ಬೆಂಗಳೂರು: “ನಗರದ ರಸ್ತೆ ಗುಂಡಿಗಳ ಕುರಿತು ಕೇಳಿದ್ದಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕೇಳಿ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಯವರು ಶನಿವಾರ ತೀವ್ರವಾಗಿ ಟೀಕಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಿದ್ದರಾಮಯ್ಯ ಅವರ ಹೇಳಿಕೆ ಸಂಪೂರ್ಣ ಬೇಜವಾಬ್ದಾರಿಯಾಗಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾ ಅಥವಾ ಡಿ.ಕೆ. ಶಿವಕುಮಾರ್ ಅವರಾ ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಮೂಡುತ್ತಿದೆ” ಎಂದರು.
“ರಸ್ತೆ ಗುಂಡಿ ಸಮಸ್ಯೆ ಪರಿಹರಿಸಲು ಸಿಎಂ ಸಭೆ ನಡೆಸಿ ಡೆಡ್ಲೈನ್ ನೀಡಿದ್ದರು. ಆದರೆ ಇಂದಿಗೂ ರಸ್ತೆಗಳ ಪರಿಸ್ಥಿತಿ ಯಥಾಸ್ಥಿತಿ. ಅಧಿಕಾರಿಗಳು ಸಿಎಂ ಮಾತಿಗೆ ಎಷ್ಟು ಬೆಲೆ ಕೊಡುತ್ತಾರೆಂಬುದು ಇದರಿಂದ ಸ್ಪಷ್ಟವಾಗಿದೆ,” ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಜಾತಿ ಗಣತಿಯ ಕುರಿತು ಮಾತನಾಡಿದ ಅವರು, “ಸಿದ್ದರಾಮಯ್ಯ ಅವರು ರಾಜ್ಯದ ಜನರ ಹಿತಕ್ಕಾಗಿ ಅಲ್ಲ, ತಮ್ಮ ರಾಜಕೀಯ ಉದ್ದೇಶಕ್ಕಾಗಿ ಸಮೀಕ್ಷೆ ನಡೆಸಿದ್ದಾರೆ. ಈ ಸಮೀಕ್ಷೆಯಿಂದ ಸರ್ಕಾರ ಏನನ್ನು ಸಾಧಿಸಲಿದೆ? ಎಲ್ಲಾ ಜಾತಿಗಳಲ್ಲಿಯೂ ಬಡವರು, ಅನಕ್ಷರಸ್ಥರು ಇದ್ದಾರೆ. ಮೊದಲು ಶಿಕ್ಷಣದ ಗುಣಮಟ್ಟ ಸುಧಾರಿಸುವತ್ತ ಸರ್ಕಾರ ಗಮನ ಹರಿಸಬೇಕು,” ಎಂದು ಹೇಳಿದರು.
ತ್ಯಾಜ್ಯ ವಿಲೇವಾರಿ ಕುರಿತು ಟೀಕಿಸಿದ ಅವರು, “ಸರ್ಕಾರ ವೈಜ್ಞಾನಿಕ ಕಸ ವಿಲೇವಾರಿ ಕ್ರಮ ಕೈಗೊಳ್ಳದೆ, ಮನೆಗಳ ಮುಂದೆ ಕಸ ಸುರಿಯುವ ವಿನೂತನ ಪ್ರಯೋಗ ಮಾಡುತ್ತಿದೆ. ಇದು ಜನರ ಮೇಲಿನ ಅವಮಾನ,” ಎಂದು ತರಾಟೆಗೆ ತೆಗೆದುಕೊಂಡರು.






