ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಮಲೆನಾಡಿನ ಒಡಲಿಗೆ ಅಣುಕಂಟಕ: ಬೇಸೂರು ಅಣುಸ್ಥಾವರ ವಿರೋಧಿ ಹೋರಾಟಕ್ಕೆ ‘ಪರ್ಯಾವರಣ ಟ್ರಸ್ಟ್’ ಬೆಂಬಲ

On: May 20, 2026 10:48 PM
Follow Us:

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು, ಅವಿನಹಳ್ಳಿ ಹೋಬಳಿ ವ್ಯಾಪ್ತಿಯ ಕೋಳೂರು ಗ್ರಾಮ ಪಂಚಾಯಿತಿಯ ಬೇಸೂರು ಗ್ರಾಮದಲ್ಲಿ ಉದ್ದೇಶಿತ ಅಣುವಿದ್ಯುತ್ ಸ್ಥಾವರ ಘಟಕ ಸ್ಥಾಪನೆಯ ಯೋಜನೆಯನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿ ‘ಮಲೆನಾಡು ಅಣುಸ್ಥಾವರ ವಿರೋಧಿ ಹೋರಾಟ ವೇದಿಕೆ’ ನಡೆಸುತ್ತಿರುವ ಜನಪರ ಹೋರಾಟಕ್ಕೆ ಶಿವಮೊಗ್ಗದ ಪ್ರಮುಖ ಪರಿಸರ ಸಂಸ್ಥೆಯಾದ ‘ಪರ್ಯಾವರಣ ಟ್ರಸ್ಟ್’ ತನ್ನ ಬೆಂಬಲವನ್ನು ಘೋಷಿಸಿದೆ.

ಇತ್ತೀಚೆಗೆ ಪರ್ಯಾವರಣ ಟ್ರಸ್ಟ್‌ನ ಸದಸ್ಯರು ಹಾಗೂ ಮಲೆನಾಡು ಅಣುಸ್ಥಾವರ ವಿರೋಧಿ ಹೋರಾಟ ಸಮಿತಿಯ ಪ್ರಮುಖರು ಜಂಟಿ ಸಭೆ ನಡೆಸಿ, ಬೇಸೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಈ ಯೋಜನೆಯಿಂದ ಮಲೆನಾಡಿನ ಸೂಕ್ಷ್ಮ ಪರಿಸರ ಹಾಗೂ ಸ್ಥಳೀಯ ಜನರ ಮೇಲೆ ಉಂಟಾಗಲಿರುವ ಭೀಕರ ದುಷ್ಪರಿಣಾಮಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.

ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಟ್ರಸ್ಟ್‌ನ ಗೌರವಾಧ್ಯಕ್ಷರಾದ ಪ್ರೊ. ಬಿ. ಎಂ. ಕುಮಾರಸ್ವಾಮಿ ಅವರು, “ಬೇಸೂರಿನಲ್ಲಿ ಸ್ಥಾಪಿಸಲುದ್ದೇಶಿಸಿರುವ ಅಣುವಿದ್ಯುತ್ ಉತ್ಪಾದನಾ ಘಟಕವನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲು ಸಾಧ್ಯವೇ ಇಲ್ಲ. ಮಲೆನಾಡಿನ ಪವಿತ್ರ ಪರಿಸರ ಮತ್ತು ಜೀವವೈವಿಧ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರಲಿರುವ ಈ ಯೋಜನೆ, ಆರ್ಥಿಕವಾಗಿಯೂ ಅತ್ಯಂತ ದುಬಾರಿ ವೆಚ್ಚದ್ದಾಗಿದೆ. ಒಂದು ವೇಳೆ ಇಲ್ಲಿ ಅಣುವಿದ್ಯುತ್ ಸ್ಥಾವರ ಸ್ಥಾಪನೆಯಾದರೆ, ಅದರ ವಿಕಿರಣ ಹಾಗೂ ಪರಿಸರ ಮಾಲಿನ್ಯದ ಪರಿಣಾಮ ಕೇವಲ ಒಂದು ಹಳ್ಳಿಗಷ್ಟೇ ಸೀಮಿತವಾಗದೆ ಸುತ್ತಮುತ್ತಲಿನ ಕನಿಷ್ಠ ಎರಡು-ಮೂರು ಜಿಲ್ಲೆಗಳ ಮೇಲೆ ನೇರವಾಗಿ ಆಗುತ್ತದೆ. ಶಿವಮೊಗ್ಗ ಸೇರಿದಂತೆ ಇಡೀ ಮಲೆನಾಡಿನ ಅಸ್ತಿತ್ವದ ರಕ್ಷಣೆಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ಈ ಯೋಜನೆಯ ವಿರುದ್ಧ ಹೋರಾಡಬೇಕಾದ ಅನಿವಾರ್ಯತೆ ಇದೆ” ಎಂದು ಎಚ್ಚರಿಸಿದರು.

ಯೋಜನೆಯ ತಾಂತ್ರಿಕ ಹಾಗೂ ಪರಿಸರ ಸೂಕ್ಷ್ಮತೆಗಳ ಕುರಿತು ಮಾತನಾಡಿದ ಖ್ಯಾತ ಪರಿಸರ ತಜ್ಞ ಡಾ. ಶ್ರೀಪತಿ ಎಲ್.ಕೆ. ಅವರು, “ಅಣು ವಿದ್ಯುತ್ ಸ್ಥಾವರಗಳಲ್ಲಿ ಉತ್ಪತ್ತಿಯಾಗುವ ಅತ್ಯಂತ ಅಪಾಯಕಾರಿ ವಿಕಿರಣ ತ್ಯಾಜ್ಯವನ್ನು (Radioactive Waste) ಅದೇ ಘಟಕದ ಆವರಣದಲ್ಲೇ ಸಂಗ್ರಹಿಸಿಡಬೇಕಾಗುತ್ತದೆ. ಇದನ್ನು ಕನಿಷ್ಠ ಸಾವಿರ ವರ್ಷಗಳ ಕಾಲ ಅತ್ಯಂತ ಸುರಕ್ಷಿತವಾಗಿ ರಕ್ಷಿಸುವುದು ಅಸಾಧ್ಯದ ಮಾತು. ಇಷ್ಟೇ ಅಲ್ಲದೆ, ನಿರ್ದಿಷ್ಟ ಅವಧಿಯ ನಂತರ ಈ ಸ್ಥಾವರಗಳನ್ನು ನಿಷ್ಕ್ರಿಯಗೊಳಿಸುವುದು (Decommissioning) ಕೂಡ ಅಷ್ಟೇ ಅಪಾಯಕಾರಿ ಪ್ರಕ್ರಿಯೆಯಾಗಿದೆ. ಭವಿಷ್ಯದ ಪೀಳಿಗೆಯನ್ನು ಗಂಭೀರ ಆರೋಗ್ಯ ಮತ್ತು ಪರಿಸರ ಸಮಸ್ಯೆಗಳಿಗೆ ತಳ್ಳುವ ಈ ಯೋಜನೆ, ವಿಶ್ವದ ಅತ್ಯಂತ ಸೂಕ್ಷ್ಮ ಜೀವವೈವಿಧ್ಯ ವಲಯಗಳಲ್ಲೊಂದಾದ ಪಶ್ಚಿಮ ಘಟ್ಟಗಳ ಪ್ರದೇಶಕ್ಕಂತೂ ಯಾವುದೇ ರೀತಿಯಲ್ಲೂ ಸೂಕ್ತವಲ್ಲ” ಎಂದು ಆತಂಕ ವ್ಯಕ್ತಪಡಿಸಿದರು.

ಪರ್ಯಾವರಣ ಟ್ರಸ್ಟ್ ಅಧ್ಯಕ್ಷರಾದ ಎಂ. ಶಂಕರ್ ಮಾತನಾಡಿ, “ಬೇಸೂರು ಅಣುಸ್ಥಾವರ ಯೋಜನೆಯನ್ನು ವಿರೋಧಿಸಿ ಮೇ 27ರಂದು ಮಲೆನಾಡು ಅಣುಸ್ಥಾವರ ವಿರೋಧಿ ಹೋರಾಟ ವೇದಿಕೆಯು ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ಹಮ್ಮಿಕೊಂಡಿರುವ ಬೃಹತ್ ಜನಾಂದೋಲನ ಮತ್ತು ಪ್ರತಿಭಟನಾ ಸಭೆಯಲ್ಲಿ ಪರ್ಯಾವರಣ ಟ್ರಸ್ಟ್ ಸಕ್ರಿಯವಾಗಿ ಪಾಲ್ಗೊಳ್ಳಲಿದೆ. ಈ ಭಾಗದ ನಿಸರ್ಗ ಮತ್ತು ಜನರ ಭವಿಷ್ಯವನ್ನು ಕಾಪಾಡುವ ಈ ಪವಿತ್ರ ಹೋರಾಟಕ್ಕೆ ಶಿವಮೊಗ್ಗ ನಗರದ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಪರಿಸರ ಸಂಘ-ಸಂಸ್ಥೆಗಳು ಕೈಜೋಡಿಸಬೇಕು” ಎಂದು ಮುಕ್ತ ಮನವಿ ಮಾಡಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಪ್ರಮುಖರು:

ಈ ಪ್ರಮುಖ ಜಂಟಿ ಸಭೆಯಲ್ಲಿ ಪರಿಸರ ಹೋರಾಟಗಾರರಾದ ಗಿರೀಶ್ ಪಟೇಲ್, ಪ್ರೊ. ಎ.ಎಸ್. ಚಂದ್ರಶೇಖರ್, ರಮೇಶ್ ಹೆಗ್ಡೆ, ಅರವಿಂದ ಪಾಟೀಲ್, ಪ್ರದೀಪ್ ಮಠದ್, ಬಾಲಕೃಷ್ಣ ನಾಯ್ಡು, ದಿನೇಶ್ ಶೇಟ್, ತ್ಯಾಗರಾಜ ಮಿತ್ಯಾಂತ, ಲೋಕೇಶಪ್ಪ, ಜಗದೀಶ್ ಸೇರಿದಂತೆ ಹಲವು ಗಣ್ಯರು ಹಾಗೂ ಪರಿಸರಾಸಕ್ತರು ಉಪಸ್ಥಿತರಿದ್ದು, ಹೋರಾಟದ ಮುಂದಿನ ರೂಪುರೇಷೆಗಳ ಕುರಿತು ಒಮ್ಮತದ ನಿರ್ಧಾರ ಕೈಗೊಂಡರು.

K.M.Sathish Gowda

Join WhatsApp

Join Now

Facebook

Join Now

Read more

ಶಿವಮೊಗ್ಗದ ಸಹಕಾರಿ ರಂಗದಲ್ಲಿ ಹೊಸ ಮೈಲುಗಲ್ಲು: “ಗೆಳೆಯರ ಬಳಗ ಸಹಕಾರ ಸಂಘದ” ನೂತನ ಕಚೇರಿ ಉದ್ಘಾಟನೆ – ಅನಿಲ್ ಕುಂಚಿ ನಾಯಕತ್ವಕ್ಕೆ ಗಣ್ಯರ ಶ್ಲಾಘನೆ!

ಎಸ್‌ಎಸ್‌ಎಲ್‌ಸಿ, ಪಿಯುಸಿ ಸಾಧಕರಿಗೆ ‘ಪ್ರತಿಭಾ ಪುರಸ್ಕಾರ’: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಅರ್ಜಿ ಆಹ್ವಾನ

​”ಶಿವಮೊಗ್ಗಕ್ಕೆ ಸಿಗಲಿದೆಯೇ ಹೈಕೋರ್ಟ್ ಭಾಗ್ಯ? ಸಚಿವ ಮಧು ಬಂಗಾರಪ್ಪ ಮತ್ತು ವಕೀಲರ ನಿಯೋಗದಿಂದ ಸಿಎಂ ಭೇಟಿ”

ರಸ್ತೆ ಗುಂಡಿ ಮುಚ್ಚದ, ರೈತರ ಕಣ್ಣೀರು ಒರೆಸದ ಸರ್ಕಾರಕ್ಕೆ ‘ಸಾಧನೆ’ಯ ಹೆಸರೆತ್ತುವ ನೈತಿಕತೆ ಎಲ್ಲಿದೆ? – ಬಿ.ವೈ.ವಿಜಯೇಂದ್ರ ವಾಗ್ದಾಳಿ

ಸುಡುವ ಬೇಸಿಗೆಗೆ ತಂಪೆರೆದ ‘ಜಲಾಮೃತ’: ಮೂಕ ಜೀವಿಗಳ ಒಡಲು ತುಂಬಿಸುತ್ತಿರುವ ‘ಫ್ರೆಂಡ್ಸ್ ಸೆಂಟರ್’

ಶಿವಮೊಗ್ಗ ಹೈಕೋರ್ಟ್ ಸಂಚಾರಿ ಪೀಠ ಹೋರಾಟಕ್ಕೆ ಸಿಕ್ಕಿತು ‘ರೈತ ಶಕ್ತಿ’: ವಕೀಲರ ಬೆಂಬಲಕ್ಕೆ ನಿಂತ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ

Leave a Comment