ಬೆಂಗಳೂರು: ವಿಶ್ವಗುರು ಬಸವಣ್ಣರನ್ನು “ಕರ್ನಾಟಕ ಸಾಂಸ್ಕೃತಿಕ ನಾಯಕ” ಎಂದು ಘೋಷಿಸಿರುವ ವರ್ಷದ ಆಚರಣೆಯ ಅಂಗವಾಗಿ ಆಯೋಜಿಸಿದ್ದ ‘ಬಸವ ಸಂಸ್ಕೃತಿ ಅಭಿಯಾನ – 2025’ ರ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವಣ್ಣನವರ ತತ್ವ, ಸಾಮಾಜಿಕ ನ್ಯಾಯ, ಸಂವಿಧಾನ ಮೌಲ್ಯಗಳು ಮತ್ತು ಸರ್ಕಾರದ ಕ್ರಮಗಳ ಕುರಿತು ವಿಸ್ತಾರವಾಗಿ ಮಾತನಾಡಿದರು.
ಮೆಟ್ರೋಗೆ ‘ಬಸವ ಮೆಟ್ರೋ’ ಹೆಸರಿಡಲು ಶಿಫಾರಸು
ನಮ್ಮ ಮೆಟ್ರೋ ಯೋಜನೆ ಸಂಪೂರ್ಣವಾಗಿ ರಾಜ್ಯ ಸರ್ಕಾರದದೇ ಆಗಿದ್ದರೆ, ಇವತ್ತೇ ‘ಬಸವ ಮೆಟ್ರೋ’ ಎಂದು ಘೋಷಣೆ ಮಾಡುತ್ತಿದ್ದೆ. ಕೇಂದ್ರದ ಪಾಲುದಾರಿಕೆ ಇರುವ ಕಾರಣ, ಅದನ್ನು ‘ಬಸವ ಮೆಟ್ರೋ’ ಎಂದು ನಾಮಕರಣ ಮಾಡುವ ಕುರಿತು ಶಿಫಾರಸು ಕಳುಹಿಸುತ್ತೇನೆ, ಎಂದು ಸಿಎಂ ಘೋಷಿಸಿದರು.

ಜಾತಿ, ಧರ್ಮ ವೈವಿಧ್ಯದಲ್ಲೂ ಒಂದೇ ಸಮಾಜ
ಸಮಾಜದ ವರ್ಣಭೇದದ ಕುರಿತಂತೆ ಮಾತನಾಡಿದ ಅವರು, ನಮ್ಮಲ್ಲಿ ಅನೇಕ ಧರ್ಮ, ಅನೇಕ ಜಾತಿಗಳಿವೆ. ಚಾತುವರ್ಣ ವ್ಯವಸ್ಥೆಯಲ್ಲಿ ನಾಲ್ಕನೇ ಸ್ಥಾನದಲ್ಲಿ ನಾವು (ಶೂದ್ರರು) ಎಂದು ಬೇರ್ಪಡಿಸಿದರೂ, ಮೂಲತಃ ನಾವೆಲ್ಲರೂ ಒಂದೇತನ ಹೊಂದಿರುವ ಸಮಾಜದವರಾಗಿರಬೇಕು. ಬಸವಣ್ಣನವರು ಹೇಳಿದ್ದು ಇದೇ,ಎಂದು ಒತ್ತಿ ಹೇಳಿದರು.
ಬಸವಣ್ಣನ ತತ್ವ ಶಾಶ್ವತ — ಅಂದಿಗೂ ಮತ್ತು ಮುಂದಿಗೂ
ತಮ್ಮ ವೈಯಕ್ತಿಕ ನಂಬಿಕೆಯನ್ನು ಹಂಚಿಕೊಂಡ ಸಿಎಂ, ನಾನು ಬಸವಣ್ಣನವರ ಅಭಿಮಾನಿ. ಅವರ ತತ್ವದಲ್ಲಿ ನಂಬಿಕೆ ಹಾಗೂ ಬದ್ಧತೆ ಇಟ್ಟುಕೊಂಡಿದ್ದೇನೆ. ಬಸವ ತತ್ವ ಅಂದಿಗಲ್ಲ, ಇಂದಿಗಲ್ಲ—ಮುಂದೆ ಎಂದೆಂದಿಗೂ ಪ್ರಸ್ತುತ, ಎಂದರು.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನದ ದಿನವೇ ಉದಾಹರಣೆ
ಬಸವ ಜಯಂತಿಯ ದಿನವೇ ನಾನು ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಿದೆ. ಅದೇ ದಿನ ಎಲ್ಲರಿಗೂ ಬದುಕುವ ಸಮಾನ ಅವಕಾಶಗಳನ್ನು ಕಲ್ಪಿಸಲು ತೀರ್ಮಾನ ಕೈಗೊಂಡೆ. ಹತ್ತು ಹಲವು ಭಾಗ್ಯಗಳು, ಗ್ಯಾರಂಟಿ ಯೋಜನೆಗಳ ಮೂಲಕ ಎಲ್ಲಾ ಜಾತಿ-ಧರ್ಮದ ಬಡವರ ಬದುಕಿಗೆ ಬಾಗಿಲು ತೆರೆದಿದ್ದೇವೆ, ಎಂದರು.ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಕಡ್ಡಾಯ ಮಾಡಿರುವುದೂ ಇದೇ ಕಾರಣಕ್ಕೆ ಎಂದು ವಿವರಿಸಿದರು.

ಸಂವಿಧಾನ ಮತ್ತು ಶರಣ ಸಂಸ್ಕೃತಿ ಒಂದೇ ಮಾರ್ಗ
ನಾನು ಕಾನೂನು ವಿದ್ಯಾರ್ಥಿಯಾಗಿದ್ದಾಗಿನಿಂದ ಬಸವ ತತ್ವದ ಅನುಯಾಯಿ. ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಬಸವಣ್ಣನವರ ಆಶಯಗಳೇ ಮಿಂಚುತ್ತವೆ. ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವ — ಸಂವಿಧಾನದ ಮೌಲ್ಯಗಳು, ಬಸವ ತತ್ವಗಳ ಪ್ರತಿಧ್ವನಿಯೇ, ಎಂದರು.
ಜಾತಿ ರಹಿತ ಬ್ರಾತೃತ್ವ ಸಮಾಜವೇ ಬಸವಣ್ಣನವರ ಕನಸು
ಬಸವಣ್ಣನವರು ಜಾತಿ ರಹಿತ, ವರ್ಗ ರಹಿತ ಬ್ರಾತೃತ್ವದ ಸಮಾಜವನ್ನು ಕಟ್ಟಲು ಮುಂದಾಗಿದ್ದರು. ಅವರ ಸಂದೇಶ ಯಾವತ್ತಿಗೂ ಹಳೆಯದಾಗುವುದಿಲ್ಲ, ಎಂದು ಹೇಳಿದರು.

ವಚನ ವಿಶ್ವವಿದ್ಯಾಲಯ ಸ್ಥಾಪನೆಗೆ ಭರವಸೆ
ವಚನಗಳ ಅಧ್ಯಯನಕ್ಕೆ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸುವ ಬೇಡಿಕೆಯ ಬಗ್ಗೆ ಮಾತನಾಡಿದ ಸಿಎಂ, ಸರ್ಕಾರದ ಒಪ್ಪಿಗೆ ಇದೆ. ಮುಂದಿನ ವರ್ಷವೇ ವಚನ ವಿಶ್ವವಿದ್ಯಾಲಯ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು,” ಎಂದು ಘೋಷಿಸಿದರು.
ಬಸವಣ್ಣನವರ ಅನುಯಾಯಿಗಳಾದರೆ ನುಡಿಯಂತೆ ನಡೆಬೇಕು
ಬಸವಣ್ಣನವರು ನುಡಿದಂತೆ ನಡೆದರು. ನಾವೂ ನುಡಿಯಂತೆ ನಡೆದಾಗ ಮಾತ್ರ ನಿಜವಾದ ಬಸವ ಅನುಯಾಯಿ ಆಗುತ್ತೇವೆಂದು ಭಾಷಣದ ಕೊನೆಗೆ ಸಿದ್ದರಾಮಯ್ಯ ಹೇಳಿದರು.







