ಮೈಸೂರು, ನವೆಂಬರ್ 11: ದೆಹಲಿಯ ಕೆಂಪುಕೋಟೆ ಬಳಿ ಸೋಮವಾರ ಸಂಜೆ ಸಂಭವಿಸಿದ ನಿಗೂಢ ಸ್ಫೋಟದಲ್ಲಿ 13 ಮಂದಿ ದುರ್ಮರಣ ಹೊಂದಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದೇಶದಲ್ಲಿ ಚುನಾವಣೆ ವೇಳೆಯಲ್ಲೇ ಇಂತಹ ಬಾಂಬ್ ಸ್ಫೋಟಗಳು ನಡೆಯುತ್ತಿರುವುದೇಕೆ ಎಂಬ ಪ್ರಶ್ನೆ ಮೂಡಿದೆ.
ನೆನ್ನೆಯ ದೆಹಲಿ ಬ್ಲಾಸ್ಟ್ ಇಂದು ನಡೆಯುತ್ತಿರುವ ಬಿಹಾರ ಚುನಾವಣೆಯ ಮೇಲೆ ಪ್ರಭಾವ ಬೀರುತ್ತದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದರು.
ಮೈಸೂರಿನ ತಮ್ಮ ನಿವಾಸದಲ್ಲಿ ಸೋಮವಾರ ನಡೆದ ಕೆಡಿಪಿ (KDP) ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಚುನಾವಣೆ ವೇಳೆಯ ಬಾಂಬ್ ಸ್ಫೋಟಗಳ ಬಗ್ಗೆ ಕೇಂದ್ರ ಸರ್ಕಾರವೇ ಸ್ಪಷ್ಟನೆ ನೀಡಬೇಕು. ತನಿಖೆ ನಡೆಸಿ ನಿಜ ಹೊರತೆಗೆದು ರಾಷ್ಟ್ರದ ಮುಂದೆ ಸತ್ಯ ಹೇಳಬೇಕಾಗಿದೆ,” ಎಂದು ಹೇಳಿದರು.
ದೆಹಲಿಯ ಬ್ಲಾಸ್ಟ್ ಬಿಹಾರ ಚುನಾವಣೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂಬ ಪತ್ರಕರ್ತರ ಪ್ರಶ್ನೆಗೆ ಅವರು, “ಅಂತಹ ಘಟನೆಗಳು ಪ್ರಭಾವ ಬೀರುವುದೋ ಇಲ್ಲವೋ ಹೇಳಲು ಈಗಾಗಲೇ ಸಾಧ್ಯವಿಲ್ಲ. ಆದರೆ ಬಾಂಬ್ ಬ್ಲಾಸ್ಟ್ಗಳು ಆಗಬಾರದು, ಅಮಾಯಕರ ಜೀವಹಾನಿ ದುಃಖದ ಸಂಗತಿ,” ಎಂದು ಅಭಿಪ್ರಾಯಪಟ್ಟರು.






