ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೆ “ಉತ್ತರಾಧಿಕಾರಿ” ಚರ್ಚೆ ತೀವ್ರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ಭೇಟಿಯ ಕುರಿತು ಬೆಳಗಾವಿಯಲ್ಲಿ ಮಾತನಾಡಿದ್ದಂತೆಯೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ ತಕ್ಷಣ ದೆಹಲಿಗೆ ತೆರಳಿದ್ದು, ಅಲ್ಲಿ ಕಾಂಗ್ರೆಸ್ ಹೈಕಮಾಂಡ್ ಭೇಟಿಗೆ ಕಾದು ಕುಳಿತಿದ್ದಾರೆ.
ರಾಜ್ಯ ಸಂಪುಟ ಪುನರ್ರಚನೆ, ಭವಿಷ್ಯದಲ್ಲಿ ನಾಯಕತ್ವ ಬದಲಾವಣೆ ಮತ್ತು ಸಿದ್ದರಾಮಯ್ಯ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆ ಪಕ್ಷದ ಒಳ ವಲಯದಲ್ಲಿಯೂ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಡಿ.ಕೆ. ಶಿವಕುಮಾರ್ ಪರವಾಗಿ ಸ್ಪಷ್ಟವಾಗಿ ಧ್ವನಿ ಎತ್ತಿದ್ದಾರೆ.

“ಕಾಂಗ್ರೆಸ್ನಲ್ಲಿ ಎಲ್ಲ ತೀರ್ಮಾನಗಳನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಬಿಹಾರದಲ್ಲಿ ಚುನಾವಣೆ ನಡೆಯುತ್ತಿದೆ, ಅದು ಮುಗಿದ ಬಳಿಕ ಕರ್ನಾಟಕದ ವಿಷಯದಲ್ಲಿ ಹೈಕಮಾಂಡ್ ವಿಶ್ಲೇಷಣೆ ಮಾಡುತ್ತದೆ. ಅಗತ್ಯವಿದ್ದರೆ ಅವರು ಬದಲಾವಣೆ ಮಾಡುತ್ತಾರೆ,” ಎಂದು ಹೇಳಿದ್ದಾರೆ.
ಅವರು ಮುಂದುವರಿಸಿ, “ಡಿ.ಕೆ. ಶಿವಕುಮಾರ್ ಬಗ್ಗೆ ಮಾತನಾಡುವುದು ನನ್ನ ಸಾಮರ್ಥ್ಯಕ್ಕೆ ಮೀರಿ. ಅವರು ನಮ್ಮ ನಾಯಕರು, ಪಕ್ಷದ ಅಧ್ಯಕ್ಷರು, ಹಾಗೂ ಸಮರ್ಥ ವ್ಯಕ್ತಿ. ಇಂದಿನ ಪರಿಸ್ಥಿತಿಯಲ್ಲಿ ಶಿವಕುಮಾರ್ ಅವರಿಗೆ ಸಮಾನರಾದವರು ಯಾರಿದ್ದಾರೆ? ಅವರಲ್ಲಿ ಅಪಾರ ಸಾಮರ್ಥ್ಯವಿದೆ,” ಎಂದು ಡಾ. ಪರಮೇಶ್ವರ್ ಪ್ರಶಂಸಿಸಿದ್ದಾರೆ.
ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳಿಂದ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆಯ ಕುರಿತು ಹೊಸ ಚರ್ಚೆಗಳು ಮೂಡಿ ಬರಲಿವೆ ಎಂಬ ಅಂದಾಜು ವ್ಯಕ್ತವಾಗುತ್ತಿದೆ.






