ಶಿವಮೊಗ್ಗ: ಇತ್ತೀಚೆಗೆ ಏಪ್ರಿಲ್ 24, 2026 ಹಾಗೂ ಮೇ 17, 2026ರಂದು ಶಿವಮೊಗ್ಗ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆ ಮತ್ತು ಬಿರುಗಾಳಿಯಿಂದ ತಾಲ್ಲೂಕಿನ 10ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೂರಾರು ಎಕರೆ ಪ್ರದೇಶದಲ್ಲಿದ್ದ ಅಡಿಕೆ ತೋಟಗಳು ಭಾರೀ ಹಾನಿಗೊಳಗಾಗಿವೆ. ಅದರಲ್ಲೂ ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಹೋಬಳಿಯ ಸುಮಾರು 32 ಹಳ್ಳಿಗಳನ್ನು ಒಳಗೊಂಡಂತೆ ಒಟ್ಟು 8 ಸಾವಿರ ಹೆಕ್ಟೇರ್ ಪ್ರದೇಶದ ಅಡಿಕೆ ತೋಟಗಳು ಸಂಪೂರ್ಣವಾಗಿ ನಾಶವಾಗಿವೆ.
ಈ ಭೀಕರ ಹಾನಿಯ ಕುರಿತು ಸಮಗ್ರ ವರದಿ ಸಿದ್ಧಪಡಿಸಿ, ಸಂಕಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರದೇಶ ಕೃಷಿಕ ಸಮಾಜದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ನಷ್ಟದ ತೀವ್ರತೆಯನ್ನು ಪರಿಗಣಿಸಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ವರದಿ ರವಾನಿಸಿ ಈ ಪ್ರಕೃತಿ ವಿಕೋಪವನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸುವಂತೆ ಹಾಗೂ ಸಂಕಷ್ಟದಲ್ಲಿರುವ ಅಡಿಕೆ ಬೆಳೆಗಾರರಿಗೆ ತಕ್ಷಣ ಗರಿಷ್ಠ ಪರಿಹಾರ ನೀಡುವಂತೆ ನಿಯೋಗವು ಒತ್ತಾಯಿಸಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರದೇಶ ಕೃಷಿಕ ಸಮಾಜದ ಕಾರ್ಯಾಧ್ಯಕ್ಷರಾದ ನಗರದ ಮಹದೇವಪ್ಪ, ಜಿಲ್ಲಾಧ್ಯಕ್ಷರಾದ ಹೆಚ್.ಎಸ್. ನಾಗರಾಜ್, ಶಿವಮೊಗ್ಗ ತಾಲ್ಲೂಕು ಅಧ್ಯಕ್ಷರಾದ ಕ್ಯಾತಿನಕೊಪ್ಪದ ಚಂದ್ರಶೇಖರ್, ಜಿಲ್ಲಾ ನಿರ್ದೇಶಕರಾದ ಲೋಕೇಶ್, ಶಿಕಾರಿಪುರ ನಿರ್ದೇಶಕರಾದ ಡಿ.ಡಿ. ಶಿವಕುಮಾರ್ ಹಾಗೂ ಷಣ್ಮುಖಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.






