ಶಿಕಾರಿಪುರ: ಕೀರ್ತನೆಗಳ ಮೂಲಕ ಸಮಾಜಕ್ಕೆ ನೈತಿಕತೆ, ಸಮಾನತೆ ಮತ್ತು ಮಾನವೀಯತೆಯ ಅಮೂಲ್ಯ ಸಂದೇಶ ನೀಡಿದ ದಾಸಶ್ರೇಷ್ಠ ಭಕ್ತ ಕನಕದಾಸರ 538ನೇ ಜಯಂತಿಯನ್ನು ಶಿಕಾರಿಪುರದ ಕನಕ ಮಂಟಪ (ಕನಕ ಪಾರ್ಕ್) ನಲ್ಲಿ ಭಕ್ತಿಭಾವದಿಂದ ಅದ್ದೂರಿಯಾಗಿ ಆಚರಿಸಲಾಯಿತು.

ಈ ಕಾರ್ಯಕ್ರಮವನ್ನು ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿವಿಧ ಇಲಾಖೆಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳು ಮತ್ತು ಶಿಕಾರಿಪುರ ತಾಲೂಕು ಕುರುಬ ಸಮಾಜ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಭಾಗವಹಿಸಿ, “ಕನಕದಾಸರ ಕೀರ್ತನೆಗಳಲ್ಲಿ ಅಡಗಿರುವ ವೈಚಾರಿಕತೆ, ಸಮಾನತೆ ಮತ್ತು ಮಾನವೀಯತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು,” ಎಂದು ಹೇಳಿದರು.

ಕನ್ನಡ ಉಪನ್ಯಾಸಕರು ಹಾಗೂ ಸಮಾಜ ಚಿಂತಕರು ಸುರೇಶ್ ಎನ್. ಅವರು ಮಾತನಾಡಿ, ಕನಕದಾಸರ ಜೀವನಯಾನ, ಕೀರ್ತನೆಗಳ ಅರ್ಥಪೂರ್ಣತೆ ಹಾಗೂ ಅವರ ಸಾಂಸ್ಕೃತಿಕ ಕೊಡುಗೆಯ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಈ ಸಂದರ್ಭ ಕನಕ ಟ್ರಸ್ಟ್ ಶಿಕಾರಿಪುರದ ವತಿಯಿಂದ ಸಾರ್ವಜನಿಕರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ, ಕುರುಬ ಸಮಾಜದ ತಾಲೂಕು ಅಧ್ಯಕ್ಷ ಶ್ರೀ ಕಬ್ಬಡಿ ರಾಜಣ್ಣ, ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್, ಪುರಸಭೆ ಅಧ್ಯಕ್ಷೆ ಸುನಂದ ಮಂಜುನಾಥ್, ತಾಲೂಕು ತಹಶೀಲ್ದಾರ್ ಮಂಜುಳಾ ಶಂಕರ್ ಭಜಂತ್ರಿ ಹಾಗೂ ಇತರೆ ಗಣ್ಯರು, ಮುಖಂಡರು ಉಪಸ್ಥಿತರಿದ್ದರು.
ದಾಸಶ್ರೇಷ್ಠ ಕನಕದಾಸರು ಕೇವಲ ಭಕ್ತ ಕವಿ ಮಾತ್ರವಲ್ಲ, ಸಮಾಜ ಸುಧಾರಕರೂ ಆಗಿದ್ದರು. ಭಕ್ತಿ, ನೈತಿಕತೆ ಮತ್ತು ಮಾನವೀಯತೆಯನ್ನು ಜೀವಮೌಲ್ಯಗಳಾಗಿ ಬೋಧಿಸಿದ ಅವರು, ಸಮಾನತೆ ಮತ್ತು ಸಹೋದರತ್ವದ ಪರಿಪೂರ್ಣ ಪ್ರತೀಕವಾಗಿದ್ದರು. ತಮ್ಮ ಕೀರ್ತನೆಗಳ ಮೂಲಕ ಅಸಮಾನತೆಯ ವಿರುದ್ಧ ಧ್ವನಿ ಎತ್ತಿದ ಕನಕದಾಸರು, ದೇವರ ಭಕ್ತಿ ಎಂದರೆ ಎಲ್ಲರಿಗೂ ಸಮಾನ ಹಕ್ಕು ಎನ್ನುವ ಸಂದೇಶವನ್ನು ನೀಡಿದರು. ಅವರ ಸಾಹಿತ್ಯ ಇಂದು ಸಹ ಸಮಾಜಕ್ಕೆ ದಾರಿದೀಪವಾಗಿದ್ದು, ಭಕ್ತಿ ಮತ್ತು ಮೌಲ್ಯಗಳ ಬದುಕಿನ ಪಾಠವಾಗಿ ಮುಂದಿನ ಪೀಳಿಗೆಗಳಿಗೆ ಸ್ಫೂರ್ತಿಯಾಗುತ್ತಿದೆ.






