ಶಿವಮೊಗ್ಗ ಸೇರಿ ಬರಪೀಡಿತ ಪ್ರದೇಶಗಳ ವೀಕ್ಷಣೆ ಬಳಿಕ ಬಿಜೆಪಿ ತಂಡದ ಕಿಡಿ • ಬೆಳೆ ಹಾನಿ, ನೀರಿನ ಕೊರತೆ, ಜಾನುವಾರು ಸಂಕಷ್ಟ, ಮೀನುಗಾರಿಕೆ ಕುಸಿತದ ಕುರಿತು ಸಮಗ್ರ ವರದಿ ಸಿದ್ಧಪಡಿಸಲು ನಿರ್ಧಾರ
ಶಿವಮೊಗ್ಗ, ಜುಲೈ 30: ಕರ್ನಾಟಕದ ಅರ್ಧಕ್ಕಿಂತ ಹೆಚ್ಚು ಜಿಲ್ಲೆಗಳು ಹಾಗೂ ನೂರಾರು ಗ್ರಾಮಗಳು ತೀವ್ರ ಬರದ ಸಂಕಷ್ಟಕ್ಕೆ ಸಿಲುಕಿದ್ದು, ರೈತರು, ಜಾನುವಾರು ಸಾಕಾಣಿಕೆದಾರರು ಹಾಗೂ ಮೀನುಗಾರರು ಜೀವನೋಪಾಯ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದಾರೆ. ಆದರೆ ಇಂತಹ ಗಂಭೀರ ಪರಿಸ್ಥಿತಿಯಲ್ಲೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಚಿವರು ಹಾಗೂ ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದರು.
ರಾಜ್ಯ ಬಿಜೆಪಿ ವತಿಯಿಂದ ಬರಪೀಡಿತ ಪ್ರದೇಶಗಳ ವಾಸ್ತವ ಸ್ಥಿತಿಯನ್ನು ಅಧ್ಯಯನ ಮಾಡಲು ರಚಿಸಲಾಗಿರುವ ಆರು ವಿಶೇಷ ತಂಡಗಳ ಪೈಕಿ ಒಂದು ತಂಡದ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲೆಯ ತ್ಯಾಜ್ಯವಳ್ಳಿ, ಚಾಮೇನಹಳ್ಳಿ, ಹಾತಿಕಟ್ಟೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬೆಳೆ, ಜಾನುವಾರು ಸಾಕಾಣಿಕೆ ಹಾಗೂ ಮೀನು ಮರಿ ಉತ್ಪಾದನಾ ಕೇಂದ್ರಗಳ ಪರಿಶೀಲನೆ ನಡೆಸಿದ ಬಳಿಕ ಭದ್ರಾ ಜಲಾಶಯದ ಬಳಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ರಾಜ್ಯದಾದ್ಯಂತ ಬರದ ಕರಾಳ ಚಿತ್ರಣ
ಈ ವರ್ಷ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದೆ. ಜಾನುವಾರುಗಳಿಗೆ ಮೇವು ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನೇಕ ರೈತರು ಸಾಕಿದ ಜಾನುವಾರುಗಳನ್ನು ಸಂತೆಗೆ ಕೊಂಡೊಯ್ದು ಮಾರಾಟ ಮಾಡುವ ಅಥವಾ ಕಟುಕರಿಗೆ ಒಪ್ಪಿಸುವಂತಹ ದುಃಸ್ಥಿತಿ ನಿರ್ಮಾಣವಾಗಿದೆ. ಕೃಷಿ, ಪಶುಸಂಗೋಪನೆ ಹಾಗೂ ಗ್ರಾಮೀಣ ಆರ್ಥಿಕ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ ಎಂದು ಅವರು ಹೇಳಿದರು.
ಕೇವಲ ಹೇಳಿಕೆ ಅಲ್ಲ; ನೆಲಮಟ್ಟದಲ್ಲಿ ಬಿಜೆಪಿ ಸಮೀಕ್ಷೆ
ವಿರೋಧ ಪಕ್ಷವಾಗಿ ಕೇವಲ ಪತ್ರಿಕಾ ಹೇಳಿಕೆ ನೀಡುವುದಕ್ಕಿಂತ ನೆಲಮಟ್ಟದಲ್ಲಿ ರೈತರ ಸಂಕಷ್ಟವನ್ನು ಅರಿಯುವ ಉದ್ದೇಶದಿಂದ ರಾಜ್ಯ ಬಿಜೆಪಿ ಆರು ವಿಶೇಷ ತಂಡಗಳನ್ನು ರಚಿಸಿದೆ. ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಬರಪೀಡಿತ ಜಿಲ್ಲೆಗಳಲ್ಲಿ ರೈತರನ್ನು ನೇರವಾಗಿ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ಎಲ್ಲಾ ಮಾಹಿತಿಯನ್ನು ಒಟ್ಟುಗೂಡಿಸಿ ಸಮಗ್ರ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಆರಗ ಜ್ಞಾನೇಂದ್ರ ತಿಳಿಸಿದರು.


ಜೋಳ ಬೆಳೆ ಸಂಪೂರ್ಣ ನಾಶ; ರೈತರ ಕನಸು ಮಣ್ಣುಪಾಲು
ಹಾಸನ ಜಿಲ್ಲೆಯಲ್ಲಿ ಜೋಳ ಬೆಳೆ ಬಿಳಿಸುಳಿ ರೋಗದಿಂದ ಸುಮಾರು 80 ಶೇಕಡಾ ಹಾನಿಗೊಳಗಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿಯೂ ಮಳೆಯ ಕೊರತೆಯಿಂದ ಜೋಳ ಬೆಳೆ ಕೈಗೆ ಬರುವ ಮೊದಲೇ ಒಣಗಿ ಹೋಗಿದೆ. ಬೆಳೆದ ಬೆಳೆಯನ್ನು ರೈತರು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿ ಮಣ್ಣಿನಲ್ಲಿ ಬೆರೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಲ ಮಾಡಿ ಬೀಜ ಖರೀದಿಸಿದ ರೈತರು, ಗೊಬ್ಬರ ಹಾಗೂ ಕೃಷಿ ವೆಚ್ಚ ಭರಿಸಿದರೂ ಬೆಳೆ ಕೈಗೆ ಬರದೆ ಸಂಪೂರ್ಣ ನಷ್ಟ ಅನುಭವಿಸುತ್ತಿದ್ದಾರೆ. ಕೃಷಿಯಿಂದ ಆದಾಯವಿಲ್ಲದೆ ಸಾಲದ ಹೊರೆ ಹೆಚ್ಚಾಗಿದ್ದು, ರೈತರು ಮಾನಸಿಕವಾಗಿ ಕುಗ್ಗಿದ್ದಾರೆ ಎಂದು ಹೇಳಿದರು.
ಭತ್ತದ ಬಿತ್ತನೆಯೇ ಆರಂಭವಾಗಿಲ್ಲ
ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಇನ್ನೂ ಬಹುತೇಕ ಪ್ರದೇಶಗಳಲ್ಲಿ ಭತ್ತದ ನಾಟಿ ಹಾಗೂ ಬಿತ್ತನೆ ಆರಂಭವಾಗಿಲ್ಲ. ಅನೇಕ ರೈತರು ಮೋಡಗಳನ್ನು ನೋಡುತ್ತಾ ಮಳೆಯ ನಿರೀಕ್ಷೆಯಲ್ಲೇ ದಿನ ಕಳೆಯುತ್ತಿದ್ದಾರೆ. ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ಹಿನ್ನಡೆಯಾಗಿದ್ದು, ಮುಂದಿನ ತಿಂಗಳುಗಳಲ್ಲೂ ಆಹಾರ ಧಾನ್ಯ ಉತ್ಪಾದನೆಗೆ ಹೊಡೆತ ಬೀಳುವ ಆತಂಕ ಎದುರಾಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.


ಮೀನುಗಾರಿಕೆಗೂ ಭಾರೀ ಹೊಡೆತ
ಹಾತಿಕಟ್ಟೆ ಹಾಗೂ ಸುತ್ತಮುತ್ತಲಿನ ಮೀನು ಮರಿ ಉತ್ಪಾದನಾ ಕೇಂದ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪರಿಸ್ಥಿತಿ ಮತ್ತಷ್ಟು ಆತಂಕಕಾರಿಯಾಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
ಪ್ರತಿ ವರ್ಷ ಸುಮಾರು 50 ಕೋಟಿ ಮೀನು ಮರಿಗಳನ್ನು ಉತ್ಪಾದಿಸಿ ರಾಜ್ಯದ ವಿವಿಧ ಜಲಾಶಯಗಳು ಹಾಗೂ ಖಾಸಗಿ ಕೆರೆಗಳಿಗೆ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ನೀರಿನ ಕೊರತೆಯಿಂದ ಕೇವಲ 10 ಕೋಟಿ ಮೀನು ಮರಿಗಳ ಉತ್ಪಾದನೆ ಮಾತ್ರ ಸಾಧ್ಯವಾಗಿದೆ. ಇದರಿಂದ ಸಾವಿರಾರು ಮೀನುಗಾರರು ಹಾಗೂ ಮೀನು ಸಾಕಾಣಿಕೆದಾರರ ಜೀವನೋಪಾಯ ಸಂಕಷ್ಟಕ್ಕೀಡಾಗಿದೆ ಎಂದು ಹೇಳಿದರು.


ಡ್ಯಾಮ್ಗಳಲ್ಲಿ ನೀರಿನ ಅಭಾವ – ದೆಹಲಿಯಲ್ಲಿ ಮಂತ್ರಿಗಳ ರಾಜಕೀಯ!
ಪ್ರಸ್ತುತ ಭದ್ರಾ ಜಲಾಶಯದ ಗರಿಷ್ಠ ಸಾಮರ್ಥ್ಯ 64.478 ಟಿಎಂಸಿ ಇದ್ದು, ಪ್ರಸ್ತುತ ಕೇವಲ 38.507 ಟಿಎಂಸಿ ನೀರು ಮಾತ್ರ ಸಂಗ್ರಹವಿದೆ. ಕೆನಾಲ್ಗಳಿಗೆ ನೀರು ಬಿಡಲು ಸಾಧ್ಯವಾಗದೆ ರೈತರು ಕಂಗಾಲಾಗಿದ್ದಾರೆ. ಕಾಡಾ (CADA) ಸಭೆಯೂ ನಡೆಯುತ್ತಿಲ್ಲ. ಇತ್ತ ಕಾವೇರಿ ಕೊಳ್ಳದ ಹೇಮಾವತಿ (ಗೊರೂರು) ಜಲಾಶಯದಲ್ಲೂ ಕಳೆದ ವರ್ಷಕ್ಕಿಂತ 13 ಟಿಎಂಸಿ ನೀರು ಕೊರತೆಯಿದೆ.
“ರಾಜ್ಯದಲ್ಲಿ ತೀವ್ರ ಬರಗಾಲವಿದ್ದು, ಜಲಾನಯನ ಪ್ರದೇಶಗಳಲ್ಲಿ ಮಳೆಯಿಲ್ಲದಿದ್ದರೂ, ಸಿಡಬ್ಲ್ಯೂಆರ್ಸಿ (CWRC) ಮುಂದೆ ಸರಿಯಾಗಿ ವಾದ ಮಂಡಿಸಲು ಅಸಮರ್ಥವಾಗಿ ದಿನಕ್ಕೆ 3,500 ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ. ಕೃಷಿ ಮಂತ್ರಿಯಾಗಲಿ, ತೋಟಗಾರಿಕೆ ಮಂತ್ರಿಯಾಗಲಿ ಫೀಲ್ಡ್ನಲ್ಲೇ ಇಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಶಾಸಕರು ತಮ್ಮ ಅಧಿಕಾರ ಉಳಿಸಿಕೊಳ್ಳಲು ದೆಹಲಿಯಲ್ಲಿ ಕಾಲ ಕಳೆಯುತ್ತಿದ್ದಾರೆ.”
— ಆರಗ ಜ್ಞಾನೇಂದ್ರ, ಮಾಜಿ ಸಚಿವರು

ರಾಜ್ಯ ಸರ್ಕಾರ ತಕ್ಷಣವೇ ಸ್ವಂತ ನಿಧಿಯಿಂದ ಪರಿಹಾರ ಬಿಡುಗಡೆ ಮಾಡಲಿ
ಸಂಕಷ್ಟದಲ್ಲಿರುವ ರೈತರಿಗೆ ಧೈರ್ಯ ತುಂಬಿ, ಪರ್ಯಾಯ ಬೆಳೆಗೆ ಉಚಿತ ಬೀಜ, ಗೊಬ್ಬರ ಹಾಗೂ ಸಾಲಮನ್ನಾ ಘೋಷಣೆ ಮಾಡಬೇಕಿದ್ದ ನಾಗರಿಕ ಸರ್ಕಾರ, ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಕಡೆ ಬೆರಳು ತೋರಿಸುತ್ತಿರುವುದು ಅಕ್ಷಮ್ಯ ಅಪರಾಧ.
• ವೈಜ್ಞಾನಿಕ ಸರ್ವೇ ಇಲ್ಲ: ಮಂತ್ರಿಗಳು, ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡದೆ ಕೇಂದ್ರಕ್ಕೆ ನಿಖರ ವರದಿ ಸಲ್ಲಿಸುವುದು ಹೇಗೆ?
• ತಕ್ಷಣ ಪರಿಹಾರ ನೀಡಲಿ: ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವುದಕ್ಕೂ ಮುನ್ನ ರಾಜ್ಯ ಸರ್ಕಾರವೇ ತಕ್ಷಣವೇ ತನ್ನ ಖಜಾನೆಯಿಂದ ಹಣ ಬಿಡುಗಡೆ ಮಾಡಿ ರೈತರ ನೆರವಿಗೆ ಧಾವಿಸಬೇಕು.
• ಅಸಡ್ಡೆಯ ಆಡಳಿತ: ಲಿಫ್ಟ್ ಇರಿಗೇಷನ್ ಆಪರೇಟರ್ಗಳಿಗೆ ವೇತನ ನೀಡದ ಕಾರಣ ಅವರು ಗೇಟ್ ಹಾಕಿ ಹೋಗಿದ್ದಾರೆ. ಕೆರೆ ತುಂಬಿಸುವ ಯೋಜನೆಗಳು ಸ್ಥಗಿತಗೊಂಡಿವೆ.
140 ಶಾಸಕರ ಬಲವಿದ್ದರೂ, ಜನಪ್ರತಿನಿಧಿಗಳಿಗೆ ರಾಜ್ಯದ ಅಭಿವೃದ್ಧಿ ಹಾಗೂ ರೈತರ ಕಣ್ಣೀರು ಒರೆಸುವ ಆಸಕ್ತಿಯಿಲ್ಲ. ದುರಾಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಇನ್ನಾದರೂ ಕಣ್ಣು ತೆರೆಯಬೇಕು. ಅಧ್ಯಯನ ಪೂರ್ಣಗೊಂಡ ಬಳಿಕ 6 ತಂಡಗಳ ಕನ್ಸಾಲಿಡೇಟೆಡ್ (ಸಂಕಲಿತ) ವರದಿಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಸಲ್ಲಿಸಿ, ಸರ್ಕಾರದ ಕಣ್ಣು ತೆರೆಸುವ ಕೆಲಸವನ್ನು ಬಿಜೆಪಿ ಮಾಡಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

ಕೃಷಿ ಸಚಿವರೇ ಇಲ್ಲ; ರೈತರು ಯಾರ ಬಳಿ ಹೋಗಬೇಕು?
ರಾಜ್ಯದಲ್ಲಿ ಕೃಷಿ ಇಲಾಖೆಗೆ ಪೂರ್ಣ ಪ್ರಮಾಣದ ಸಚಿವರೇ ಇಲ್ಲ. ತೋಟಗಾರಿಕೆ ಇಲಾಖೆಯಲ್ಲಿಯೂ ಸಮರ್ಪಕ ನಾಯಕತ್ವದ ಕೊರತೆಯಿದೆ. ಇಂತಹ ಸಂದರ್ಭದಲ್ಲಿ ಬೆಳೆ ಹಾನಿಯಾದ ರೈತರು ತಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಬೇಕು ಎಂಬ ಪ್ರಶ್ನೆ ಉದ್ಭವಿಸಿದೆ.
ರೈತರ ಸಂಕಷ್ಟವನ್ನು ಆಲಿಸಿ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಬೇಕಿದ್ದ ಸರ್ಕಾರ ಆಡಳಿತಾತ್ಮಕ ಗೊಂದಲದಲ್ಲೇ ಕಾಲ ಕಳೆಯುತ್ತಿದೆ ಎಂದು ಅವರು ಟೀಕಿಸಿದರು.
ಮಳೆಮಾಪನ ವ್ಯವಸ್ಥೆಯೇ ಕುಸಿದಿದೆ
ಬರದ ಪರಿಸ್ಥಿತಿಯನ್ನು ವೈಜ್ಞಾನಿಕವಾಗಿ ದಾಖಲಿಸಲು ಅಗತ್ಯವಾಗಿರುವ ಮಳೆಮಾಪನ ಕೇಂದ್ರಗಳ ನಿರ್ವಹಣೆಯಲ್ಲಿಯೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಶಿವಮೊಗ್ಗ ಜಿಲ್ಲೆಯ 280 ಮಳೆಮಾಪನ ಕೇಂದ್ರಗಳ ಪೈಕಿ 75 ಕೇಂದ್ರಗಳು ಕಾರ್ಯನಿರ್ವಹಿಸುತ್ತಿಲ್ಲ.
ಇದರಿಂದ ನಿಖರ ಮಳೆಯ ದಾಖಲೆಗಳು ಲಭ್ಯವಾಗುತ್ತಿಲ್ಲ. ಇದರ ನೇರ ಪರಿಣಾಮ ಬೆಳೆ ವಿಮೆ ಪಡೆಯುವ ರೈತರ ಮೇಲೆಯೇ ಬೀಳುತ್ತಿದೆ. ಎರಡು ವರ್ಷಗಳಿಂದ ಈ ಬಗ್ಗೆ ಎಚ್ಚರಿಸಿದರೂ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಅಡಿಕೆ, ಲಿಫ್ಟ್ ಇರಿಗೇಷನ್, ಅಂತರ್ಜಲಕ್ಕೂ ಹೊಡೆತ
ಮಳೆಯ ಕೊರತೆಯಿಂದ ಅಡಿಕೆ ತೋಟಗಳು ಒಣಗುತ್ತಿವೆ. ಕೆರೆಗಳು ತುಂಬದ ಕಾರಣ ಅಂತರ್ಜಲ ಮಟ್ಟ ಕುಸಿದಿದೆ. ಲಿಫ್ಟ್ ಇರಿಗೇಷನ್ ಯೋಜನೆಗಳು ಸ್ಥಗಿತಗೊಂಡಿವೆ. ಕೆಲವೆಡೆ ನಿರ್ವಹಣಾ ಸಿಬ್ಬಂದಿಗೆ ಸಂಬಳ ನೀಡದ ಕಾರಣ ಯೋಜನೆಗಳ ಕಾರ್ಯಾಚರಣೆಯೇ ನಿಂತಿದೆ ಎಂದು ಅವರು ಆರೋಪಿಸಿದರು.
ತಕ್ಷಣ ಪರಿಹಾರ ಘೋಷಿಸಲಿ ರಾಜ್ಯ ಸರ್ಕಾರ
ಬೆಳೆ ಹಾನಿಗೊಳಗಾದ ರೈತರಿಗೆ ತಕ್ಷಣ ಪರಿಹಾರ ನೀಡಬೇಕು. ಪರ್ಯಾಯ ಬೆಳೆಗಳಿಗೆ ಉಚಿತ ಬೀಜ ಹಾಗೂ ಗೊಬ್ಬರ ವಿತರಿಸಬೇಕು. ಕೃಷಿ ಸಾಲ ಮರುಪಾವತಿಗೆ ಸಡಿಲಿಕೆ ನೀಡಬೇಕು. ಜಾನುವಾರುಗಳಿಗೆ ಮೇವು ಒದಗಿಸಬೇಕು. ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆರಗ ಜ್ಞಾನೇಂದ್ರ ಆಗ್ರಹಿಸಿದರು.
ಬಿಜೆಪಿ ಸಮಗ್ರ ವರದಿ ಸಲ್ಲಿಸಲಿದೆ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸುತ್ತಿರುವ ಬಿಜೆಪಿ ಆರು ತಂಡಗಳು ಸಂಗ್ರಹಿಸಿರುವ ಮಾಹಿತಿಯನ್ನು ಒಟ್ಟುಗೂಡಿಸಿ ಸಮಗ್ರ ವರದಿ ಸಿದ್ಧಪಡಿಸಲಾಗುವುದು. ಈ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ರೈತರ ಪರ ತಕ್ಷಣದ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು.
‘ರೈತರ ಕಣ್ಣೀರು ಒರೆಸುವ ಜವಾಬ್ದಾರಿ ಸರ್ಕಾರದ್ದೇ’
ಅಧಿಕಾರಕ್ಕಾಗಿ ರಾಜಕೀಯ ಮಾಡುವುದಕ್ಕಿಂತ ರೈತರ ಬದುಕು ಉಳಿಸುವ ಕೆಲಸ ಸರ್ಕಾರದ ಮೊದಲ ಆದ್ಯತೆಯಾಗಬೇಕು. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕು. ಆದರೆ ಪ್ರಸ್ತುತ ರಾಜ್ಯ ಸರ್ಕಾರ ರೈತರ ಸಂಕಷ್ಟವನ್ನು ನಿರ್ಲಕ್ಷಿಸಿದ್ದು, ರೈತರ ಕಣ್ಣೀರು ಒರೆಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಶಾಸಕರಾದ ಆರಗ ಜ್ಞಾನೇಂದ್ರ, ಶಿವಮೊಗ್ಗ ನಗರ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ, ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ್ ಸರ್ಜಿ, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಜಗದೀಶ್ ಎನ್.ಕೆ., ಮಾಜಿ ಶಾಸಕರಾದ ಕೆ.ಬಿ. ಅಶೋಕ್ ನಾಯ್ಕ್ ಹಾಗೂ ಕೆ.ಜಿ. ಕುಮಾರಸ್ವಾಮಿ, ಬಿಜೆಪಿ ಮುಖಂಡರಾದ ಮಂಗೋಟೆ ರುದ್ರೇಶ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾದ ಸಿದ್ದಲಿಂಗಪ್ಪ ನಿಂಬೆಗೊಂದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗಣೇಶ್ ಬಿಳಕಿ ಹಾಗೂ ಕುಮಾರ್ ನಾಯ್ಡು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಸುರೇಶ್ ಸಿಂಗನಹಳ್ಳಿ, ಜಿಲ್ಲಾ ಮಾಧ್ಯಮ ಪ್ರಮುಖರಾದ ಚಂದ್ರಶೇಖರ ಮತ್ತು ಮಂಜುನಾಥ್, ಟಿ.ಬಿ.ಜಗದೀಶ್, ಹುಬ್ಬಳ್ಳಿ ನಾಗರಾಜ್, ಜಿಲ್ಲಾ ರೈತ ಮೋರ್ಚಾದ ಪದಾಧಿಕಾರಿಗಳು, ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.









