,100 ರ ಶೇರು ಮೊತ್ತದೊಂದಿಗೆ ಈ ಸಂಸ್ಥೆಗೆ ಭದ್ರವಾದ ಅಡಿಪಾಯ ಹಾಕಿದ್ದರು. ಆದರೆ ಇಂದು ಆ ಪುಟ್ಟ ಸಸಿ ಹೆಮ್ಮರವಾಗಿ ಬೆಳೆದು ನಿಂತಿದೆ. ಪ್ರಸ್ತುತ ಸಂಸ್ಥೆಯು ರೂ.12 ರಿಂದ ರೂ.15 ಕೋಟಿಯಷ್ಟು ಸ್ಥಿರ ಠೇವಣಿ (ಎಫ್.ಡಿ) ಹೊಂದುವ ಮೂಲಕ ಅತ್ಯಂತ ಸದೃಢವಾಗಿ ಬೆಳೆದಿದೆ. ಪ್ರತಿ ವರ್ಷ ರೂ.50 ಲಕ್ಷದಿಂದ ರೂ.70 ಲಕ್ಷದವರೆಗೆ ಆದಾಯ ಗಳಿಸುವ ಮಟ್ಟಿಗೆ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಈ ಪ್ರಗತಿಯ ಹಿಂದೆ ನೂರು ವರ್ಷಗಳ ಇತಿಹಾಸದಲ್ಲಿ ಸೇವೆ ಸಲ್ಲಿಸಿದ ಪೂರ್ವಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳು ಹಾಗೂ ನಿರ್ದೇಶಕರುಗಳ ನಿಸ್ವಾರ್ಥ ಶ್ರಮ.
ಆರ್ಥಿಕ ನಿರ್ವಹಣೆಯ ಸವಾಲುಗಳು
ಇಂದಿನ ಬ್ಯಾಂಕಿಂಗ್ ಮತ್ತು ಸಹಕಾರ ಕ್ಷೇತ್ರದಲ್ಲಿರುವ ಸವಾಲುಗಳ ಕುರಿತು ಮಾತನಾಡುತ್ತಾ, ಪ್ರಸ್ತುತ ದಿನಗಳಲ್ಲಿ ಸಾಲ ನೀಡುವುದು ಹಾಗೂ ನೀಡಿದ ಸಾಲವನ್ನು ಸಮರ್ಪಕವಾಗಿ ವಸೂಲಿ (ರಿಕವರಿ) ಮಾಡುವುದು ಅತ್ಯಂತ ಕಠಿಣವಾದ ಜವಾಬ್ದಾರಿಯಾಗಿದೆ. ಇಂತಹ ಕಠಿಣ ಪರಿಸ್ಥಿತಿಗಳ ನಡುವೆಯೂ ಸಂಸ್ಥೆಯು ಎಲ್ಲೂ ದಿವಾಳಿಯಾಗದೆ, ನಿರಂತರವಾಗಿ ಏಳಿಗೆಯನ್ನು ಕಾಣುತ್ತಾ, ಲಾಭದಾಯಕ ಸಂಸ್ಥೆಯಾಗಿ ಮುನ್ನಡೆಯುತ್ತಿರುವುದು ಆಡಳಿತ ಮಂಡಳಿಯ ದಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ, ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕದ ಸಂಸ್ಥೆಗಳ ಪೈಪೋಟಿ ಎದುರಿಸಲು ಸದಸ್ಯತ್ವ ವಿಸ್ತರಿಸಿ: ಶಿವಮೊಗ್ಗದಲ್ಲಿ ಸಿ.ಎಸ್.ಷಡಾಕ್ಷರಿ ಕರೆ
ಸಮುದಾಯದ ಬಾಂಧವರು ಸಂಸ್ಥೆಯೊಂದಿಗೆ ಕೈಜೋಡಿಸಬೇಕಾದ ಅಗತ್ಯವನ್ನು ಪ್ರತಿಪಾದಿಸಿದ ಅವರು, ಶಿವಮೊಗ್ಗ ನಗರ ಹಾಗೂ ಸುತ್ತಮುತ್ತಲ ಭಾಗಗಳಲ್ಲಿ ನಮ್ಮ ಸಮುದಾಯದ ಜನಸಂಖ್ಯೆ ಸುಮಾರು 35 ರಿಂದ 40 ಸಾವಿರದಷ್ಟಿದೆ. ಆದರೆ, ಪ್ರಸ್ತುತ ಬ್ಯಾಂಕಿನಲ್ಲಿ ಕೇವಲ 5,500 ಜನ ಮಾತ್ರ ಶೇರುದಾರರಾಗಿದ್ದಾರೆ. ನಾವು ಯೋಚಿಸುವುದನ್ನು ಬಿಡಬೇಕು. ಇಂದು ಉತ್ತರ ಕರ್ನಾಟಕ ಭಾಗದ ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಸುವ ದೊಡ್ಡ ದೊಡ್ಡ ಸಹಕಾರ ಸಂಸ್ಥೆಗಳು ಶಿವಮೊಗ್ಗ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ನಾವು ಜಾಗೃತರಾಗದಿದ್ದರೆ ನಮ್ಮ ಮೇಲೆ ಇತರರ ಪ್ರಭಾವ ಹೆಚ್ಚಾಗುತ್ತದೆ.
ಶಿವಮೊಗ್ಗದಲ್ಲಿರುವ ನಮ್ಮವರೇ ಆದ 25 ರಿಂದ 30 ಸಾವಿರ ನಾಗರಿಕರು ಈ ಸಂಸ್ಥೆಯ ಶೇರುದಾರರಾಗಿ ಕೈಜೋಡಿಸಿದರೆ, ಈ ಸಂಸ್ಥೆಯನ್ನು ಕೇವಲ ನಗರಕ್ಕೆ ಸೀಮಿತಗೊಳಿಸದೆ ತಾಲೂಕು ಹಾಗೂ ರಾಜ್ಯ ಮಟ್ಟಕ್ಕೆ ವಿಸ್ತರಿಸಲು ಸಾಧ್ಯವಾಗುತ್ತದೆ. ಪ್ರಸ್ತುತ ಆಡಳಿತ ಮಂಡಳಿಯು ಈ ನಿಟ್ಟಿನಲ್ಲಿ ಮಹತ್ವದ ಗಮನ ಹರಿಸಬೇಕು, ಎಂದು ಕರೆ ನೀಡಿದರು.

ಅಧ್ಯಕ್ಷ ಬಳ್ಳೇಕೆರೆ ಸಂತೋಷ್ ಅವರ ಸಾರಥ್ಯಕ್ಕೆ ಶ್ಲಾಘನೆ
ಸಂಸ್ಥೆಯ ಪ್ರಸ್ತುತ ಅಧ್ಯಕ್ಷರಾದ ಬಳ್ಳೇಕೆರೆ ಸಂತೋಷ್ ಅವರ ನಾಯಕತ್ವವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಸಿ.ಎಸ್.ಷಡಾಕ್ಷರಿ ಅವರು, 100 ವರ್ಷಗಳ ಸುದೀರ್ಘ ಇತಿಹಾಸವಿರುವ ಸಂಸ್ಥೆಯೊಂದರ ಶತಮಾನೋತ್ಸವದ ಸಂದರ್ಭದಲ್ಲಿ ಅಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸುವುದು ಸಾಮಾನ್ಯ ಸುಲಭವಲ್ಲ. ಇದು ಆರ್ಥಿಕ ಸವಾಲುಗಳು ಹಾಗೂ ಸಾಂಘಿಕ ಜವಾಬ್ದಾರಿಗಳಿಂದ ಕೂಡಿದ ಕೆಲಸವಾಗಿರುತ್ತದೆ.
ಬಳ್ಳೇಕೆರೆ ಸಂತೋಷ್ ಅವರು ಹಿರಿಯರ ಮಾರ್ಗದರ್ಶನ ಮತ್ತು ಯುವಶಕ್ತಿಯನ್ನು ಜೊತೆಗೂಡಿಸಿಕೊಂಡು ಅತ್ಯಂತ ಸಮರ್ಥವಾಗಿ ಆರ್ಥಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸಿ, ಶೇರುದಾರರಿಗೆ ನ್ಯಾಯ ಒದಗಿಸುವ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಇಂತಹ ಯುವ ನಾಯಕತ್ವ ಸಂಸ್ಥೆಗೆ ದೊರಕ್ಕಿರುವುದು ಸಂತಸದ ವಿಚಾರ ಎಂದರು.

ಬಿ.ಎಸ್.ಯಡಿಯೂರಪ್ಪ – ಬಿ.ವೈ.ರಾಘವೇಂದ್ರ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯ ಮತ್ತಷ್ಟು ಬೆಳವಣಿಗೆಗೆ ಹಾರೈಕೆ
ಈ ಜಿಲ್ಲೆಯವರೇ ಆದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಮಾಜ ಹಾಗೂ ಸಂಸ್ಥೆಗೆ ಅಪಾರವಾದ ಕೊಡುಗೆಗಳನ್ನು ನೀಡಿದ್ದಾರೆ. ಈ ಐತಿಹಾಸಿಕ ಶತಮಾನೋತ್ಸವ ಸಮಾರಂಭವನ್ನು ಅವರೇ ಉದ್ಘಾಟಿಸಿರುವುದು ಸಂಸ್ಥೆಯ ಚರಿತ್ರೆಯಲ್ಲಿ ಮೈಲಿಗಲ್ಲಾಗಿ ಉಳಿಯಲಿದೆ. ಅವರ ಹೆಸರು ಸಂಸ್ಥೆಯ ಇತಿಹಾಸದಲ್ಲಿ ಚಿರಸ್ಥಾಯಿಯಾಗಿರಲಿದೆ. ಅದರೊಂದಿಗೆ ಸಂಸದ ಬಿ.ವೈ. ರಾಘವೇಂದ್ರ ಅವರು ಕೂಡ ಸಂಸ್ಥೆಯ ಏಳಿಗೆಗೆ ನಿರಂತರವಾಗಿ ಸಲಹೆ ಮತ್ತು ಸಹಕಾರಗಳನ್ನು ನೀಡುತ್ತಾ ಬಂದಿದ್ದಾರೆ. ಮುಂಬರುವ ದಿನಗಳಲ್ಲಿ ಇವರಿಬ್ಬರ ಮಾರ್ಗದರ್ಶನದಲ್ಲಿ ಶೇರುದಾರರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿ ಮತ್ತು ಸಂಸ್ಥೆಯು ಸಮಾಜಮುಖಿ ಕೆಲಸಗಳನ್ನು ಮುಂದುವರೆಸಲಿ, ಎಂದು ಹಾರೈಸಿದರು.
ನಾಳೆ ನಡೆಯುವ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಡಿಯೂರಪ್ಪನವರ ಸೇವೆಗೆ ಗೌರವ ಸಲ್ಲಿಸೋಣ
ಸಿ.ಎಸ್. ಷಡಾಕ್ಷರಿ ಅವರು, ನಮ್ಮ ಹೆಮ್ಮೆಯ ಜಿಲ್ಲೆಯ ನಾಯಕರಾದ, ವೀರಶೈವ ಲಿಂಗಾಯತ ಸಮಾಜಕ್ಕೆ ರಾಜಕೀಯ ಘನತೆ ಹಾಗೂ ಗೌರವವನ್ನು ತಂದುಕೊಟ್ಟ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಚುನಾವಣಾ ರಾಜಕಾರಣದಲ್ಲಿ ಯಶಸ್ವಿಯಾಗಿ 50 ವರ್ಷಗಳನ್ನು ಪೂರೈಸಿ, ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಇಂತಹ ಧೀಮಂತ ನಾಯಕರ ಜನಪರ ಸೇವೆಯನ್ನು ಗುರುತಿಸಿ ಪಂಚಪೀಠಾಧೀಶರ ದಿವ್ಯ ಸಮ್ಮುಖದಲ್ಲಿ ಸಮಾಜದ ಪರವಾಗಿ ಹಮ್ಮಿಕೊಂಡಿರುವ ಈ ಬೃಹತ್ ಕೃತಜ್ಞತಾ ಹಾಗೂ ಗೌರವ ಸಮರ್ಪಣಾ ಸಮಾರಂಭ ಅತ್ಯಂತ ಶ್ಲಾಘನೀಯವಾಗಿದ್ದು, ಸಮಾಜದ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗೌರವ ಸಲ್ಲಿಸೋಣ ಎಂದು ಮನವಿ ಮಾಡಿದರು,
ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಆಡಳಿತ ಮಂಡಳಿ, ನಿರ್ದೇಶಕರು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ದಾನಿಗಳು ಮತ್ತು ಸಾರ್ವಜನಿಕರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕರು, ಪದಾಧಿಕಾರಿಗಳು ಹಾಗೂ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.






