‘ವಿವೇಕ ಸ್ಮಾರಕವು ಸಾಧಕರು ಹಾಗೂ ಶ್ರದ್ಧಾಳುಗಳ ಆಧ್ಯಾತ್ಮಿಕ-ಪ್ರೇರಣಾ ಕೇಂದ್ರವಾಗಲಿ’: ಪ್ರಧಾನಿ ನರೇಂದ್ರ ಮೋದಿ
ಮೈಸೂರು: ಭಾರತದ ಯುವಜನತೆ ಇಂದು ವಿಶ್ವದ ಗಮನ ಸೆಳೆಯುವ ಸಾಧನೆಗಳನ್ನು ಮಾಡುತ್ತಿದ್ದು, ಸ್ಟಾರ್ಟಪ್ಗಳಿಂದ ಹಿಡಿದು ಡಿಜಿಟಲ್ ತಂತ್ರಜ್ಞಾನ, ಮೊಬೈಲ್ ಉತ್ಪಾದನೆ ಹಾಗೂ ಸೆಮಿಕಂಡಕ್ಟರ್ ಕ್ಷೇತ್ರದವರೆಗೆ ದೇಶವನ್ನು ಮುನ್ನಡೆಸುತ್ತಿರುವ ಶಕ್ತಿ ಯುವಕರದ್ದೇ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಮೈಸೂರಿನ ಶ್ರೀ ರಾಮಕೃಷ್ಣ ಮಠ ನಿರ್ಮಿಸಿರುವ ‘ವಿವೇಕ ಸ್ಮಾರಕ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಏಳು ಸಂಪುಟಗಳ ‘ರಾಮಾಯಣ’ ಹಾಗೂ ‘ಬದುಕು ಬೆಳಕು’ ಕೃತಿಗಳನ್ನು ಪ್ರಧಾನಿ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ನ ಸ್ವಾಮೀಜಿಗಳು, ಸಂತರನ್ನು ಮತ್ತೊಮ್ಮೆ ಭೇಟಿ ಮಾಡುವ ಅವಕಾಶ ದೊರೆತಿರುವುದು ಸಂತಸದ ಸಂಗತಿ ಎಂದು ಹೇಳಿದರು.

‘ಎಲ್ಲರಿಗೂ ನಮಸ್ಕಾರ’: ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ
ವೇದಿಕೆಯಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಯುವಜನರ ಹರ್ಷೋದ್ಘಾರಗಳ ನಡುವೆ ಪ್ರಧಾನಿಯವರು “ಎಲ್ಲರಿಗೂ ನನ್ನ ನಮಸ್ಕಾರಗಳು” ಎಂದು ಪ್ರೀತಿಯಿಂದ ಕನ್ನಡದಲ್ಲೇ ನುಡಿದು, ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಪ್ರಣಾಮ ಸಲ್ಲಿಸುವ ಮೂಲಕ ತಮ್ಮ ಭಾಷಣವನ್ನು ಪ್ರಾರಂಭಿಸಿದರು.
”ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ನ ಪೂಜ್ಯ ಸ್ವಾಮೀಜಿಗಳು, ಸಂತರು ಹಾಗೂ ಗುರುಬಂಧುಗಳನ್ನು ಭೇಟಿ ಮಾಡುವ ಸೌಭಾಗ್ಯ ನನಗೆ ಮತ್ತೊಮ್ಮೆ ಒದಗಿಬಂದಿದೆ. ನನ್ನ ವ್ಯಕ್ತಿತ್ವ ಹಾಗೂ ಸಾಧನೆಯಲ್ಲಿ ರಾಮಕೃಷ್ಣ ಮಿಷನ್ನ ಕೊಡುಗೆ ಅತ್ಯಂತ ದೊಡ್ಡದಾಗಿದೆ” ಎಂದು ಪ್ರಧಾನಿ ಭಾವನಾತ್ಮಕವಾಗಿ ಸ್ಮರಿಸಿಕೊಂಡರು.
ಮೈಸೂರಿನ ಸಾಂಸ್ಕೃತಿಕ ಪರಂಪರೆಗೆ ಮೆಚ್ಚುಗೆ
ಮೈಸೂರು ಭಾರತದ ಪ್ರಮುಖ ಸಾಂಸ್ಕೃತಿಕ ನಗರಗಳಲ್ಲಿ ಒಂದಾಗಿದ್ದು, ದಸರಾ ಮಹೋತ್ಸವ, ಸಂಗೀತ, ಸಾಹಿತ್ಯ, ಶಿಕ್ಷಣ ಹಾಗೂ ಪರಂಪರೆಯ ಮೂಲಕ ದೇಶಕ್ಕೆ ಅನನ್ಯ ಕೊಡುಗೆ ನೀಡಿದೆ. ಈ ನಗರದ ಸಾಂಸ್ಕೃತಿಕ ಶ್ರೀಮಂತಿಕೆಯ ಅವಿಭಾಜ್ಯ ಅಂಗವಾಗಿ ಶ್ರೀ ರಾಮಕೃಷ್ಣ ಆಶ್ರಮ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ವಾಮಿ ವಿವೇಕಾನಂದರೊಂದಿಗೆ ಮೈಸೂರಿನ ಅವಿನಾಭಾವ ನಂಟು
ರಾಷ್ಟ್ರಕವಿ ಕುವೆಂಪು ಅವರು ಮೈಸೂರಿನಲ್ಲಿ ಇದ್ದ ಸಮಯದಲ್ಲಿ ರಾಮಕೃಷ್ಣ ಆಶ್ರಮದೊಂದಿಗೆ ಹೊಂದಿದ್ದ ನಂಟನ್ನು ಸ್ಮರಿಸಿದ ಪ್ರಧಾನಿ, ಸಾಧನೆಯ ಹಾದಿಯಲ್ಲಿ ತಪಸ್ಸು ಮತ್ತು ಶ್ರದ್ಧೆ ಅತ್ಯಗತ್ಯ ಎಂದು ಹೇಳಿದರು. ಸ್ವಾಮಿ ವಿವೇಕಾನಂದರ ಜೀವನದಲ್ಲಿ ಮೈಸೂರಿನ ಪಾತ್ರ ವಿಶೇಷವಾಗಿದ್ದು, ಅವರು ವಿಶ್ವವಿಖ್ಯಾತರಾಗುವ ಮುನ್ನವೇ ಇಲ್ಲಿಗೆ ಭೇಟಿ ನೀಡಿದ್ದರು. ಅಮೆರಿಕ ಪ್ರವಾಸದ ಬಳಿಕ ಮೈಸೂರಿನ ಮಹಾರಾಜರಿಗೆ ಸ್ವಾಮಿ ವಿವೇಕಾನಂದರು ಪತ್ರ ಬರೆದಿದ್ದ ಸಂಗತಿಯನ್ನೂ ಪ್ರಧಾನಿ ಉಲ್ಲೇಖಿಸಿದರು.
ವಿವೇಕ ಸ್ಮಾರಕ ಪ್ರೇರಣೆಯ ಕೇಂದ್ರವಾಗಲಿ
ಸ್ವಾಮಿ ವಿವೇಕಾನಂದರು ಮಾನವಸೇವೆ ಮತ್ತು ಪರೋಪಕಾರದ ಸಂದೇಶವನ್ನು ವಿಶ್ವಕ್ಕೆ ಸಾರಿದ ಮಹಾನ್ ಸಂತರಾಗಿದ್ದಾರೆ. ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯವನ್ನು ರಾಮಕೃಷ್ಣ ಮಠ ಸಮರ್ಥವಾಗಿ ನಿರ್ವಹಿಸುತ್ತಿದೆ. ಶತಮಾನ ಪೂರೈಸಿರುವ ಈ ಆಶ್ರಮದ ಸೇವೆ ದೇಶಕ್ಕೆ ಮಾದರಿಯಾಗಿದೆ ಎಂದು ಅವರು ಹೇಳಿದರು.
ಹೊಸದಾಗಿ ನಿರ್ಮಾಣಗೊಂಡಿರುವ ವಿವೇಕ ಸ್ಮಾರಕವು ಸಾಧಕರು, ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಶ್ರದ್ಧಾಳುಗಳಿಗೆ ಆಧ್ಯಾತ್ಮಿಕ ಮತ್ತು ಪ್ರೇರಣೆಯ ಕೇಂದ್ರವಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ವಿಶ್ವದ ವೇದಿಕೆಯಲ್ಲಿ ಭಾರತದ ಯುವಶಕ್ತಿ
ಭಾರತದ ಯುವಜನತೆ ಇಂದು ವಿಶ್ವಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುತ್ತಿದ್ದಾರೆ. ಸ್ಟಾರ್ಟಪ್ ಕ್ಷೇತ್ರದಲ್ಲಿ ಭಾರತ ಜಾಗತಿಕ ಮುಂಚೂಣಿಯ ರಾಷ್ಟ್ರಗಳಲ್ಲಿ ಒಂದಾಗಿದೆ. ಮೊಬೈಲ್ ಫೋನ್ ಉತ್ಪಾದನೆಯಲ್ಲಿ ದೇಶವು ಮಹತ್ವದ ಸಾಧನೆ ಮಾಡಿದ್ದು, ಡಿಜಿಟಲ್ ಪರಿಹಾರಗಳ ಅಭಿವೃದ್ಧಿಯಲ್ಲಿ ವಿಶ್ವಕ್ಕೆ ಮಾದರಿಯಾಗಿದೆ. ಸೆಮಿಕಂಡಕ್ಟರ್ ಉತ್ಪಾದನಾ ಕ್ಷೇತ್ರದಲ್ಲೂ ಭಾರತ ವೇಗವಾಗಿ ಮುನ್ನಡೆಯುತ್ತಿದೆ. ಈ ಎಲ್ಲ ಸಾಧನೆಗಳ ಹಿಂದಿರುವ ಪ್ರಮುಖ ಶಕ್ತಿ ದೇಶದ ಯುವಜನತೆ ಎಂದು ಪ್ರಧಾನಿ ಶ್ಲಾಘಿಸಿದರು.
ಆತ್ಮನಿರ್ಭರ ಭಾರತಕ್ಕೆ ಯುವಕರೇ ಶಕ್ತಿ
ಆತ್ಮನಿರ್ಭರ ಭಾರತ ಹಾಗೂ ಮೇಕ್ ಇನ್ ಇಂಡಿಯಾ ಅಭಿಯಾನಗಳ ಯಶಸ್ಸಿನಲ್ಲಿಯೂ ಯುವಕರ ಕೊಡುಗೆ ಅಪಾರವಾಗಿದೆ ಎಂದು ಅವರು ಹೇಳಿದರು.

ಶಿಕ್ಷಣವೇ ಯುವಜನರ ಭವಿಷ್ಯದ ಅಡಿಪಾಯ
ತಮ್ಮ ವ್ಯಕ್ತಿತ್ವ ಮತ್ತು ಜೀವನದ ರೂಪುಗೊಳಿಸುವಿಕೆಯಲ್ಲಿ ರಾಮಕೃಷ್ಣ ಮಿಷನ್ನ ಪ್ರಭಾವ ಮಹತ್ತರವಾಗಿದೆ ಎಂದು ಹೇಳಿದ ಅವರು, ಯುವಜನತೆಗೆ ಸರಿಯಾದ ದಿಕ್ಕು ತೋರಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದು ಎಂದರು.
ಶಿಕ್ಷಣದಲ್ಲಿ ಆಧುನಿಕತೆ ಮತ್ತು ಹೊಸ ಅವಕಾಶಗಳು
ಕೇಂದ್ರ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ವ್ಯಾಪಕ ಸುಧಾರಣೆಗಳನ್ನು ಕೈಗೊಂಡಿದ್ದು, ಶಿಕ್ಷಣ ಮೂಲಸೌಕರ್ಯವನ್ನು ಆಧುನೀಕರಿಸಲಾಗುತ್ತಿದೆ. ದೇಶಾದ್ಯಂತ ಅಟಲ್ ಟಿಂಕರಿಂಗ್ ಲ್ಯಾಬ್ಗಳು ಸ್ಥಾಪನೆಯ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಮತ್ತು ಹೊಸತನವನ್ನು ಬೆಳೆಸಲಾಗುತ್ತಿದೆ ಎಂದು ವಿವರಿಸಿದರು.
ಮಾತೃಭಾಷೆಯ ಶಿಕ್ಷಣ ಮತ್ತು ಕ್ರೀಡೆಗೆ ಉತ್ತೇಜನ
ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಶಿಕ್ಷಣವನ್ನು ಮಾತೃಭಾಷೆಯಲ್ಲಿಯೇ ಕಲಿಯುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಕ್ರೀಡಾ ಕ್ಷೇತ್ರಕ್ಕೂ ವಿಶೇಷ ಉತ್ತೇಜನ ನೀಡಲಾಗುತ್ತಿದ್ದು, ಖೇಲೋ ಇಂಡಿಯಾ ಯೋಜನೆಯ ಮೂಲಕ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಪ್ರತಿಭಾವಂತ ಯುವಕರಿಗೆ ಉತ್ತಮ ವೇದಿಕೆ ಒದಗಿಸಲಾಗಿದೆ ಎಂದರು.

ಕರ್ನಾಟಕದ ಸಾಹಿತ್ಯ ಪರಂಪರೆಗೆ ಪ್ರಶಂಸೆ
ಕರ್ನಾಟಕವು ಕನ್ನಡ ಭಾಷೆಯ ಮೂಲಕ ಅನೇಕ ಮಹಾನ್ ಕವಿಗಳು, ಸಾಹಿತಿಗಳು ಹಾಗೂ ಚಿಂತಕರನ್ನು ದೇಶಕ್ಕೆ ನೀಡಿದೆ ಎಂದು ಪ್ರಶಂಸಿಸಿದ ಪ್ರಧಾನಿ, ವಿದ್ಯಾರ್ಥಿಗಳತ್ತ ಕೈಬೀಸುತ್ತಿದ್ದಂತೆ ಸಭಾಂಗಣದಲ್ಲಿ “ಮೋದಿ… ಮೋದಿ…” ಎಂಬ ಘೋಷಣೆಗಳು ಮೊಳಗಿದವು.
ಸ್ವಾಮಿ ವಿವೇಕಾನಂದರ ಆದರ್ಶಗಳ ಸಂದೇಶ
ಕಾರ್ಯಕ್ರಮದಲ್ಲಿ ಶ್ರೀ ರಾಮಕೃಷ್ಣ ಮಠದ ಸ್ವಾಮೀಜಿಗಳು ಯುವಜನತೆಗೆ ಮೌಲ್ಯಾಧಾರಿತ ಬದುಕಿನ ಸಂದೇಶ ನೀಡಿದರು. ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಜೀವನ, ತತ್ವಗಳು ಹಾಗೂ ರಾಷ್ಟ್ರನಿರ್ಮಾಣದಲ್ಲಿ ಅವರ ಕೊಡುಗೆಯ ಕುರಿತು ಭಾಷಣ ಮಾಡಿದರು. ಆಶ್ರಮದ ಶತಮಾನದ ಸೇವಾ ಪಯಣವನ್ನು ಬಿಂಬಿಸುವ ಕಿರುಚಿತ್ರವೂ ಪ್ರದರ್ಶಿಸಲಾಯಿತು.

ಪೂಜೆ, ಧ್ಯಾನ ಮತ್ತು ಸಸಿ ನೆಡುವ ಮೂಲಕ ಸಂದೇಶ
ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಮಿ ವಿವೇಕಾನಂದರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಕೆಲ ಕ್ಷಣ ಧ್ಯಾನ ಮಾಡಿದರು. ಆಶ್ರಮದ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ವಿವೇಕ ಸ್ಮಾರಕದಲ್ಲಿನ ವಿವಿಧ ಸೌಲಭ್ಯಗಳನ್ನು ವೀಕ್ಷಿಸಿದರು. ಬಳಿಕ ಆಶ್ರಮದ ಆವರಣದಲ್ಲಿ ಸಸಿ ನೆಟ್ಟು ನೀರೆರೆಯುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶವನ್ನೂ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶ್ರೀ ರಾಮಕೃಷ್ಣ ಮಠದ ಸ್ವಾಮೀಜಿಗಳು, ಜನಪ್ರತಿನಿಧಿಗಳು, ಶಾಸಕರು, ವಿವಿಧ ಗಣ್ಯರು, ವಿದ್ಯಾರ್ಥಿಗಳು ಹಾಗೂ ಸಾವಿರಾರು ಭಕ್ತರು ಉಪಸ್ಥಿತರಿದ್ದರು.







