ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

​ತಮಿಳುನಾಡು ಪರ ಸಿಎಂ, ರೈತರಿಗೆ ದ್ರೋಹ: ಜು.31ಕ್ಕೆ ಮಂಡ್ಯದಲ್ಲಿ ಬೃಹತ್ ಹೋರಾಟಕ್ಕೆ ಬಿ.ವೈ. ವಿಜಯೇಂದ್ರ ಕರೆ

On: July 29, 2026 2:07 PM
Follow Us:

ಶಿವಮೊಗ್ಗ: ರಾಜ್ಯದ ರೈತರ ಹಿತ ಕಾಯಬೇಕಾದ ಮುಖ್ಯಮಂತ್ರಿಗಳು ತಮಿಳುನಾಡಿನ ಪರವಾಗಿ ಕೆಲಸ ಮಾಡುತ್ತಿರುವಂತೆ ಭಾಸವಾಗುತ್ತಿದೆ. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರದ ರೈತವಿರೋಧಿ ಧೋರಣೆಯನ್ನು ಖಂಡಿಸಿ ಜುಲೈ 31ರಂದು ಮಂಡ್ಯದಲ್ಲಿ ಬೃಹತ್ ಹೋರಾಟ ರೂಪಿಸಲಾಗುವುದು, ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.

ಇಂದು ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾಡಿನ ಜನತೆಗೆ ಗುರುಪೂರ್ಣಿಮೆಯ ಶುಭಾಶಯ ಕೋರಿದರು. ಬಳಿಕ, ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವ ಸರ್ಕಾರದ ನಿರ್ಧಾರವನ್ನು ಉಲ್ಲೇಖಿಸಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಕಾವೇರಿ ಕೊಳ್ಳದ ರೈತರ ಪರವಾಗಿ ಬಿಜೆಪಿ ದೃಢವಾಗಿ ನಿಲ್ಲಲಿದೆ. ಹೋರಾಟದ ಸ್ವರೂಪವನ್ನು ನಮ್ಮ ಹಿರಿಯ ನಾಯಕರು ಸಭೆ ನಡೆಸಿ ಅಂತಿಮಗೊಳಿಸಲಿದ್ದಾರೆ. ಇತ್ತೀಚೆಗೆ ‘ರೈತರು ಬಿತ್ತನೆ ಮಾಡಬೇಡಿ’ ಎಂದು ಮುಖ್ಯಮಂತ್ರಿಗಳು ನೀಡಿದ್ದ ಹೇಳಿಕೆ ಅತ್ಯಂತ ವಿಷಾದಕರ. ರೈತರಲ್ಲಿ ಆತ್ಮಸ್ಥೈರ್ಯ ತುಂಬಬೇಕಾದ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳೇ ಅವರ ಧೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ, ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸದ್ಯ ಜಲಾಶಯದಲ್ಲಿ 17.39 ಟಿಎಂಸಿ ನೀರಿದ್ದು, ಅದರಲ್ಲಿ 5 ಟಿಎಂಸಿ ನೀರನ್ನು ‘ಡೆಡ್ ಸ್ಟೋರೇಜ್’ ಆಗಿ ಕಾಯ್ದಿರಿಸಲೇಬೇಕಾಗುತ್ತದೆ. ಉಳಿದಿರುವ ಕೇವಲ 13 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಿದರೆ ನಮ್ಮ ಭಾಗದ ರೈತರ ಮತ್ತು ಕುಡಿಯುವ ನೀರಿನ ಪರಿಸ್ಥಿತಿ ಏನಾಗಬೇಕು? ಎಂದು ಪ್ರಶ್ನಿಸಿದ ವಿಜಯೇಂದ್ರ, ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮುಂದೆ ಸರ್ಕಾರ ತಕ್ಷಣವೇ ಮರುಅರ್ಜಿ ಸಲ್ಲಿಸಿ, ಸಮರ್ಥವಾಗಿ ವಾದ ಮಂಡಿಸಬೇಕು, ಎಂದು ಆಗ್ರಹಿಸಿದರು.

ಸಂಪುಟ ವಿಸ್ತರಣೆ ಮತ್ತು ರಾಜಕೀಯ ಚರ್ಚೆಗಳಿಗಾಗಿ ಪದೇಪದೇ ದೆಹಲಿಗೆ ತೆರಳುವ ಡಿ.ಕೆ. ಶಿವಕುಮಾರ್ ಅವರು, ಈ ಸೂಕ್ಷ್ಮ ವಿಚಾರದಲ್ಲಿ ಕಾನೂನು ತಜ್ಞರು ಹಾಗೂ ವಕೀಲರೊಂದಿಗೆ ಏಕೆ ಸಮಾಲೋಚನೆ ನಡೆಸುತ್ತಿಲ್ಲ? ಕಾವೇರಿ ಕೊಳ್ಳದ ರೈತರಿಗೆ ದ್ರೋಹ ಬಗೆಯುವುದನ್ನು ತಕ್ಷಣ ನಿಲ್ಲಿಸಬೇಕು, ಎಂದು ಎಚ್ಚರಿಸಿದರು.

ಬೆಂಗಳೂರಿನ ವೈದ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಡಾ. ಟಿ. ನಾಗೇಂದ್ರಪ್ಪ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ಬಿ.ವೈ. ವಿಜಯೇಂದ್ರ ಕಟುವಾಗಿ ವಿರೋಧಿಸಿದರು. ಬಾಂಗ್ಲಾದೇಶದ ಅಕ್ರಮ ನುಸುಳುಕೋರರ ವಿರುದ್ಧ ದನಿ ಎತ್ತಿದ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಿರುವುದು ದೇಶದ್ರೋಹದ ಕೆಲಸಕ್ಕೆ ಸಮ. ಸರ್ಕಾರ ಯಾರನ್ನು ಓಲೈಸಲು ಈ ರೀತಿಯ ಕೀಳುಮಟ್ಟದ ನಿರ್ಧಾರಕ್ಕೆ ಕೈಹಾಕಿದೆ? ರಾಜ್ಯ ಕಾಂಗ್ರೆಸ್ ಸರ್ಕಾರವು ಅಲ್ಪಸಂಖ್ಯಾತರ ಓಲೈಕೆಗಾಗಿ ಹೋರಾಟಗಾರರನ್ನು ಮತ್ತು ಸತ್ಯ ಹೇಳುವವರನ್ನು ದಮನ ಮಾಡುವ ಕೆಲಸ ಮಾಡುತ್ತಿದೆ. ಸರ್ಕಾರದ ಈ ನಡೆಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ, ಎಂದರು.

ಸಿಇಟಿ ಪರೀಕ್ಷೆ ಹಾಗೂ ಮುಲ್ಲಾ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, “ಎಂಎಲ್‌ಸಿ ಸಿ.ಟಿ. ರವಿ ಅವರು ಯಾವ ಸಂದರ್ಭ ಮತ್ತು ಅರ್ಥದಲ್ಲಿ ಮಾತನಾಡಿದ್ದಾರೆ ಎಂಬುದನ್ನು ಗಮನಿಸಬೇಕು. ಸಚಿವ ಪ್ರಿಯಾಂಕ್ ಖರ್ಗೆ ಅವರು ತಾವೇ ಗೃಹಮಂತ್ರಿ ಎನ್ನುವಂತೆ ವರ್ತಿಸುತ್ತಿದ್ದು, ತಮ್ಮ ಇಲಾಖೆಯ ಆದ್ಯತೆಗಳು ಏನೆಂಬುದನ್ನೇ ಮರೆತಂತಿದೆ. ಗೃಹ ಇಲಾಖೆಯ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುವುದನ್ನು ಬಿಟ್ಟು ಬಿಜೆಪಿ ನಾಯಕರಿಗೆ ಬೆದರಿಕೆ ಹಾಕುವುದು ಸರಿಯಲ್ಲ,” ಎಂದು ತಿರುಗೇಟು ನೀಡಿದರು.

ಮಾಇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವ ವಿಚಾರವನ್ನು ಪ್ರಸ್ತಾಪಿಸಿದ ವಿಜಯೇಂದ್ರ, “2028ರ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 80 ಸ್ಥಾನಗಳನ್ನು ಗೆಲ್ಲುವ ಆಶಯವನ್ನು ಕಾಂಗ್ರೆಸ್ ಹೊಂದಿತ್ತು. ಆದರೆ, ಸಿದ್ಧರಾಮಯ್ಯನವರ ನಿವೃತ್ತಿ ನಿರ್ಧಾರ ಹಾಗೂ ಸರ್ಕಾರದ ವಿಫಲ ನೀತಿಗಳಿಂದಾಗಿ ಕಾಂಗ್ರೆಸ್ ಬಲ ಮುಂಬರುವ ಚುನಾವಣೆಯಲ್ಲಿ 50 ಸ್ಥಾನಗಳಿಗೆ ಇಳಿಯುವುದು ನಿಶ್ಚಿತ,” ಎಂದು ಹೇಳಿದರು.

K.M.Sathish Gowda

Join WhatsApp

Join Now

Facebook

Join Now

Read more

ಸಂಸದ ಬಿ.ವೈ. ರಾಘವೇಂದ್ರ ಯತ್ನಕ್ಕೆ ಲಭಿಸಿದ ಫಲ: ‘ರಾಷ್ಟ್ರೀಯ ಹಾಲಿನ ಅಭಿವೃದ್ಧಿ ಯೋಜನೆ’ಯಿಂದ ಶಿಮುಲ್ ವ್ಯಾಪ್ತಿಯ 37,750 ರೈತ ಕುಟುಂಬಗಳಿಗೆ ನೇರ ಲಾಭ!

ಆರೋಗ್ಯ, ಶಿಕ್ಷಣ, ಪರಿಸರ ಸಂರಕ್ಷಣೆ ಸೇರಿದಂತೆ ಸಮಾಜಮುಖಿ ಸೇವೆಗಳಲ್ಲಿ ರೋಟರಿ ಸಂಸ್ಥೆಗಳ ಕೊಡುಗೆ ಅನನ್ಯ: ಶಾಸಕ ಎಸ್.ಎನ್. ಚನ್ನಬಸಪ್ಪ

ಯುವಕರ ಭವಿಷ್ಯದೊಂದಿಗೆ ಕಾಂಗ್ರೆಸ್ ಸರ್ಕಾರ ಚೆಲ್ಲಾಟ; ಕೆಪಿಎಸ್‌ಸಿ ಸೇರಿದಂತೆ ಎಲ್ಲಾ ನೇಮಕಾತಿ ಅಕ್ರಮಗಳಿಗೆ ಸಿಬಿಐ ತನಿಖೆ ಅಗತ್ಯ: ಬಿ.ವೈ. ವಿಜಯೇಂದ್ರ

ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ ನಿಧನ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಚಿವ ಎಸ್. ಮಧು ಬಂಗಾರಪ್ಪರಿಂದ ಸಂತಾಪ

ಹೆಚ್.ಎಂ.ಸಿ. ಅವರ ಅಂತಿಮ ದರ್ಶನ ಪಡೆದ ಸಾಣೇಹಳ್ಳಿ ಶ್ರೀಗಳು; “ರಾಜಕೀಯದಲ್ಲಿ ಆದರ್ಶ ಮತ್ತು ನಿಷ್ಠೆಗೆ ಮತ್ತೊಂದು ಹೆಸರು ಹೆಚ್.ಎಂ.ಚಂದ್ರಶೇಖರಪ್ಪ”: ಶ್ರೀ ಡಾ. ಪಂಡಿತಾರಾಧ್ಯ ಸ್ವಾಮೀಜಿಯವರ ನುಡಿನಮನ

​ಕುವೆಂಪು ವಿವಿಯಲ್ಲಿ ಅವ್ಯವಸ್ಥೆ, ಭ್ರಷ್ಟಾಚಾರದ ಆರೋಪ; ಕುಲಪತಿಗಳ ವಜಾಕ್ಕೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ!: ಪ್ರಭಾರ ರಿಜಿಸ್ಟ್ರಾರ್‌ಗೆ ಮನವಿ ಸಲ್ಲಿಕೆ

Leave a Comment