ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಬುಳ್ಳಾಪುರ, ಬೇಡರಹೊಸಹಳ್ಳಿಯಲ್ಲಿ ನೆಲಕಚ್ಚಿದ ನೂರಾರು ಎಕರೆ ಅಡಿಕೆ ತೋಟಗಳು: ನೊಂದ ರೈತರಿಗೆ ತಕ್ಷಣ ವಿಶೇಷ ಪರಿಹಾರ ನೀಡಬೇಕು — ದಿನೇಶ್ ಬುಳ್ಳಾಪುರ ಆಗ್ರಹ

On: May 18, 2026 2:18 PM
Follow Us:

ಶಿವಮೊಗ್ಗ ಜಿಲ್ಲೆಯಾದ್ಯಂತ ಭೀಕರ ಮಳೆ-ಗಾಳಿಯ ಆರ್ಭಟ: ಬುಳ್ಳಾಪುರ, ಬೇಡರಹೊಸಹಳ್ಳಿಯಲ್ಲಿ ನೆಲಕಚ್ಚಿದ ಅಡಿಕೆ, ತೆಂಗಿನ ತೋಟಗಳು – ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ರೈತರು!

ಶಿವಮೊಗ್ಗ: “ಅತಿಯಾದ್ರೆ ಅತಿವೃಷ್ಟಿ, ಇಲ್ಲದಿದ್ರೆ ಅನಾವೃಷ್ಟಿ… ಪ್ರಕೃತಿಯ ಈ ಜೂಜಾಟದ ನಡುವೆ ಸಿಲುಕಿ ಪ್ರತಿವರ್ಷ ನಲುಗುವುದು ರೈತ ಮಾತ್ರ. ಹತ್ತಾರು ವರ್ಷಗಳ ಕಾಲ ಸ್ವಂತ ಮಕ್ಕಳಂತೆ ಸಾಕಿ ಸಲಹಿದ್ದ ಅಡಿಕೆ, ತೆಂಗಿನ ಮರಗಳು ಕಣ್ಣೆದುರೇ ನೆಲೆಕ್ಕೆ ಉರುಳುತ್ತಿದ್ದರೆ, ರೈತನ ಎದೆ ಸೀಳಿದಂತಾಗುತ್ತಿದೆ. ಮುಂದಿನ ಭವಿಷ್ಯವೇ ಕತ್ತಲಾಗಿರುವಾಗ, ಕೇವಲ ಬಿಡಿಗಾಸಿನ ಪರಿಹಾರದ ಭಿಕ್ಷೆ ನೀಡಿ ಕೈತೊಳೆದುಕೊಳ್ಳುವ ಸರ್ಕಾರದ ಬೇಜವಾಬ್ದಾರಿತನ ಇನ್ನು ನಡೆಯುವುದಿಲ್ಲ!” ಹೀಗೆಂದು ಆಕ್ರೋಶ ಹೊರಹಾಕಿದ್ದು ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕರಾದ ದಿನೇಶ್ ಬುಳ್ಳಾಪುರ.

ಮೇ 17ರ ಭಾನುವಾರ ಸಂಜೆ ಶಿವಮೊಗ್ಗ ತಾಲ್ಲೂಕಿನ ಬುಳ್ಳಾಪುರ, ಬೇಡರಹೊಸಹಳ್ಳಿ ಹಾಗೂ ಸೂಗೂರು ಭಾಗದಲ್ಲಿ ಬೀಸಿದ ಭೀಕರ ಗಾಳಿ ಮತ್ತು ಅಕಾಲಿಕ ಮಳೆಯು ಈ ಭಾಗದ ತೋಟಗಾರಿಕಾ ರೈತರ ಬದುಕನ್ನೇ ಬೀದಿಗೆ ತಂದಿದೆ. ನೂರಾರು ಎಕರೆ ಪ್ರದೇಶದಲ್ಲಿದ್ದ ಹಚ್ಚಹಸಿರಿನ ಅಡಿಕೆ, ತೆಂಗು ಮತ್ತು ಬಾಳೆ ತೋಟಗಳು ಕೇವಲ ಒಂದು ಗಂಟೆಯ ಮಳೆ-ಗಾಳಿಗೆ ಬುಡಸಮೇತ ಕಿತ್ತುಬಂದಿವೆ. ಭೀಕರ ದೃಶ್ಯ ಕಂಡು ಇಡೀ ಗ್ರಾಮಗಳೇ ಕಣ್ಣೀರಿನಲ್ಲಿ ಮುಳುಗಿವೆ.

​ಒಂದು ಅಡಿಕೆ ಅಥವಾ ತೆಂಗಿನ ಸಸಿ ನೆಟ್ಟು, ಅದು ಫಲ ನೀಡುವ ಹಂತಕ್ಕೆ ಬರಬೇಕಾದರೆ ರೈತ ಕನಿಷ್ಠ 10 ರಿಂದ 15 ವರ್ಷಗಳ ಕಾಲ ಹಗಲಿರುಳು ಬೆವರು ಸುರಿಸಬೇಕು. ಈ ಭಾಗದಲ್ಲಿ ನೆಲಕಚ್ಚಿರುವ ಬಹುತೇಕ ತೆಂಗಿನ ಮರಗಳು 25 ರಿಂದ 50 ವರ್ಷ ಹಳೆಯದಾದವು. ತಲೆಮಾರುಗಳಿಂದ ಇಡೀ ಕುಟುಂಬಕ್ಕೆ ಆಸರೆಯಾಗಿದ್ದ ಈ ಕಲ್ಪವೃಕ್ಷಗಳು ಇಂದು ಮಣ್ಣು ಪಾಲಾಗಿವೆ.

​ಸ್ಥಳೀಯ ರೈತ ಆನಂದ್ ಕುಮಾರ್ ಅವರ ಮೂರು ಎಕರೆ ತೋಟದಲ್ಲಿದ್ದ 200 ಕ್ಕೂ ಹೆಚ್ಚು ಅಡಿಕೆ ಮರಗಳು ನೆಲಸಮವಾಗಿವೆ. ಇದು ಕೇವಲ ಒಬ್ಬಿಬ್ಬರ ಕಥೆಯಲ್ಲ, ಬುಳ್ಳಾಪುರ ಭಾಗದ ಪ್ರತಿಯೊಬ್ಬ ರೈತನ ಇಂದಿನ ಕಣ್ಣೀರ ಕಥೆ. ತೋಟಗಳಷ್ಟೇ ಅಲ್ಲದೆ, ಭಾರಿ ಗಾಳಿಯ ತೀವ್ರತೆಗೆ ಮನೆಗಳ ಮೇಲಿದ್ದ ಹೆಂಚು ಮತ್ತು ಶೀಟುಗಳು ಅರ್ಧ ಕಿಲೋಮೀಟರ್ ದೂರಕ್ಕೆ ಹಾರಿಹೋಗಿವೆ. ಒಟ್ಟಾರೆ ಬದುಕೇ ಕಷ್ಟಕರವಾಗಿದ್ದು, ಮುಂದಿನ ದಿನಗಳಲ್ಲಿ ಸಂಸಾರ ನಡೆಸುವುದು ಹೇಗೆ, ಸಾಲ ತೀರಿಸುವುದು ಹೇಗೆ ಎಂಬ ಚಿಂತೆ ರೈತರನ್ನು ಕಾಡುತ್ತಿದೆ.

ಬಾಧಿತ ಪ್ರದೇಶಗಳಿಗೆ ತಕ್ಷಣವೇ ಭೇಟಿ ನೀಡಿ, ನೊಂದ ರೈತರಿಗೆ ವೈಯಕ್ತಿಕವಾಗಿ ಧೈರ್ಯ ತುಂಬಿದ ಹೆಚ್.ಬಿ. ದಿನೇಶ್ ಬುಳ್ಳಾಪುರ ಅವರು, ಸರ್ಕಾರ ಮತ್ತು ಕಂದಾಯ ಇಲಾಖೆಯ ಉದಾಸೀನತೆಯ ವಿರುದ್ಧ ತೀವ್ರವಾಗಿ ಛಾಟಿ ಬೀಸಿದರು.

​”ರೈತರು ಕಷ್ಟದಲ್ಲಿದ್ದಾಗ ತಕ್ಷಣಕ್ಕೆ ಧಾವಿಸದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಮಗೆ ಬೇಕಾಗಿಲ್ಲ. ಕಚೇರಿಯ ಎಸಿ ರೂಮುಗಳಲ್ಲಿ ಕುಳಿತು ವರದಿ ಸಿದ್ಧಪಡಿಸುವ ಸಂಸ್ಕೃತಿಯನ್ನು ಬಿಟ್ಟು, ತಹಶೀಲ್ದಾರರು, ಜನಪ್ರತಿನಿಧಿಗಳು ತಕ್ಷಣವೇ ತೋಟಗಳಿಗೆ ಬಂದು ಜಂಟಿ ಸಮೀಕ್ಷೆ ನಡೆಸಬೇಕು. ರೈತರ ತಾಳ್ಮೆಯನ್ನು ಪರೀಕ್ಷಿಸಬೇಡಿ!” ಎಂದು ದಿನೇಶ್ ಎಚ್ಚರಿಸಿದ್ದಾರೆ.

​ಅವರು ಸರ್ಕಾರದ ಮುಂದೆ ಪ್ರಮುಖವಾಗಿ ಮೂರು ತುರ್ತು ಬೇಡಿಕೆಗಳನ್ನು ಮಂಡಿಸಿದ್ದಾರೆ:

  • ಬಿಡಿಗಾಸಿನ ಪರಿಹಾರಕ್ಕೆ ಧಿಕ್ಕಾರ: “ಪ್ರಕೃತಿ ವಿಕೋಪದ ನಿಯಮಾವಳಿಗಳ ಹೆಸರಿನಲ್ಲಿ ಹೆಕ್ಟೇರ್‌ಗೆ ಇಂತಿಷ್ಟು ಎಂದು ಕೊಡುವ ಅಲ್ಪ ಮೊತ್ತದಿಂದ ತೋಟಗಳನ್ನು ಮರುನಿರ್ಮಾಣ ಮಾಡಲು ಸಾಧ್ಯವೇ ಇಲ್ಲ. ಸರ್ಕಾರ ನೀಡುವ ಹಳೆಯ ಮಾದರಿಯ ಪರಿಹಾರ ರೈತರ ಗಾಯದ ಮೇಲೆ ಉಪ್ಪು ಸವರಿದಂತೆ.”
  • ಪ್ರತಿ ಅಡಿಕೆ ಮರಕ್ಕೆ ₹5,000 ಮತ್ತು ತೆಂಗಿಗೆ ₹25,000: “ನಾಶವಾಗಿರುವ ಪ್ರತಿ ಅಡಿಕೆ ಮರಕ್ಕೆ ಕನಿಷ್ಠ 5,000 ರೂ. ಹಾಗೂ ದಶಕಗಳ ಕಾಲ ಫಲ ನೀಡುತ್ತಿದ್ದ ಪ್ರತಿ ತೆಂಗಿನ ಮರಕ್ಕೆ ಕನಿಷ್ಠ 25,000 ರೂ. ವಿಶೇಷ ಪರಿಹಾರ ಘೋಷಿಸಬೇಕು. ಆಗ ಮಾತ್ರ ರೈತ ಹೊಸದಾಗಿ ಸಸಿ ನೆಟ್ಟು, ಮುಂದಿನ ಹತ್ತು ವರ್ಷಗಳ ಕಾಲ ಕಾಯುವ ಧೈರ್ಯ ಮಾಡಬಲ್ಲ.”
  • ಯುದ್ಧೋಪಾದಿಯಲ್ಲಿ ಜಂಟಿ ಸಮೀಕ್ಷೆ: ಜಿಲ್ಲಾಧಿಕಾರಿಗಳು , ತಹಶೀಲ್ದಾರರು ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ತಕ್ಷಣವೇ ಸ್ಥಳದಲ್ಲೇ ಇದ್ದು ನಿಖರ ವರದಿ ಸಿದ್ಧಪಡಿಸಬೇಕು ಮತ್ತು ಯಾವುದೇ ವಿಳಂಬವಿಲ್ಲದೆ ಪರಿಹಾರ ಧನವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಬೇಕು.

​ಅಡಿಕೆ ಮತ್ತು ತೆಂಗು ಈ ಭಾಗದ ಆರ್ಥಿಕತೆಯ ಬೆನ್ನೆಲುಬು. ಅದುವೇ ಮುರಿದು ಬಿದ್ದಿರುವಾಗ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರವು ಇದನ್ನು ಕೇವಲ ‘ಸಾಮಾನ್ಯ ಮಳೆ ಹಾನಿ’ ಎಂದು ಪರಿಗಣಿಸಬಾರದು. ಇದೊಂದು ವಿಶೇಷ ಕೃಷಿ ತುರ್ತು ಪರಿಸ್ಥಿತಿ ಎಂದು ಭಾವಿಸಿ, ಸರ್ಕಾರ ಕೂಡಲೇ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ರೈತರೊಂದಿಗೆ ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸ್ಥಳೀಯ ಮುಖಂಡರು ಹಾಗೂ ರೈತರು ಒಕ್ಕೊರಲಿನಿಂದ ಎಚ್ಚರಿಸಿದ್ದಾರೆ.

K.M.Sathish Gowda

Join WhatsApp

Join Now

Facebook

Join Now

Read more

​ಪಂಚಪೀಠಾಧೀಶ್ವರರ ಆಶೀರ್ವಾದದೊಂದಿಗೆ ರಾಜ್ಯ ಪ್ರವಾಸ: ಸ್ವಚ್ಛ, ಪ್ರಾಮಾಣಿಕ ಸರ್ಕಾರ ತರುವುದೇ ನನ್ನ ಗುರಿ- ಬಿ.ಎಸ್. ಯಡಿಯೂರಪ್ಪ ಶಪಥ

ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಂಭ್ರಮ; ಕಾಯಕ-ದಾಸೋಹ ತತ್ವವೇ ಸಹಕಾರಕ್ಕೆ ಬುನಾದಿ – ಡಾ. ಧನಂಜಯ್ ಸರ್ಜಿ

ಮಧುವಣಗಿತ್ತಿಯಂತೆ ಕಂಗೊಳಿಸುತ್ತಿರುವ ಮಲೆನಾಡ ಹೆಬ್ಬಾಗಿಲು!: ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ಅಲಂಕಾರ ಸಮಿತಿಯ ಯುವ ಪಡೆ ಭರ್ಜರಿ ಸಿದ್ಧತೆ

​ಸಾವಿರ ರೂಪಾಯಿಯಿಂದ ಕೋಟ್ಯಂತರ ರೂ. ವಹಿವಾಟು: ಬಸವೇಶ್ವರ ಸಹಕಾರ ಸಂಘದ ಶತಮಾನದ ಬೆಳವಣಿಗೆ ಹಾಗೂ ಅಧ್ಯಕ್ಷ ಬಳ್ಳೇಕೆರೆ ಸಂತೋಷ್ ಸಾರಥ್ಯಕ್ಕೆ ಸಿ.ಎಸ್.ಷಡಾಕ್ಷರಿ ಶ್ಲಾಘನೆ

ಶಿವಮೊಗ್ಗದಲ್ಲಿ ಇತಿಹಾಸ ಪ್ರಸಿದ್ಧ ಪಂಚಪೀಠಾಧೀಶರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಬಿ.ಎಸ್.ವೈ ಅಭಿನಂದನಾ ಸಮಾರಂಭ ಯಶಸ್ವಿಗೊಳಿಸಲು ಆಯನೂರು ಮಂಜುನಾಥ್ ಕರೆ

ಶ್ರೀ ಬಸವೇಶ್ವರ ಪಟ್ಟಣ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಂಭ್ರಮ: ಶೋಷಿತರ ಪಾಲಿಗೆ ಸಂಸ್ಥೆ ಹೆಮ್ಮರವಾಗಿ ಬೆಳೆಯಲಿ – ಸಂಸದ ಬಿ.ವೈ. ರಾಘವೇಂದ್ರ

Leave a Comment