ಶಿವಮೊಗ್ಗ: ಆರೋಗ್ಯ, ಶಿಕ್ಷಣ, ಪರಿಸರ ಸಂರಕ್ಷಣೆ ಹಾಗೂ ಮಾನವೀಯ ಸೇವೆಗಳ ಮೂಲಕ ಸಮಾಜದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿರುವ ರೊಟೇರಿಯನ್ಸ್ಗಳ ಸೇವೆ ಭಗವಂತನ ಸೇವೆಗೆ ಸಮಾನವಾಗಿದೆ ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ರಾಜೇಂದ್ರನಗರದಲ್ಲಿರುವ ರೋಟರಿ ಈಸ್ಟ್ ಶಾಲೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ವತಿಯಿಂದ ಆಯೋಜಿಸಲಾಗಿದ್ದ “ರೋಟರಿ ಸೇವೆಯಲ್ಲಿ ಚುನಾಯಿತ ಪ್ರತಿನಿಧಿಗಳ ಪಾತ್ರ” ಕುರಿತ ಸಾಪ್ತಾಹಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಆರೋಗ್ಯ, ಶಿಕ್ಷಣ ಮತ್ತು ಪರಿಸರ ಕ್ಷೇತ್ರದಲ್ಲಿ ರೋಟರಿ ಸಂಸ್ಥೆಯ ಮಹತ್ವದ ಕೊಡುಗೆ: ಎಸ್.ಎನ್. ಚನ್ನಬಸಪ್ಪ
ರೋಟರಿ ಸಂಸ್ಥೆ ವಿಶ್ವದಾದ್ಯಂತ ಆರೋಗ್ಯ, ಶಿಕ್ಷಣ, ಪರಿಸರ, ಯುವಜನರ ಸಬಲೀಕರಣ ಹಾಗೂ ಸಾಮಾಜಿಕ ಸೇವೆಯ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತಿದೆ. ಆರೋಗ್ಯ ತಪಾಸಣಾ ಶಿಬಿರಗಳು, ನೇತ್ರ ತಪಾಸಣೆ, ಸ್ವಯಂಪ್ರೇರಿತ ರಕ್ತದಾನ ಶಿಬಿರಗಳು, ಪೋಲಿಯೋ ನಿರ್ಮೂಲನೆ ಅಭಿಯಾನ, ಪರಿಸರ ಸಂರಕ್ಷಣೆ ಸೇರಿದಂತೆ ಅನೇಕ ಸೇವಾ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ರೋಟರಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಚನ್ನಬಸಪ್ಪ ಹೇಳಿದರು.
ಶಿಕ್ಷಣ ಕ್ಷೇತ್ರದಲ್ಲಿ ರೋಟರಿಯ ಶಾಶ್ವತ ಸೇವೆ
ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ತನ್ನ ಶಾಶ್ವತ ಯೋಜನೆಯಡಿ ರಾಜೇಂದ್ರನಗರದಲ್ಲಿರುವ ರೋಟರಿ ಪೂರ್ವ ಶಾಲೆಯ ಮೂಲಕ ಮೂಲಭೂತ ಶಿಕ್ಷಣ ಮತ್ತು ಸಾಕ್ಷರತಾ ಅಭಿಯಾನಕ್ಕೆ ನಿರಂತರ ಬೆಂಬಲ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಶಾಲೆಯ ಆವರಣದಲ್ಲಿ ನಿಯಮಿತವಾಗಿ ಕ್ಲಬ್ ಸಭೆಗಳನ್ನು ನಡೆಸುವುದರ ಜೊತೆಗೆ ಸಮುದಾಯ ಹಾಗೂ ಯುವಜನರಿಗೆ ಶೈಕ್ಷಣಿಕ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇಂಟರ್ಯಾಕ್ಟ್ ಕ್ಲಬ್ಗಳ ಸ್ಥಾಪನೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ನಿಘಂಟುಗಳು ಹಾಗೂ ವಿವಿಧ ಕಲಿಕಾ ಸಾಮಗ್ರಿಗಳ ವಿತರಣೆ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಮಾದರಿಯ ಸೇವೆ ಸಲ್ಲಿಸಲಾಗುತ್ತಿದೆ ಎಂದು ಪ್ರಶಂಸಿಸಿದರು.
ರೋಟರಿ ಸ್ಮಶಾನ ಜನಸೇವೆಯ ಮಾದರಿ
ವಿದ್ಯಾನಗರದಲ್ಲಿರುವ ರೋಟರಿ ಸ್ಮಶಾನವೂ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ನ ಪ್ರಮುಖ ಶಾಶ್ವತ ಸೇವಾ ಯೋಜನೆಗಳಲ್ಲಿ ಒಂದಾಗಿದೆ. ಈ ಸ್ಮಶಾನದ ನಿರ್ವಹಣೆ, ಸ್ವಚ್ಛತೆ ಹಾಗೂ ಅಗತ್ಯ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲಾಗುತ್ತಿದೆ. ಇಂತಹ ಜನಪರ ಯೋಜನೆಗಳು ಸಮಾಜಕ್ಕೆ ಮಾದರಿಯಾಗಿದ್ದು, ಇವುಗಳನ್ನು ಮತ್ತಷ್ಟು ವಿಸ್ತರಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

ಮಾದಕ ವ್ಯಸನ ನಿರ್ಮೂಲನೆಗೆ ಸಹಕಾರದ ಕರೆ
ಸಮಾಜದಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟವನ್ನು ತಡೆಗಟ್ಟಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಆರೋಗ್ಯಕರ ಹಾಗೂ ಸದೃಢ ಸಮಾಜ ನಿರ್ಮಾಣಕ್ಕಾಗಿ ರೋಟರಿ ಸಂಸ್ಥೆಗಳೊಂದಿಗೆ ಸಾರ್ವಜನಿಕರು ಸಹಕಾರ ನೀಡುವಂತೆ ಶಾಸಕ ಎಸ್.ಎನ್.ಚನ್ನಬಸಪ್ಪ ನವರು ಕರೆ ನೀಡಿದರು.

ಕೌಶಲ್ಯ ಕೇಂದ್ರ ಮತ್ತು ಕೆರೆ ಸಂರಕ್ಷಣೆಗೆ ಮಾರ್ಗದರ್ಶನ ಕೋರಿಕೆ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಅಧ್ಯಕ್ಷ ಶೇಷಗಿರಿ, ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಸ್ಥಳೀಯ ರೋಟರಿ ಕ್ಲಬ್ಗಳು ಹಮ್ಮಿಕೊಳ್ಳುವ ಸಾಮಾಜಿಕ ಹಾಗೂ ಸಮುದಾಯ ಸೇವಾ ಕಾರ್ಯಕ್ರಮಗಳಲ್ಲಿ ಸದಾ ಸಕ್ರಿಯವಾಗಿ ಭಾಗವಹಿಸಿ ಪ್ರೋತ್ಸಾಹ ನೀಡುತ್ತಿರುವುದಾಗಿ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ವತಿಯಿಂದ ಆರಂಭಿಸಲು ಉದ್ದೇಶಿಸಿರುವ ಕೌಶಲ್ಯ ಅಭಿವೃದ್ಧಿ ಕೇಂದ್ರ ಹಾಗೂ ಕೆರೆ ಸಂರಕ್ಷಣೆಯಂತಹ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಮಾರ್ಗದರ್ಶನ ಮತ್ತು ಸಹಕಾರ ನೀಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲೆ ಚುನಾಯಿತ ಗವರ್ನರ್ ವಸಂತ್ ಹೋಬಳಿದಾರ್, ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಕಾರ್ಯದರ್ಶಿ ಆರ್. ಮನೋಹರ್, ಮಾಜಿ ಅಸಿಸ್ಟೆಂಟ್ ಹಾಗೂ ಝೋನಲ್ ಲೆಫ್ಟಿನೆಂಟ್ ಗವರ್ನರ್ ಭಾರ್ಗವಿ ನಾಗರಾಜ್, ಚಂದ್ರಹಾಸ್ ಪಿ. ರಾಯ್ಕರ್, ಚಂದ್ರಶೇಖರಯ್ಯ ಎಂ., ರಘುರಾಜ್ ಹೆಚ್.ಕೆ., ರೋಟರಿ ನಾರ್ತ್ ಕ್ಲಬ್ ಅಧ್ಯಕ್ಷ ಶಿವಕುಮಾರ್, ಮಾಜಿ ಅಸಿಸ್ಟೆಂಟ್ ಗವರ್ನರ್ ಕೋಟೋಜಿ ರವಿ, ಡಿ.ಜಿ. ಬೆನಕಪ್ಪ, ಮಾಜಿ ಅಧ್ಯಕ್ಷರಾದ ಆದಿಮೂರ್ತಿ ಹೆಚ್.ಬಿ., ಗಣೇಶ್ ಎಸ್., ಶ್ರೀಕಾಂತ್ ಎನ್.ಎಚ್., ಕೃಷ್ಣಮೂರ್ತಿ ಆರ್., ನಾಗರಾಜ್ ಎಂ.ಪಿ., ಕಾಸಲ ವಿ. ಸುರೇಂದ್ರ, ಡಾ. ಗುಡುದಪ್ಪ ಕಸಬಿ, ನಿಕಟ ಪೂರ್ವ ಅಧ್ಯಕ್ಷ ಡಿ. ಕಿಶೋರ್ ಕುಮಾರ್, ಶಶಿಕಾಂತ್ ನಾಡಿಗ್, ಸುನಿಲ್ ಕುಮಾರ್ ಜಿ., ಡಾ. ರವಿಕಿರಣ್ ಹೆಚ್.ಕೆ., ರವಿಪ್ರಕಾಶ್ ಕಾಳಾಚಾರ್, ದಿಲೀಪ್ ಕುಮಾರ್ ಜೈನ್ ಆರ್., ಜಗದೀಶ್, ರವಿಶಂಕರ್ ಡಿ.ಎಸ್., ಸಾಧ್ವಿ ಸಿ. ಕಾಂತ್, ಸಂಜೀವ್ ಎಸ್.ಎನ್., ಅಜಿತ್ ಹೆಚ್.ಎಸ್., ಪೃಥ್ವಿ ಪಿ. ಗೌಡ, ಹೇಮಂತ್ ಎಂ.ಸಿ., ಡಾ. ಮಹಾದೇವಸ್ವಾಮಿ ಕೆ.ಎನ್., ಜಿ. ವಿಜಯ್ ಕುಮಾರ್, ಬಿಂದು ವಿಜಯ್ ಕುಮಾರ್ ಸೇರಿದಂತೆ ರೋಟರಿ ಕ್ಲಬ್ನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.







