ನವದೆಹಲಿ: ದೆಹಲಿಯ ಪ್ರಸಿದ್ಧ ಕೆಂಪು ಕೋಟೆ (Red Fort) ಬಳಿ ಭೀಕರ ಸ್ಫೋಟ ಸಂಭವಿಸಿದ್ದು, ಇದನ್ನು ಆತ್ಮಹುತಿ ಬಾಂಬ್ ದಾಳಿ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಕಾರಿನಲ್ಲಿದ್ದ ಚಾಲಕ ಉಗ್ರ ಡಾ. ಉಮರ್ ನಬಿ (Dr. Umar Nabi) ಎಂದು ಗುರುತಿಸಲಾಗಿದ್ದು, ಆತ ಹುಂಡೈ i20 ಕಾರಿನಲ್ಲಿ ಅಮೋನಿಯಂ ನೈಟ್ರೇಟ್ ಬಳಸಿ ಸ್ಫೋಟಗೊಳಿಸಿದ ಎಂಬ ಮಾಹಿತಿ ಲಭ್ಯವಾಗಿದೆ.
ಈ ದಾಳಿಯಲ್ಲಿ ಎಂಟು ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಘಟನೆಯ ಬಳಿಕ ರಾಷ್ಟ್ರೀಯ ಭದ್ರತಾ ಪಡೆಯು ಸ್ಥಳಕ್ಕೆ ಧಾವಿಸಿದ್ದು, ಎನ್ಐಎ ಮತ್ತು ಡೆಹಲಿ ಪೊಲೀಸರು ಸಂಯುಕ್ತವಾಗಿ ತನಿಖೆ ಆರಂಭಿಸಿದ್ದಾರೆ. ಈಗಾಗಲೇ ನೂರಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಡಾ. ಉಮರ್ನ ಕುಟುಂಬದವರನ್ನೂ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಯಾರು ಈ ಡಾ. ಉಮರ್ ನಬಿ?
ತನಿಖೆ ಪ್ರಕಾರ, ಡಾ. ಉಮರ್ ಘ್ ನಬಿ ಭಟ್ ಎಂಬಾತನ ಪುತ್ರ. ಈತ 1989ರ ಫೆಬ್ರವರಿ 24ರಂದು ಜಮ್ಮು–ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಜನಿಸಿದ್ದಾನೆ. ವೈದ್ಯಕೀಯ ಶಿಕ್ಷಣ ಪಡೆದು, ಫರಿದಾಬಾದ್ನ ಅಲ್-ಫಲಾಹ್ ಮೆಡಿಕಲ್ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದ. ಉಗ್ರ ಸಂಘಟನೆಗಳೊಂದಿಗಿನ ಸಂಪರ್ಕದ ಆರೋಪ ಈಗ ದೃಢವಾಗುತ್ತಿದ್ದು, ಈತ ಡಾ. ಆದಿಲ್ ಅಹ್ಮದ್ ರಾಥರ್ ಎಂಬ ಉಗ್ರನ ಜೊತೆಗೂ ಸಂಪರ್ಕ ಹೊಂದಿದ್ದನೆಂದು ತನಿಖೆಯಿಂದ ಬಹಿರಂಗವಾಗಿದೆ.
ಟೆಲಿಗ್ರಾಂನಲ್ಲಿ ನಡೆದ ಚಾಟ್ ದಾಖಲೆಗಳು ತನಿಖಾಧಿಕಾರಿಗಳಿಗೆ ಸಿಕ್ಕಿದ್ದು, ಉಗ್ರ ಸಂಘಟನೆಗಳೊಂದಿಗೆ ಉಮರ್ ನೇರ ಸಂಪರ್ಕದಲ್ಲಿದ್ದ ಸುಳಿವು ನೀಡುತ್ತಿವೆ. ಉಮರ್ ಶ್ರೀನಗರ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಡಿ ಪದವಿ ಪಡೆದಿದ್ದ ಸಮಯದಿಂದಲೇ ಈತನ ಮೇಲೆ ನಿಗಾವಹಿಸಲಾಗುತ್ತಿತ್ತು ಎಂದು ಮೂಲಗಳು ಹೇಳಿವೆ.
ಉಗ್ರ ಸಂಪರ್ಕ – ಅಪಾರ ಪ್ರಮಾಣದ ಸ್ಫೋಟಕ ವಶ
ಪೊಲೀಸರು ತಿಳಿಸಿದಂತೆ, ಫರಿದಾಬಾದ್ನಿಂದ ಕಾರ್ಯನಿರ್ವಹಿಸುತ್ತಿದ್ದ ಒಂದು ಭಯೋತ್ಪಾದಕ ಸಂಘಟನೆಯೊಂದಿಗೆ ಉಮರ್ ನಂಟು ಹೊಂದಿದ್ದ. ಕಳೆದ ವಾರ ಫರಿದಾಬಾದ್ನಲ್ಲಿ ನಡೆದ ದಾಳಿ ವೇಳೆ 300 ಕೆಜಿ ಆರ್ಡಿಎಕ್ಸ್, ಎಕೆ–47 ಬಂದೂಕುಗಳು ಮತ್ತು ಮದ್ದುಗುಂಡುಗಳು ವಶಪಡಿಸಿಕೊಂಡಿದ್ದರು. ಅಲ್ಲಿ ಡಾ. ಆದಿಲ್ ಅಹ್ಮದ್ ರಾಥರ್ ಬಂಧನಕ್ಕೊಳಗಾದರೂ, ಡಾ. ಉಮರ್ ನಬಿ ತಲೆಮರೆಸಿಕೊಂಡಿದ್ದ.
ಸಿಸಿಟಿವಿ ಸುಳಿವು
ತನಿಖಾ ಸಂಸ್ಥೆಗಳು ಪಡೆದಿರುವ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಉಮರ್ ಬೆಳಿಗ್ಗೆ 8 ಗಂಟೆ ಸುಮಾರಿಗೆ ಬದರ್ಪುರ್ ಗಡಿಯಿಂದ ದೆಹಲಿಗೆ ಪ್ರವೇಶಿಸಿದ ಹುಂಡೈ i20 ಕಾರು ಮಧ್ಯಾಹ್ನ 3:19 ಕ್ಕೆ ಕೆಂಪು ಕೋಟೆ ಬಳಿಯ ಗೋಲ್ಡನ್ ಮಸೀದಿ ಪಾರ್ಕಿಂಗ್ ಪ್ರದೇಶಕ್ಕೆ ಬಂದಿತ್ತು. ಸಂಜೆ 6:22 ಕ್ಕೆ ಅಲ್ಲಿಂದ ಹೊರಟ ನಂತರ ಕೆಲವೇ ನಿಮಿಷಗಳಲ್ಲಿ ಭೀಕರ ಸ್ಫೋಟ ಸಂಭವಿಸಿದೆ.
ತಜ್ಞರ ವಿಶ್ಲೇಷಣೆ
ಸ್ಫೋಟದ ಸ್ಥಳದಿಂದ ಅಮೋನಿಯಂ ನೈಟ್ರೇಟ್ನ ಕುರುಹುಗಳು ಪತ್ತೆಯಾಗಿದ್ದು, ಎಫ್ಎಸ್ಎಲ್ ಲ್ಯಾಬ್ಗೆ ಮಾದರಿ ಕಳುಹಿಸಲಾಗಿದೆ. ಪ್ರಾಥಮಿಕ ವಿಶ್ಲೇಷಣೆ ಪ್ರಕಾರ ಇದು ಆತ್ಮಾಹುತಿ ಬಾಂಬ್ ದಾಳಿ ಎಂದು ಅಧಿಕಾರಿಗಳು ಶಂಕಿಸುತ್ತಿದ್ದಾರೆ.
ಈ ದಾಳಿಯ ಹಿನ್ನೆಲೆಯಲ್ಲಿ ದೆಹಲಿಯಲ್ಲಿನ ಭದ್ರತೆ ಹೆಚ್ಚಿಸಲಾಗಿದ್ದು, ಪುಲ್ವಾಮಾ ಸೇರಿದಂತೆ ಜಮ್ಮು–ಕಾಶ್ಮೀರದ ಹಲವು ಕಡೆಗಳಲ್ಲಿ ಶೋಧ ಕಾರ್ಯಾಚರಣೆ ಜೋರಾಗಿದೆ.
ದೆಹಲಿಯ ಹೃದಯ ಭಾಗದಲ್ಲಿ ನಡೆದ ಈ ಸ್ಫೋಟ ರಾಷ್ಟ್ರವ್ಯಾಪಿ ಆತಂಕ ಉಂಟುಮಾಡಿದ್ದು, ಕೇಂದ್ರ ಸರ್ಕಾರದಿಂದ ಉನ್ನತ ಮಟ್ಟದ ತನಿಖೆ ಆರಂಭವಾಗಿದೆ.






