ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ, ಸಮ ಸಮಾಜದ ಸಮಾಜಮುಖಿ ನಾಯಕ ಹಾಗೂ ರಾಜ್ಯದ ಅಪರೂಪದ ರಾಜಕಾರಣಿ ಶ್ರೀ ಎಸ್. ಬಂಗಾರಪ್ಪನವರ 93ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ, ಅವರ ಜನ್ಮಸ್ಥಳವಾದ ಬಂಗಾರದಮವನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆ ಐತಿಹಾಸಿಕ ಪ್ರವಾಸಿ ತಾಣವೆಂದು ಘೋಷಿಸಿರುವ ಹಿನ್ನೆಲೆಯಲ್ಲಿ, ಶಿವಮೊಗ್ಗದಲ್ಲಿ ಮತ್ತೊಂದು ಗೌರವದ ಸುದ್ದಿ ಬಂದಿದೆ.

ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆಯ ನೂರು ಅಡಿ ರಸ್ತೆಯನ್ನು ಹಾಲ್ಕುಳ ರಸ್ತೆದಿಂದ ಡಿವಿಜಿ ಸರ್ಕಲ್ವರೆಗೆ “ಶ್ರೀ ಎಸ್. ಬಂಗಾರಪ್ಪ ಮಾರ್ಗ” ಎಂದು ನಾಮಕರಣ ಮಾಡಲು ಘನ ಸರ್ಕಾರ ಆದೇಶ ಹೊರಡಿಸಿದೆ.

ಈ ಆದೇಶವನ್ನು ಅತ್ಯಂತ ತುಂಬು ಹೃದಯದಿಂದ ಸ್ವಾಗತಿಸಿರುವ ಜಿಲ್ಲಾ ಆರ್ಯ ಈಡಿಗರ ಸಂಘದ ನಿರ್ದೇಶಕರು ಹಾಗೂ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಸಂಯೋಜಕರಾದ ಜಿ.ಡಿ. ಮಂಜುನಾಥ್, ಈ ನಾಮಕರಣಕ್ಕೆ ಕಾರಣಿ ಭೂತರಾದ ಎಲ್ಲ ಸಂಘ-ಸಂಸ್ಥೆಗಳು ಹಾಗೂ ಹಿರಿಯ ಮುಖಂಡರಿಗೆ ಎಸ್. ಬಂಗಾರಪ್ಪ ವಿಚಾರವೇದಿಕೆಯ ಪರವಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.
“ಬಂಗಾರಪ್ಪನವರ ಸಮಾಜಮುಖಿ ಚಿಂತನೆ ಹಾಗೂ ಜನಪರ ಆಡಳಿತದಿಂದ ಅವರು ಎಲ್ಲ ಜನಾಂಗಗಳ ಹೃದಯದಲ್ಲಿ ಅಳಿಸಲಾಗದ ಗುರುತು ಬಿಟ್ಟಿದ್ದಾರೆ. ಈ ನಾಮಕರಣವು ಅವರ ಸ್ಮರಣೆಯನ್ನು ಶಾಶ್ವತಗೊಳಿಸುವ ಹೆಜ್ಜೆ,” ಎಂದು ಹೇಳಿದ್ದಾರೆ.






